ಮೈಸೂರು: ಟಿಕೆಟ್ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಮೈಸೂರಿನ ಬಿಜೆಪಿ ಕಚೇರಿಗೆ ಆಗಮಿಸಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬಿಜೆಪಿ ಘಟಕದಿಂದ ವೀರಗಾಸೆ, ನಗಾರಿ, ನಾದ ಸ್ವಾರದ ಮೂಲಕ ಭರ್ಜರಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ಈ ವೇಳೆ ಕಚೇರಿ ದ್ವಾರದಲ್ಲಿ ಮಹಿಳಾ ಕಾರ್ಯಕರ್ತೆಯರು ಕಳಶದ ಆರತಿ ಬೆಳಗಿದರು. ನಂತರ ಯದುವೀರ್ ಅವರು ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ ಮಲ್ಲಿಗೆ ಹಾರ ಹಾಕಿ ಸ್ವಾಗತ ಕೋರಿದರು. ಬಳಿಕ ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಸಚಿವ ಎಸ್.ಎ.ರಾಮದಾಸ್ ಅವರ ನಿವಾಸಕ್ಕೆ ಭೇಟಿ ನೀಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಯದುವೀರ್ ರಾಜಕೀಯ ಎಂದ ಮೇಲೆ ಟೀಕೆ, ಟಿಪ್ಪಣಿ ಸಹಜ. ಸಾಂಬಾರ್ನಲ್ಲಿ ಮೆಣಸಿನಕಾಯಿ ಸಿಕ್ಕಂತೆ ರಾಜಕೀಯದಲ್ಲೂ ಟೀಕೆಗಳು ಬರುತ್ತವೆ. ನಾವು ಎಲ್ಲದಕ್ಕೂ ಸಿದ್ಧವಾಗಿದ್ದೇವೆ ಎಂದು ಹೇಳಿದರು.
ರಾಜಕಾರಣವೇ ದೊಡ್ಡ ಚಾಲೆಂಜ್. ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡೇ ರಾಜಕೀಯಕ್ಕೆ ಬಂದಿದ್ದೇನೆ. ಕಳೆದ ಒಂದು ವರ್ಷದಿಂದ ರಾಜಕೀಯಕ್ಕೆ ಬರುವ ಬಗ್ಗೆ ಚಿಂತಿಸಿದ್ದೆ. ನನಗೆ ಈ ಅವಕಾಶ ದೊರೆಯಲು ರಾಜಸ್ಥಾನದ ಮೂಲ, ರಾಜಸ್ಥಾನದ ಪ್ರಭಾವ ಎಂದು ಹೇಳಲಾಗುತ್ತಿದೆ. ನೈಜ್ಯವಾಗಿ ಹೇಳುವುದಾದರೆ, ಇದ್ಯಾವುದು ಇಲ್ಲ. ನನ್ನ ತಾಯಿಯ ಅನುಮತಿ ಹಾಗೂ ಆಶೀರ್ವಾದ ಪಡೆದು ಚುನಾವಣೆಗೆ ಬಂದಿದ್ದೇನೆ ಎಂದು ಹೇಳಿದರು.
ಎಸಿ ಕೊಠಡಿ ಬಿಟ್ಟು ಹೊರಬಂದು ಜನಸೇವೆ ಮಾಡುವುದಾದರೆ ಸ್ವಾಗತ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ, ಎಸಿ ಕೊಠಡಿಯಿಂದ ಹೊರ ಬರುವುದು ದೊಡ್ಡ ವಿಚಾರ ಅಲ್ಲ. ರಾಜ ಪ್ರಭುತ್ವ ಎನ್ನುವುದೆಲ್ಲ ಬೇರೆ. ಈಗ ನಾವೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಸಂವಿಧಾನದಲ್ಲಿ, ಕಾನೂನಿನಲ್ಲಿ, ದೇವರ ಮುಂದೆ ಎಲ್ಲರೂ ಒಂದೇ. ನಮ್ಮ ಕುಟುಂಬದ ವ್ಯಾಜ್ಯಗಳು ಕಾನೂನಿನ ವ್ಯಾಪ್ತಿಯಲ್ಲಿವೆ. ಅವುಗಳ ಅನುಸಾರ ಅದು ನಡೆಯುತ್ತದೆ. ಅದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದರು.
ಸಾಮಾಜಿಕ ಸಮಸ್ಯೆಗಳು ರಾಜಕಾರಣದ ಮೂಲಕ ಬಗೆಹರಿಸಲು ಸಾಧ್ಯವಾಗಿದ್ದು, ಹೀಗಾಗಿ ನಾನು ರಾಜಕಾರಣಕ್ಕೆ ಬರಲು ತೀರ್ಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಾರ್ಯ ವೈಖರಿ ಗಮನಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಎಸಿ ರೂಮಿನಿಂದ ಜನರ ಮಧ್ಯೆ ಬರುವುದು ಕಷ್ಟವೇನಿಲ್ಲ. ನಾನು ಈಗಾಗಲೇ ಜನರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಶೈಕ್ಷಣಿಕ, ಸಾಮಾಜಿಕ ಹಾಗೂ ಸೈಬರ್ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಜತೆಗೆ ರಾಜಕೀಯದಲ್ಲಿರುವ ಸವಾಲುಗಳನ್ನು ಅರಿತೇ ಬಂದಿದ್ದೇನೆ ಹೊರತು ಅವಕಾಶ ಸಿಕ್ಕಿದೆ ಎಂದು ಬಂದಿಲ್ಲ. ಪ್ರತಾಪಸಿಂಹ ಸೇರಿದಂತೆ ಹಲವರು ಈ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿ ಉತ್ತಮ ಅಡಿಪಾಯ ಹಾಕಿದ್ದಾ. ಅದನ್ನು ಮುಂದುವರಿಸುತ್ತೇನೆ ಎಂದರು.
ಈ ಸಂದರ್ಭ ಬಿಜೆಪಿ ಜಿಲಾಧಕ್ಷ ಎಲ್.ಆರ್.ಮಹದೇವಸ್ವಾಮಿ, ಬಿಜೆಪಿ ಹಿರಿಯ ಮುಖಂಡ ಮೈ.ವಿ. ರವಿಶಂಕರ್, ಮಾಜಿ ಮೇಯರ್ ಸಂದೇಶ್ ಸ್ವಾಮಿ, ನಗರ ಕಾರ್ಯದರ್ಶಿ ಎಚ್.ವಿ.ಗಿರಿಧರ್, ಮುಖಂಡರಾದ ಡಾ.ವಸಂತ್ ಕುಮಾರ್, ಜೋಗಿ ಮಂಜು ಸೇರಿದಂತೆ ಅನೇಕರು ಇದ್ದರು.