ಮೈಸೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸ್ವಾವಲಂಬನೆ ಬಂದಿದೆ. ಪ್ರತಿ ಕುಟುಂಬಕ್ಕೆ ಯೋಜನೆ ಕೊಟ್ಟಿದ್ದೇವೆ. ಇದನ್ನು ಸೂರ್ಯ ಚಂದ್ರ ಇರುವ ತನಕ ಮರೆಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ದಿ ಇಂಡಿಯನ್ ಪೊಲಿಟಿಕಲ್ ಲೆಜೆಂಡ್ ಸಿದ್ದರಾಮಯ್ಯ 76ರ ಸಂಭ್ರಮದಲ್ಲಿ ಕಾಂಗ್ರೆಸ್ ಗ್ಯಾರಂಟಿ ಜನೋತ್ಸವದ ಅವಲೋಕನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶ ಸ್ವಾತಂತ್ರ್ಯ ಪಡೆದ ನಂತರ ದಲಿತರು, ಹಿಂದುಳಿದವರು, ರೈತರು, ಮಹಿಳೆಯರ ಕಲ್ಯಾಣಕ್ಕೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಆದರೆ, ಪ್ರತಿ ಕುಟುಂಬಕ್ಕೆ ಯೋಜನೆ ತಲುಪಿಸಿದ ಶ್ರೇಯಸ್ಸು ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ನುಡಿದರು.
5ಗ್ಯಾರಂಟಿಗಳಿಂದ ರಾಜ್ಯದ 1.32 ಲಕ್ಷ ಕುಟುಂಬ ಆರ್ಥಿಕ ಸ್ವಾವಲಂಬನೆಯಾಗಲಿದೆ. ಪ್ರತಿ ಕುಟುಂಬಕ್ಕೆ 60ಸಾವಿರ ರೂ. ತಲುಪಲಿದೆ. ಮಹಿಳೆಯರಿಗೆ ಗಂಡನ ಕಟ್ಟಿಕೊಂಡು ಏನಾಗಬೇಕು. ಗಂಡನ ಮೇಲಿನ ಅವಲಂಬನೆ ತಪ್ಪಲಿದೆ ಎಂದು ಹೇಳಿದರು.
ಸರ್ಕಾರ ಅಧಿಕಾರಕ್ಕೆ ಬಂದು 3ತಿಂಗಳು ಆಗಿಲ್ಲ. ಡಿಮ್ಯಾಂಡ್, ಪೆನ್ಡ್ರೈವ್ ಮಾತಾಡಲು ಶುರು ಮಾಡಿದರು. ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಈಗಾಗಲೇ ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳಿನ ಸರಮಾಲೆ ಹೊದಿಸುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಎಚ್ಚೆತ್ತು ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಅಚ್ಚಳಿಯದೇ ಉಳಿಯುವಂತೆ ತಿಳಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮುತ್ಸದ್ಧಿ ರಾಜಕಾರಣಿ. 4ದಶಕಗಳಿಂದ ಒಟ್ಟಿಗೆ ರಾಜಕಾರಣ ಮಾಡಿದ್ದೇವೆ. ನಾನು ಅವರ ಪೊಲಿಟಿಕಲ್ ಸ್ಟ್ರೆಂಥ್. 76ನೇ ವಯಸ್ಸಿನಲ್ಲೂ ಅವರ ಕೆಲಸ ಮಾಡುವ ರೀತಿ ಗಮನಿಸಿದರೆ ಅವರಿಗೆ ಅಷ್ಟು ವಯಸ್ಸಾಗಿಲ್ಲ ಅನಿಸುತ್ತದೆ. ಅವರ ನಿಲುವು ಮತ್ತು ಬದ್ಧತೆಯಿಂದ ನಾಡಿನ ಜನತೆ 2ನೇ ಬಾರಿಗೆ ಅಧಿಕಾರ ಕೊಟ್ಟರು. ರಾಜ್ಯದ ಪ್ರತಿ ಪ್ರಜೆಯನ್ನು ಒಳಗೊಂಡ ಸಮಾಜ ನಿರ್ಮಿಸುವ ಅವರು, ಅರಸು ಅವರ ಮಾರ್ಗದಲ್ಲಿ ಅದಕ್ಕಿಂತ ಉನ್ನತವಾದ ಆಡಳಿತ ನೀಡುತ್ತಿದ್ದಾರೆ. ಅವರನ್ನು ಪಡೆದ ಕರ್ನಾಟಕ ಧನ್ಯ ಎಂದು ನುಡಿದರು.
ಅಧಿಕಾರದಲ್ಲಿ ಇದ್ದಾಗ ಜನರ ಪರ ಕೆಲಸ ಮಾಡಿದೆವು. ವಿರೋಧ ಪಕ್ಷದಲ್ಲಿದ್ದಾಗ ಜನಪರ ಹೋರಾಟ ನಡೆಸಿದೆವು. ಬಿಜೆಪಿ ಸರ್ಕಾರದ ಮಿತಿ ಮೀರಿದ ಭ್ರಷ್ಟಾಚಾರ, ಆಡಳಿತ ವೈಫಲ್ಯ, ಸ್ವಜನ ಪಕ್ಷಪಾತದಿಂದ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳು ಬಂದವು. ಜನರಿಗೆ ವಚನ ಕೊಟ್ಟಂತೆ 5 ಗ್ಯಾರಂಟಿಗಳನ್ನು ಹಂತ ಹಂತವಾಗಿ ಜಾರಿಗೆ ತಂದಿದ್ದೇವೆ. ಇದನ್ನು ಬಿಜೆಪಿ-ಜೆಡಿಎಸ್ ಪಕ್ಷದವರಿಗೆ ಸಹಿಸಲಾಗುತ್ತಿಲ್ಲ ಎಂದರು.
ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ಮೀಸಲಾತಿ ಮೊದಲು ಜಾರಿಗೆ ತಂದವರು ನಾಲ್ವಡಿ ಕೃಷ್ಣರಾಜ ಒಡೆಯರ್, ನಂತರ ಸಾಮಾಜಿಕ ಪ್ರಜಾಪ್ರಭುತ್ವಕ್ಕೆ ಚಾಲನೆ ನೀಡಿದವರು ದೇವರಾಜ ಅರಸು, ಸಿದ್ದರಾಮಯ್ಯ ಅವರು ಎಸ್ಸಿಪಿ, ಟಿಎಸ್ಪಿ ಮೂಲಕ ಐತಿಹಾಸಿಕ ಕ್ರಾಂತಿಕಾರಿ ತೀರ್ಮಾನ ಮಾಡಿದರು. ಇವತ್ತು ಗ್ಯಾರಂಟಿಗಳ ಬಗ್ಗೆ ಬಹಳ ದೊಡ್ಡ ಚರ್ಚೆ ನಡೆಯುತ್ತಿದೆ. ಉಚಿತ ಎಂದು ಗೇಲಿ, ಟೀಕೆ ಮಾಡಲಾಗುತ್ತಿದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೂ ಉಚಿತ ಅಲ್ಲ. ಇದು ಸಂವಿಧಾನ ಬದ್ಧವಾದದ್ದು. 119ದೇಶಗಳು ಉಚಿತ ಯೋಜನೆಗಳನ್ನು ಕೊಡುತ್ತಿವೆ ಎಂದು ಹೇಳಿದರು.
ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಸಿದ್ದರಾಜು, ಬಿ.ಎಂ.ರಾಮು, ರಾಮಪ್ಪ, ಎಂ.ಶಿವಣ್ಣ, ಪುಷ್ಪಾಲತಾ ಚಿಕ್ಕಣ್ಣ, ಈಶ್ವರ್ ಚಕ್ಕಡಿ, ಪ್ರಕಾಶ್, ಭಾಸ್ಕರ್ ಎಲ್.ಗೌಡ ಮುಂತಾದವರಿದ್ದರು.