ಮೈಸೂರು: ವಿಜ್ಞಾನ ಎಂಬುದು ಸತ್ಯಾನ್ವೇಷಣೆ. ಸತ್ಯವನ್ನು ಶೋಧಿಸುವ ಒಂದು ಕ್ರಿಯೆಯಾಗಿದೆ. ಯಾವುದೇ ಕ್ಷೇತ್ರದಲ್ಲಾದರು ವಿಜ್ಞಾನ ಇದ್ದೆ ಇರುತ್ತದೆ. ಮುಖ್ಯವಾಗಿ ಆರೋಗ್ಯ ಕ್ಷೇತ್ರದಲ್ಲಿ ಎಂದು ಮೈಸೂರು ವಿವಿಯ ಪ್ರಾಣಿಶಾಸ್ತ್ರ ಹಾಗೂ ತಳಿಶಾಸ್ತ್ರ, ಜಿನೋಮಿಕ್ಸ್ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ.ಸುತ್ತೂರು ಎಸ್.ಮಾಲಿನಿ ಹೇಳಿದರು.
ನಗರದ ಶ್ರೀ ನಟರಾಜ ಪ್ರತಿಷ್ಠಾನದ ವಾತ್ಸಲ್ಯ ಬಿ.ಇಡಿ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿರುವ ಆಚಾರ ವಿಚಾರಗಳು ಒಂದಲ್ಲ ಒಂದು ರೀತಿಯಲ್ಲಿ ವಿಜ್ಞಾನದ ಸ್ಪರ್ಶ ಹೊಂದಿದೆ. ವಿಜ್ಞಾನವೆಂಬುದು ಬೃಹತ್ ಕ್ಷೇತ್ರವಾಗಿ ಬೆಳೆದಿದೆ ಎಂದರು.
ಮನುಷ್ಯನನ್ನು ಕಾಡುತ್ತಿರುವ ಬಹು ದೊಡ್ಡ ಮಹಾಮಾರಿ ಎಂದರೆ ಅದು ಒತ್ತಡ. ಇಂದಿನ ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಮೂಲ್ಯ ಸಮಯ ಕಳೆಯುತ್ತಿರುವುದರಿಂದ ಮುಂದಿನ 5, 10 ವರ್ಷಗಳಲ್ಲಿ ಮಾನಸಿಕವಾಗಿ ಅಸ್ವಸ್ಥರಾಗುವ ಸಾಧ್ಯತೆ ಇದೆ. ಅವರನ್ನು ಸರಿಯಾದ ದಾರಿಯಲ್ಲಿ ತರುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಅವರ ಅಭೂತಪೂರ್ವ ಭವಿಷ್ಯದ ಹೊಣೆ ಶಿಕ್ಷಕರದಾಗಿರುತ್ತದೆ ಎಂದರು.
ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷ ಅಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ಸಿ.ವಿ ರಾಮನ್ ಅವರ ಜೀವನ ಸಾಧನೆ ತಿಳಿಸುವ ಸಲುವಾಗಿ ಅಂತರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಗುತ್ತದೆ. ಸಿ.ವಿ.ರಾಮನ್ ಅವರು ನೊಬೆಲ್ ಪ್ರಶಸ್ತಿ ಪಡೆದ ಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮಹಾನ್ ವ್ಯಕ್ತಿಯ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಯಲಿ ಎಂಬ ಕಾರಣದಿಂದ ಪ್ರಶಿಕ್ಷಣಾರ್ಥಿಗಳಾದ ನಿಮಗೆ ಜ್ಞಾನದ ಸಂಪಾದನೆಗೆ ಈ ದಿನಾಚರಣೆಗಳು ಸಹಕಾರವಾಗುತ್ತದೆ ಎಂದರು.
ಹೊಸಮಠದ ಚಿದಾನಂದ ಸ್ವಾಮೀಜಿ, ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಹೇಶ ದಳಪತಿ, ಕಾಲೇಜಿನ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ಶ್ರೀ ನಟರಾಜ ಪ್ರತಿಷ್ಠಾನದ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.