ಮೈಸೂರು: ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವರ ದರ್ಶನಕ್ಕೆ ಪ್ರತಿನಿತ್ಯವೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಹೀಗೆ ಭೇಟಿ ನೀಡುವ ಭಕ್ತರಿಗೆ ಬೇರೆ, ಬೇರೆ, ರೀತಿಯಲ್ಲಿ ಕಿರಿಕಿರಿಯಾಗುತ್ತಿದ್ದು, ಅದರಲ್ಲೂ ಶಾಸ್ತ್ರ ಹೇಳುವ ನೆಪದಲ್ಲಿ ದೇವಸ್ಥಾನದ ಮುಂದೆಯೇ ಕೆಲವು ಮಹಿಳೆಯರು ಹಿಂಸೆ ನೀಡುತ್ತಾರೆ ಎಂಬ ಆರೋಪಗಳು ಭಕ್ತರ ವಲಯದಿಂದ ಕೇಳಿ ಬರುತ್ತಿದೆ.
ಸಾಮಾನ್ಯವಾಗಿ ಪುಣ್ಯ ಕ್ಷೇತ್ರಗಳಿಗೆ ದೇವರ ದರ್ಶನ ಮಾಡಿ ಹರಕೆ, ಪೂಜೆ ಸಲ್ಲಿಸಿ ಹೋಗಲೆಂದು ಭಕ್ತರು ಬರುವುದು ಮಾಮೂಲಿ. ಆದರೆ ಇಂತಹ ಕ್ಷೇತ್ರಗಳಲ್ಲಿಯೇ ವಿವಿಧ ಕಾರಣಕ್ಕೆ ಬೇರೆ ಬೇರೆ ರೀತಿಯಲ್ಲಿ ಭಕ್ತರ ಸುಲಿಗೆಗಳು ನಡೆಯುತ್ತವೆ. ಇದು ಮಾಮೂಲಿಯಾಗಿದ್ದು, ಭಕ್ತರು ಹಿಡಿಶಾಪ ಹಾಕಿಕೊಂಡು ಹೋಗುತ್ತಾರೆಯೇ ವಿನಃ ಮತ್ತೇನು ಮಾಡುವುದಿಲ್ಲ. ಕೆಲವು ಮಹಿಳೆಯರು ಮಕ್ಕಳನ್ನು ಮುಂದಿಟ್ಟುಕೊಂಡು ಭಿಕ್ಷೆ ಬೇಡಿದರೆ, ಇನ್ನು ಕೆಲವರು ಬಳಿ ತೆರಳಿ ಶಾಸ್ತ್ರ ಹೇಳುವುದಾಗಿ ಹೇಳಿ ತೊಂದರೆ ಕೊಡುತ್ತಾರೆ ಎನ್ನುವುದು ಇಲ್ಲಿಗೆ ತೆರಳುವ ಭಕ್ತರು ಮಾಡುತ್ತಿರುವ ಆರೋಪ.
ಭಕ್ತರನ್ನೇ ಟಾರ್ಗೆಟ್ ಮಾಡುವ ಕೆಲವರು ಶಾಸ್ತ್ರ ಹೇಳುವುದಾಗಿ ದೇವರ ಫೋಟೋ ತೋರಿಸುತ್ತಾರೆ. ಇದಕ್ಕೆ ನಮಸ್ಕರಿಸಿ ತಾಯಿ ನಿಮಗೆ ಒಳ್ಳೆಯದು ಮಾಡುತ್ತಾಳೆ ಎನ್ನುತ್ತಾರೆ. ಅವರು ಹೇಳಿದಂತೆ ಮಾಡುತ್ತಾ ಹೋಗುವ ಭಕ್ತರಿಂದ ಮಾತಿನಿಂದಲೇ ಅದಕ್ಕೆ ಇದಕ್ಕೆ ಎನ್ನುತ್ತಾ ಹಣ ಕೀಳುತ್ತಾರೆ. ಶಾಸ್ತ್ರ ಹೇಳುತ್ತಾ ನಿಮಗೆ ಗಂಡಾಂತರವಿದೆ. ಇದರ ಪರಿಹಾರಕ್ಕೆ ಐನೂರು, ಸಾವಿರವಾಗುತ್ತದೆ. ಕೊಡಿ ಎಂದು ಪೀಡಿಸುತ್ತಾರೆ. ಭಕ್ತರಿಗೆ ನಾವು ಮೋಸ ಹೋಗುತ್ತಿದ್ದೇವೆ ಎನ್ನುವುದು ಗೊತ್ತಾಗುವ ವೇಳೆಗೆ ಜೇಬಿನಲ್ಲಿದ್ದ ಕಾಸು ಖಾಲಿಯಾಗಿರುತ್ತದೆ.
ದೇವಸ್ಥಾನದ ಆಸುಪಾಸಿನಲ್ಲಿ ಇಂತಹದಕ್ಕೆ ಅವಕಾಶ ಕೊಡಬೇಡಿ ಎನ್ನುವುದು ನೊಂದವರ ಕಳಕಳಿಯಾಗಿದೆ. ಈ ಬಗ್ಗೆ ಇಲ್ಲಿವರೆಗೆ ದೇವಸ್ಥಾನದ ಆಡಳಿತ ಮಂಡಳಿಯಾಗಲಿ, ಕಾವಲುಗಾರರಾಗಲಿ ಯಾರೂ ಅವರನ್ನು ವಿಚಾರಿಸುವುದಾಗಲಿ ಅಥವಾ ಹೊರಗಡೆ ಕಳಿಸುವುದಾಗಲಿ ಮಾಡುತ್ತಿಲ್ಲ.
ಇದೆಲ್ಲವೂ ದೇವಸ್ಥಾನದ ಮುಂಭಾಗವೇ ನಡೆಯುತ್ತಿದ್ದು, ದೂರದಿಂದ ಬರುವ ಕೆಲವು ಭಕ್ತರಿಗೆ ಇದರ ಮರ್ಮ ಅರ್ಥವೇ ಆಗುವುದಿಲ್ಲ. ಶಾಸ್ತ್ರ ಹೇಳುತ್ತೇವೆ ಎನ್ನುವ ಮಹಿಳೆಯರ ಮಾತಿಗೆ ಮರುಳಾಗಿ ಅವರು ಹೇಳಿದಂತೆ ಕೇಳಿ ಮೋಸ ಹೋಗುತ್ತಿದ್ದಾರೆ. ಇಷ್ಟೇ ಅಲ್ಲದೆ, ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಶೌಚಾಲಯದ ಕೊರತೆ, ಅಶುಚಿತ್ವ ಹೀಗೆ ಹತ್ತಾರು ಸಮಸ್ಯೆಗಳು ಇಲ್ಲಿದ್ದು, ಎಲ್ಲದತ್ತ ಸಂಬಂಧಿಸಿದವರು ಗಮನಹರಿಸಿ ಭಕ್ತರಿಗೆ ಆಗುತ್ತಿರುವ ಕಿರಿ ಕಿರಿಯನ್ನು ತಡೆಯುವ ಕೆಲಸವನ್ನು ಮಾಡಬೇಕಾಗಿದೆ.