ಮೈಸೂರು: ಇಸ್ಕಾನ್ ದೇವಸ್ಥಾನದ ಶ್ರೀ ಕೃಷ್ಣ ಬಲರಾಮ ರಥಯಾತ್ರೆ ಶನಿವಾರ ಸಂಜೆ ಅದ್ದೂರಿಯಾಗಿ ನಡೆಯಿತು. ರಥಯಾತ್ರೆಯಲ್ಲಿ ಅನೇಕ ಸಾಂಸ್ಕೃತಿಕ ಆಕರ್ಷಣೆಗಳು, ಮಂಗಳವಾದ್ಯ ಸಹಿತ ಇಸ್ಕಾನ್ ಭಕ್ತರಿಂದ ಸಂಕೀರ್ತನೆ ನಡೆಯಿತು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಆರಂಭಗೊಂಡ ರಥಯಾತ್ರೆ ದೇವರಾಜ ಅರಸು ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ನ್ಯೂ ಕಾಂತರಾಜ್ ಅರಸು ರಸ್ತೆ, ಜಯನಗರ 2ನೇ ಮುಖ್ಯರಸ್ತೆಯ ಮೂಲಕ ಇಸ್ಕಾನ್ ದೇವಸ್ಥಾನ ತಲುಪಿತು. ಶ್ರೀಕೃಷ್ಣ ಬಲರಾಮರ ವಿಗ್ರಹವನ್ನು ಕೂರಿಸಿರುವ 35 ಅಡಿ ಎತ್ತರದ ರಥದ ಹಿಂದೆ ನೂರಾರು ಭಕ್ತರು ಸಾಗಿದರು. ರಥೋತ್ಸವದುದ್ದಕ್ಕೂ ಶ್ರೀ ಕೃಷ್ಣ ಬಲರಾಮರಗೆ ಜೈಕಾರ ಮೊಳಗಿದವು.
ಇದಕ್ಕೂ ಮುನ್ನ ಚೆನ್ನೈಇಸ್ಕಾನ್ ಅಧ್ಯಕ್ಷ ಸ್ತೋಕ ಕೃಷ್ಣಸ್ವಾಮಿ ಸಾನಿಧ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಶ್ರೀವತ್ಸ, ಮಾಜಿ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್, ಮಾಜಿ ಶಾಸಕರಾದ ಎನ್.ಮಹೇಶ್, ಎಲ್.ನಾಗೇಂದ್ರ ರಥಯಾತ್ರೆಗೆ ಚಾಲನೆ ನೀಡಿದರು.
ಬಿ.ವೈ.ವಿಜಯೇಂದ್ರ ಮಾತನಾಡಿ, ಮೈಸೂರಿನಲ್ಲಿ ಇಸ್ಕಾನ್ ವತಿಯಿಂದ ಪ್ರತಿ ವರ್ಷ ಅತ್ಯಂತ ಉತ್ಸಾಹದಿಂದ ಶ್ರೀಕೃಷ್ಣ ಬಲರಾಮ ರಥೋತ್ಸವ ನಡೆಯುತ್ತದೆ. ಇದು ಒಂದು ರೀತಿಯ ಸಂತೋಷದ ಮೆರವಣಿಗೆಯೂ ಹೌದು. ಇಡೀ ನಗರದಲ್ಲಿ ಈ ರಥೋತ್ಸವ ಆಧ್ಯಾತ್ಮಿಕ ವಾತಾವರಣ ಸೃಷ್ಟಿ ಮಾಡುತ್ತದೆ. ಇದು ಸಂತೋಷ ಮತ್ತು ಭಕ್ತಿಯ ಸಂಕೇತವೂ ಆಗಿದೆ. ಎಲ್ಲರಲ್ಲೂ ಆಧ್ಯಾತ್ಮಿಕ ಮೌಲ್ಯ ಸೃಷ್ಟಿಸುವ ಈ ರಥಯಾತ್ರೆ ಯಶಸ್ವಿಯಾಗಿಲಿ. ರಥೋತ್ಸವ ಜನಸಾಮಾನ್ಯರೆಲ್ಲರಲ್ಲೂ ಭಕ್ತಿ ಭಾವ ಮೂಡಿಸಲಿ ಎಂದು ತಿಳಿಸಿದರು.
ಶಾಸಕ ಶ್ರೀವತ್ಸ ಮಾತನಾಡಿ, ಈ ಒಂದು ಸುಂದರ ಸಂಜೆಯ ಕಾರ್ಯಕ್ರಮದಲ್ಲಿ ಅಪಾರ ಭಕ್ತರು ಸೇರಿದ್ದೀರಿ. ಆ ಮೂಲಕ ಈ ರಥೋತ್ಸವಕ್ಕೆ ಕಳೆ ನೀಡಿದ್ದೀರಿ ಎಂದರು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಸ್ಕಾನ್ ದೇವಸ್ಥಾನ ನಿರ್ಮಾಣವಾದ ಮೇಲೆ ಈ ಭಾಗದ ಜನರಿಗೆ ಉತ್ತಮ ರೀತಿಯ ಪ್ರಭಾವ ಬೀರಿದೆ ಎಂದರು.