ಮೈಸೂರು: ಸಾವಿರಾರು ಭಕ್ತರ ಜಯಘೋಷ, ವಿವಿಧ ಸಾಂಸ್ಕೃತಿಕ ಕಲಾತಂಡಗಳ ನಡುವೆ ನೆರೆದ ಭಕ್ತಸಾಗರದ ನಡುವೆ ಸುತ್ತೂರಿನಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವ ಅದ್ಧೂರಿಯಾಗಿ ನೆರವೇರಿತು.
ಬೆಳಗ್ಗೆ 4ಕ್ಕೆ ಕರ್ತೃ ಗದ್ದುಗೆ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. 6 ಗಂಟೆಗೆ ಮಠದ ಗುರು ಪರಂಪರೆಯ ಸಂಸ್ಮರಣೋತ್ಸವ ಹಾಗೂ ಗದ್ದುಗೆಗೆ ರುದ್ರಾಭಿಷೇಕ ನೆರವೇರಿಸಲಾಯಿತು. ಬೆಳಗ್ಗೆ 9ಕ್ಕೆ ಉತ್ಸವ ಮೂರ್ತಿಗೆ ರಾಜೋಪಚಾರ ನಡೆಯಿತು. 10.30ಕ್ಕೆ ಗಂಟೆಗೆ ಶಿವಯೋಗಿಗಳ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಅರ್ಚಕರು ಪೂಜಾ ವಿಧಿವಿಧಾನ ಪೂರೈಸಿದರು. ಬೆಳಗ್ಗೆ 10.55ಕ್ಕೆ ಗೋವಾ ರಾಜ್ಯಪಾಲ ಶ್ರೀಧರ್ ಪಿಳ್ಳೈ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವ ಮಂಕಾಳ ಎಸ್.ವೈದ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮುರುಗೇಶ್ ನಿರಾಣಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ರಥದ ಮಿಣಿ ಎಳೆದು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ 21 ಕುಶಾಲತೋಪುಗಳು ಸಿಡಿದವು. ಈ ವೇಳೆ ಸಾವಿರಾರು ಭಕ್ತರು ರಥದ ಬೃಹತ್ ಮಿಣಿಯನ್ನು ಎಳೆದು ಹರಕೆ ತೀರಿಸಿದರು. ರಥಕ್ಕೆ ಹಣ್ಣು-ಜವನ ಎಸೆದು ನಮಿಸಿದರು. ಹರಕೆ ಕಾರ್ಯ ನೆರವೇರಿಸಿದ ಸಂತೃಪ್ತಿ ಅವರಲ್ಲಿ ಮೂಡಿತ್ತು.
ರಥದ ಮಿಣಿಯನ್ನು ಹಿಡಿದ ಭಕ್ತರು ಮಠದ ಗುರು ಪರಂಪರೆಗೆ ಜಯಕಾರ ಹಾಕುತ್ತಾ ಎಳೆಯುತ್ತಿದ್ದರೆ ರಾಜಠೀವಿಯಲ್ಲಿ ರಥ ಸಾಗಿತು. ಜಾನಪದ ಕಲಾತಂಡಗಳೊಂದಿಗೆ ತಮಟೆ, ನಗಾರಿ ವಾದ್ಯಗಳ ನಾದದಲ್ಲಿ ಪುಷ್ಪಾಲಂಕೃತ ರಥ ಸಾಗಿ ಬರುತ್ತಿದ್ದರೆ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ ಸಾವಿರಾರು ಮಂದಿ ಭಕ್ತರು ಕೈ ಮುಗಿದು ನಮಿಸಿದರು. ಸುತ್ತೂರು ಮೂಲಮಠದವರೆಗೂ ಭಕ್ತರು ರಥದೊಂದಿಗೆ ಹೆಜ್ಜೆ ಹಾಕಿದರು. ದೊಡ್ಡಮ್ಮತಾಯಿ ದೇವಸ್ಥಾನದ ವೃತ್ತ ಬಳಸಿ ಕತೃಗದ್ದುಗೆಗೆ ಮರಳಿತು.
ರಥೋತ್ಸವದ ಮೆರವಣಿಗೆಯಲ್ಲಿ ಸಾಗಿದ 35 ಕಲಾತಂಡಗಳು ಶಿಸ್ತಿನಲ್ಲಿ ಹೆಜ್ಜೆ ಹಾಕಿದರೆ, ನಂದಿಧ್ವಜ ಕುಣಿತ ರಥದ ಮುಂಭಾಗವಿತ್ತು. ನಗಾರಿಯ ಸದ್ದಿಗೆ ಕಂಬದ ಗೆಜ್ಜೆಗಳನ್ನು ಝಲ್ಲೆನೆಸುತ್ತಾ ಹೆಜ್ಜೆ ಹಾಕಿದ ಕಲಾವಿದರು, ರಥೋತ್ಸವದ ಮೆರವಣಿಗೆಗೆ ಮುನ್ನುಡಿ ಬರೆದರು. ವೀರಭದ್ರನ ವೇಷದಲ್ಲಿದ್ದ ಗಂಗವಾಡಿ ಶಿವರುದ್ರಸ್ವಾಮಿ, ನಾಗಮಂಗಲದ ಮಹದೇವಪ್ಪ, ಕಿರಾಳು ಮಹೇಶ್ ನೇತೃತ್ವದ ಲಿಂಗಧೀರರು ಗಮನ ಸೆಳೆದರು. ನಾದಸ್ವರದಲ್ಲಿ ನವಿಲೂರಿನ ಚಿಕ್ಕಣ್ಣ ನೇತೃತ್ವದಲ್ಲಿ ೫ ಮಂದಿ ಕಲಾವಿದರು ಭಾಗಿಯಾದರು.
ರಾಜ್ಯದ ಜಾನಪದ ಕಲಾತಂಡಗಳಲ್ಲದೇ ಮಹಾರಾಷ್ಟ್ರದ ಎಂ.ಆರ್.ಪಾಟೀಲ ತಂಡದ ಜಾನಪಥಕ್, ತಮಿಳುನಾಡಿನ ಮುರುಗನ್ ತಂಡದ ಕೋಲಾಟಂ, ಕರಗಟ್ಟಂ, ಕಾವಾಡಿಯಾಟಂ ಆಕರ್ಷಿಸಿದವು.