ಮೈಸೂರು: ದೇಶದ ಸ್ವಾತಂತ್ರ್ಯಕ್ಕೆ ಜೆಡಿಎಸ್ ಕೊಡುಗೆ ಏನು ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಶಾಸಕ ಸಾ.ರಾ ಮಹೇಶ್ ತಿರುಗೇಟು ನೀಡಿದ್ದು, ದೇಶದ ಸ್ವಾತಂತ್ರ್ಯಕ್ಕೆ ನಿಮ್ಮ ಕೊಡುಗೆ ಏನು? ಸ್ವಾತಂತ್ರ್ಯ ಚಳವಳಿಯಲ್ಲಿ ನೀವೇನಾದರು ಭಾಗಿಯಾಗಿದ್ರಾ? ನಿಮ್ಮ ಕೊಡುಗೆ ಬಗ್ಗೆ ಏನಾದರೂ ಪುಸ್ತಕ ಬರೆದಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ನಲ್ಲಿದ್ದಾಗ ಹಣಕಾಸು ಸಚಿವರಾಗಿ ಏಳು ಬಾರಿ ಬಜೆಟ್ ಮಂಡಿಸಿದ್ರಿ, ಡಿಸಿಎಂ ಆಗಿದ್ರೀ. ಮೈಸೂರು ಜಿಲ್ಲೆಗೆ ನಿಮ್ಮ ಕೊಡುಗೆ ಏನು ಸಿದ್ದರಾಮಯ್ಯನವರೇ? ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೋಟೆಲ್ನಲ್ಲಿದ್ದುಕೊಂಡು ಆಡಳಿತ ನಡೆಸುತ್ತಿದ್ದರು ಎಂದು ಟೀಕಿಸಿರುವ ಸಚಿವ ಡಾ.ಅಶ್ವಥ್ ನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಿಎಂ ಅಧಿಕೃತ ನಿವಾಸ ಖಾಲಿ ಇರಲಿಲ್ಲ. ಹಾಗಾಗಿ ಕುಮಾರಸ್ವಾಮಿ ಮಧ್ಯಾಹ್ನದ ವೇಳೆ ವಿಧಾನಸೌಧಕ್ಕೆ ಸನಿಹದಲ್ಲಿದ್ದ ಖಾಸಗಿ ಹೋಟೆಲ್ನಲ್ಲಿ ಊಟಕ್ಕೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದರು. ಆಡಳಿತದ ಹಿತ ದೃಷ್ಟಿಯಿಂದ ಕುಮಾರಸ್ವಾಮಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆದರೆ, ಇದೇ ವಿಚಾರ ಮುಂದಿಟ್ಟುಕೊಂಡು ಸಚಿವ ಅಶ್ವಥ್ ನಾರಾಯಣ್ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಹಾಗಾದರೆ ನಿಮ್ಮ ಪಕ್ಷದ ಮುಖಂಡರುಗಳೇನು ಗುಡಿಸಲಿನಲ್ಲಿ ಇದ್ದಾರಾ ಎಂದು ಪ್ರಶ್ನಿಸಿದರು.
ಅಶ್ವಥ್ ನಾರಾಯಣ ಒಳ್ಳೆಯ ಸ್ನೇಹಿತ. ನಾನೂ ಬಿಜೆಪಿಯಲ್ಲಿ ಇದ್ದವನು. ರಾಜ್ಯ, ರಾಷ್ಟ್ರೀಯ ನಾಯಕರು ಬಂದರೂ ಕಾರ್ಯಕರ್ತನ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ನಮ್ಮದು ಸಮ್ಮಿಶ್ರ ಸರ್ಕಾರ ಇತ್ತು. ಆಗಿನ ಮಾಜಿ ಮುಖ್ಯಮಂತ್ರಿ ಮನೆ ಖಾಲಿ ಮಾಡಿರಲಿಲ್ಲ. ಕುಮಾರಸ್ವಾಮಿ ಅವರ ಮನೆ ಜೆ.ಪಿ.ನಗರದಲ್ಲಿದೆ. ಆದ್ದರಿಂದ ಕುಮಾರಸ್ವಾಮಿ ಹೋಟೆಲ್ನಲ್ಲಿದ್ದರು. ನಮ್ಮಲ್ಲೂ ಮಾತನಾಡುವವರು ಇದ್ದಾರೆ. ದೇವೇಗೌಡರು ಇತಿಮಿತಿಯಲ್ಲಿ ಮಾತನಾಡಿ ಎಂದು ಹೇಳಿದ್ದಾರೆ ಅಶ್ವತ್ಥ ನಾರಾಯಣ್ ನನಗೆ ಒಳ್ಳೆಯ ಸ್ನೇಹಿತನಾಗಿದ್ದು, ಈ ರೀತಿ ಮಾತನಾಡದಂತೆ ತಿಳಿಸಿದ್ದೇನೆ ಎಂದರು.
ಒಕ್ಕಲಿಗ ಸಮಾಜದ ದೊಡ್ಡ ಲೀಡರ್ ಆಗಬೇಕೆಂದುಕೊಂಡು ಸಚಿವ ಅಶ್ವಥ್ ನಾರಾಯಣ್ ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಆದರೆ ಇದು ಸಾಧ್ಯವಾಗುವುದಿಲ್ಲ. ಕುಮಾರಸ್ವಾಮಿ ಒಕ್ಕಲಿಗ ಸಮುದಾಯ ಮಾತ್ರವಲ್ಲದೇ ಎಲ್ಲಾ ಸಮುದಾಯಗಳಿಗೂ ನಾಯಕ. ಕುಮಾರಸ್ವಾಮಿ ಟೀಕಿಸಿದರೆ ದೊಡ್ಡ ನಾಯಕನಾಗುತ್ತೇನೆ, ಸಚಿವ ಆರ್.ಅಶೋಕ್ಗೆ ಪರ್ಯಾಯವಾಗಿ ನಾಯಕನಾಗುವ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದರು.
ಮೈತ್ರಿ ಸರ್ಕಾರ ಬೀಳಲು ಕಾಂಗ್ರೆಸ್ ನಾಯಕರು ಎಷ್ಟು ಕಾರಣವೋ ನಿಮ್ಮದೂ ಅಷ್ಟೇ ಪಾತ್ರವಿದೆ. ರಾಜಕಾರಣದಲ್ಲಿ ನೂರಕ್ಕೆ ನೂರು ಯಾರೂ ಸರಿ ಇಲ್ಲ. ನನ್ನನ್ನೂ ಸೇರಿದಂತೆ ಯಾರೂ ಸರಿಯಿಲ್ಲ. ಕುಮಾರಸ್ವಾಮಿ ಏನು, ಅಶ್ವತ್ಥ ನಾರಾಯಣ ಏನು ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಎರಡೂ ರಾಷ್ಟ್ರೀಯ ಪಕ್ಷದವರು ಪ್ರಾದೇಶಿಕ ಪಕ್ಷ ಇರಬಾರದು ಎಂದು ಏನೇನು ಮಾಡಿದ್ದೀರಿ ಎನ್ನುವುದೂ ಗೊತ್ತಿದೆ ಎಂದರು.
ಗೋಷ್ಠಿಯಲ್ಲಿ ಎಂಎಲ್ಸಿ ಸಿ.ಎನ್.ಮಂಜೇಗೌಡ, ಮಾಜಿ ಮೇಯರ್ ಆರ್.ಲಿಂಗಪ್ಪ, ಪಾಲಿಕೆ ಸದಸ್ಯೆ ಪ್ರೇಮಾ ಶಂಕರೇಗೌಡ ಸೇರಿದಂತೆ ಹಲವರು ಇದ್ದರು.