ಮೈಸೂರು: ಮಣ್ಣಿಗೂ ಮತ್ತು ಮನುಷ್ಯನಿಗೂ ಮಹತ್ವವಾದ ಸಂಬಂಧವಿದ್ದು, ರಾಜ್ಯದ ಅನ್ನದಾತರ ಬದುಕಿನಲ್ಲಿ ಆರೋಗ್ಯ ಮತ್ತು ಸಂಪತ್ತು ವೃದ್ಧಿಸಲಿ ಎಂದು ನಂಜನಗೂಡಿನ ನಂಜುಡೇಶ್ವರನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುತ್ತಿರುವುದಾಗಿ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಅಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ ಹೇಳಿದರು.
ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘ ಸ್ಥಾಪನೆಗೊಂಡು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ದಕ್ಷಿಣ ಕಾಶಿ ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಣ್ಣಿಗೂ ಪೂಜೆ ಸಲ್ಲಿಸುವ ಮುಖಾಂತರ ಮಣ್ಣಿನ ರಕ್ಷಣೆಯ ಪುಣ್ಯ ಕಾಯಕಕ್ಕೆ ಸಂಕಲ್ಪ ತೊಟ್ಟು ಅವರು ಮಾತನಾಡಿದರು.
ಸಂಘ ಸ್ಥಾಪನೆಗೊಂಡ ದಿನದಿಂದಲೇ ಮಣ್ಣಿನ ಮಹತ್ವ ಹಾಗೂ ಸಂರಕ್ಷಣೆ ಕುರಿತು ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ. ರಾಸಾಯನಿಕ ಬಳಕೆ ತ್ಯಜಿಸಿ, ಸಾಂಪ್ರದಾಯಕ ಕೃಷಿಗೆ ಮಹತ್ವ ನೀಡುವಂತೆ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ಅನ್ನದಾತರ ಮನವೊಲಿಸಲಾಗುತ್ತಿದೆ. ಇದಕ್ಕೆ ರೈತರಿಂದಲೂ ಉತ್ತಮ ಸ್ಪಂದನೆ ದೊರಕುತ್ತಿದ್ದು, ಇದರ ಜೊತೆಗೆ ರೈತ ಕಲ್ಯಾಣ ಸಂಘದ ವತಿಯಿಂದ ಮುಂಬರುವ ದಿನಗಳಲ್ಲಿ ರೈತರಿಗಾಗಿ, ರೈತರಿಗೋಸ್ಕರ ವಿವಿಧ ಯೋಜನೆಗಳನ್ನು ನೀಡುವ ಮುಖಾಂತರ ಈ ನಾಡಿನ ಮಣ್ಣನ್ನು ಉಳಿಸುವುದರ ಜೊತೆಗೆ ರೈತರನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತರುವಲ್ಲಿ ಶ್ರಮಿಸುವುದಾಗಿ ಇದೇ ವೇಳೆ ಚಂದನ್ಗೌಡ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ರೈತ ವರ್ಗದವರು ಉಪಸ್ಥಿತರಿದ್ದರು.