ಮೈಸೂರು: ಪಿಜಿ ನಡೆಸುತ್ತಿದ್ದ ಮಹಿಳೆಯೊಬ್ಬರು ಸಾಲಗಾರರ ಕಾಟಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ರೈಲ್ವೆ ಬಡಾವಣೆಯಲ್ಲಿ ನಡೆದಿದೆ.
ವಿಜಯನಗರದಲ್ಲಿ ಪಿಜಿ ನಡೆಸುತ್ತಿದ್ದ ಜಯಶ್ರೀ ಎಂಬುವರೇ ಆತ್ಮಹತ್ಯೆಗೆ ಶರಣಾದ ಮಹಿಳೆ. ಈಕೆ ಕಳೆದ ಹತ್ತು ವರ್ಷದಿಂದ ಗಂಗಾಧರೇಶ್ವರ ಪಿಜಿ ನಡೆಸುತ್ತಿದ್ದರು. ಪಿಜಿ ನಡೆಸಲು ಇವರು ಸಾಲ ಮಾಡಿಕೊಂಡಿದ್ದರಾದರೂ ಹೆಚ್ಚಿನ ಆದಾಯ ಬಾರದ ಕಾರಣದಿಂದಾಗಿ ಪಿಜಿ ನಡೆಸುವುದು ಕಷ್ಟವಾಗಿತ್ತು. ಹೀಗಾಗಿ ಬೇರೆ ಬೇರೆ ಕಡೆಯಿಂದ ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.
ಇನ್ನು ಸಮಯಕ್ಕೆ ಸರಿಯಾಗಿ ಸಾಲ ಹಿಂದಿರುಗಿಸಲು ಜಯಶ್ರೀ ವಿಫಲರಾಗಿದ್ದರು. ಹೀಗಾಗಿ ಸಾಲ ಹೆಚ್ಚಾಗುತ್ತಾ ಹೋಗಿತ್ತಲ್ಲದೆ, ಸಾಲ ನೀಡಿದವರು ಪಿಜಿ ಬಳಿ ಬಂದು ಗಲಾಟೆ ಮಾಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಜಯಶ್ರೀ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಡೆತ್ ನೋಟ್ ನಲ್ಲಿ ಮಗ ಭರತ್ ಗೆ ತಮ್ಮ ನೋವನ್ನ ತಿಳಿಸಿದ್ದಾರೆ.
ನಾನು ನನ್ನ ಮಕ್ಕಳಿಗೆ ಒಳ್ಳೆ ತಾಯಿ ಆಗಲಿಲ್ಲ, ಸಾಲದ ತಾಯಿ ಆದೆ, ಸಾಲಗಾರರಿಗೆ ಬಡ್ಡಿ ತಿನ್ನಿಸಿದ್ದೇನೆ. ಸಾಲಗಾರರು ಪಿಜಿ ಮುಂದೆ ಬಂದು ಮರ್ಯಾದೆ ತೆಗೆದಿದ್ದಾರೆ. ಸಾಲ ತೀರಿಸದಿದ್ದಲ್ಲಿ ಸಾಯುವುದೇ ಲೇಸು ಎಂದು ಕಿರುಚಾಡಿದ್ದಾರೆಂದು ಆರೋಪಿಸಿ 12 ಮಂದಿಯನ್ನ ಉಲ್ಲೇಖಿಸಿದ್ದಾರೆ.
ಸಾವಿತ್ರಿ, ಸುಕನ್ಯ, ಪ್ರೇಮಾ, ದೇವಮ್ಮ, ಸಾಕಮ್ಮ, ಪುಷ್ಪಲತಾ, ಪುಷ್ಪ, ಸುಮ, ಶೋಭಾ, ವಿಜಯ, ಫೈನಾನ್ಸ್ ಮಾಲೀಕ ಪ್ರದೀಪ್ ಹಾಗೂ ಕುಮಾರ್ ಎಂಬುವರು ಕಿರುಕುಳ ನೀಡುತ್ತಿದ್ದಾರೆಂದು ಮೃತ ಜಯಶ್ರೀ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವ ಹಿನ್ನಲೆಯಲ್ಲಿ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821