ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ 2.4 ಕೋಟಿ ರೂ. ನಗದು ಸಂಗ್ರಹವಾಗಿದೆ.
ದೇವಾಲಯದ ದಾಸೋಹ ಭವನದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ 2,04,98,214 ರೂ. 82.2 ಗ್ರಾಂ ಚಿನ್ನ, 4.3 ಕೆಜಿ ಬೆಳ್ಳಿ, 24 ವಿದೇಶಿ ಕರೆನ್ಸಿ ಲಭ್ಯವಾಗಿದೆ. ಒಟ್ಟು 35 ಹುಂಡಿಗಳನ್ನು ಎಣಿಕೆ ಮಾಡಲಾಗಿದ್ದು, ಇದು ಒಂದು ತಿಂಗಳ ಅವಧಿಯಲ್ಲಿ ಸಂಗ್ರಹವಾದ ಮೊತ್ತವಾಗಿದೆ. ಬ್ಯಾಂಕ್ ಆಫ್ ಬರೋಡಾ ಅಧಿಕಾರಿಗಳು ಹಾಗೂ ವಿವಿಧ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಎಣಿಕಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಬೆಳಗ್ಗೆಯಿಂದ ರಾತ್ರಿ ಯವರೆಗೂ ಎಣಿಕೆ ಕಾರ್ಯ ನಡೆಯಿತು. ಮುಜುರಾಯಿ ತಹಸೀಲ್ದಾರ್ ವಿದ್ಯಾಲತಾ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ಎಇಒ ಸತೀಶ್, ಲೆಕ್ಕಾಧಿಕಾರಿ ಗುರುಮಲ್ಲಯ್ಯ, ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಸಂಗದೇವ್ ಭಾಗವಹಿಸಿದ್ದರು.