ಮೈಸೂರು: ಸಕಾರಾತ್ಮಕ ಶಕ್ತಿ ಮನುಷ್ಯನ ಜೀವನದಲ್ಲಿ ಆತ್ಮಾಭಿಮಾನ, ಆತ್ಮಗೌರವ ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಬ್ರಹ್ಮಕುಮಾರಿಸ್ ಸರಸ್ವತಿಪುರಂ ಸೆಂಟರ್ನ ಉಸ್ತುವಾರಿ ಬಿ.ಕೆ.ಮಂಜುಳಾ ಹೇಳಿದರು.
ಮೈಸೂರಿನ ಟಿಟಿಎಲ್ ಟ್ರಸ್ಟ್, ಟಿಟಿಎಲ್ ವಾಣಿಜ್ಯ ವ್ಯವಹಾರ ನಿರ್ವಹಣಾ ಕಾಲೇಜು, ಟಿಟಿಎಲ್ ಸ್ವತಂತ್ರ ಪದವಿ ಪೂರ್ವ ಕಾಲೇಜು ಮತ್ತು ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಐಕ್ಯೂಎಸಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಸಕಾರಾತ್ಮಕತೆಯ ಶಕ್ತಿ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಕಾರಾತ್ಮಕ ಶಕ್ತಿ ಹಾಗೂ ನಕಾರಾತ್ಮಕ ಶಕ್ತಿ ಎರಡೂ ನಮ್ಮಲ್ಲಿಯೇ ಇರುತ್ತವೆ. ಸಕಾರಾತ್ಮಕ ಚಿಂತನೆ ಎಂದರೆ ಒಳ್ಳೆಯ ಕೆಲಸ, ಪ್ರೀತಿ, ವಿಶ್ವಾಸ, ನಂಬಿಕೆ, ಒಳ್ಳೆಯತನ ಇವೆಲ್ಲವೂ ನಮ್ಮನ್ನು ಬೆಳಕಿನೆಡೆಗೆ ಕರೆದೊಯ್ಯುತ್ತವೆ. ಬೇಡವಾದ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬಾರದು ಎಂದರು.
ನಮ್ಮ ನಕಾರಾತ್ಮಕ ಚಿಂತನೆಗಳನ್ನು ತೆಗೆದು ಹಾಕಬೇಕು. ಪೂರ್ತಿಯಾಗಿ ಅದನ್ನು ಹೋಗಲಾಡಿಸಲು ಪ್ರಯತ್ನಿಸಬೇಕು. ನಮ್ಮ ಒಳ್ಳೆಯ ಅಭ್ಯಾಸಗಳು ಪ್ರೀತಿ-ವಿಶ್ವಾಸ, ಸಂತೋಷ, ನಂಬಿಕೆ ಮುಂದುವರಿಸಬೇಕು ಹಾಗೂ ಯಾವುದಾದರೂ ಹೊಸ ವಿಷಯ ಅಥವಾ ಹೊಸದರ ಬಗ್ಗೆ ತಿಳಿಯುವ ಆಸಕ್ತಿ ಹೊಂದಬೇಕು. ನಾವು ಎಲ್ಲರಿಗೂ ಸಹಾಯ ಮಾಡಬೇಕು. ಪ್ರೀತಿ ಸಂತೋಷ ಹಂಚಬೇಕು. ಸಂತೋಷದಿಂದ ಆರೋಗ್ಯ, ಆರೋಗ್ಯವೇ ಭಾಗ್ಯ, ಆರೋಗ್ಯದಿಂದ ನಮಗೆ ಸಂಪತ್ತು ದೊರೆಯುತ್ತದೆ ಎಂದರು.
ಟಿಟಿಎಲ್ ಕಾಲೇಜಿನ ಟ್ರಸ್ಟಿ ಗೀತಾ ರಾಮದಾಸ್, ಟಿಟಿಎಲ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿ.ಪ್ರಶಾಂತ್, ಪ್ರೊ.ಎನ್.ಎಂ ರಾಮಚಂದ್ರಯ್ಯ. ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಬ್ರಹ್ಮಕುಮಾರಿಸ್ ಸರಸ್ವತಿಪುರಂ ಸೆಂಟರ್ನ ಸುಮಿತ್ರ ಸ್ವಾಮಿ, ವಾಣಿಜ್ಯಶಾಸದ ವಿಭಾಗದ ಅಧಿಕಾರಿ ಡಾ.ಆಶಾ, ಗ್ರಂಥ ಪಾಲಕಿ ಎಸ್.ಎಚ್.ರಮ್ಯಶ್ರೀ, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಎಚ್.ಆರ್.ಗಿರೀಶ, ಉಪನ್ಯಾಸಕ ಕರುಣ್ ಶರ್ಮ ಮತ್ತಿತರರು ಇದ್ದರು.