ಮೈಸೂರು: ಹಲಸು ಮತ್ತು ಮಾವು ಪ್ರಿಯರನ್ನು ಸೆಳೆಯಲು ಸಹಜ ಸಮೃದ್ಧಿ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಹಲಸಿನ ಮೇಳ ಭಾನುವಾರ ಯಶಸ್ವಿಯಾಗಿ ತೆರಕಂಡಿದ್ದು, ಮೇಳದಲ್ಲಿ 10 ಸಾವಿರಕ್ಕೂ ಹೆಚ್ಚು ನಾಗರಿಕರು ಮೇಳಕ್ಕೆ ಭೇಟಿ ನೀಡಿ ಹಲಸು ಸವಿದ್ದಾರೆ.
ಮೇಳದ ಕೊನೇಯ ದಿನವಾದ ಭಾನುವಾರ ನಂಜರಾಜ ಬಹದ್ದೂರ್ ಛತ್ರ ಜನರಿಂದ ತುಂಬಿ ತುಳುಕಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಉತ್ಸಾಹ ಕಂಡು ಬಂತು. ವಿವಿಧ ತಳಿಯ ಹಲಸಿನ ರುಚಿ ಸವಿದ ಸಂತಸ. ಆಹಾರ ಮೇಳದಲ್ಲಿ ಬಗೆ ಬಗೆಯ ತಿಂಡಿ-ತಿನಿಸು ಸವಿದರು. ಹಲಸಿನ ಮೇಳದಲ್ಲಿ ತಿನ್ನುವುದು ಮತ್ತು ಮಾರಾಟ ಮಾಡುವುದು ಮಾತ್ರವಲ್ಲದೆ ಹಲಸು ಎತ್ತುವ ಸ್ಪರ್ಧೆ, ಮಕ್ಕಳಿಗಾಗಿ ನಾ ಕಂಡಂತೆ ಹಲಸು ಎಂಬ ವಿಷಯದಂತೆ ಚಿತ್ರಕಲೆ ಸ್ಪರ್ಧೆಯಲ್ಲಿ 30 ಅಧಿಕ ಮಕ್ಕಳು ಭಾಗವಹಿಸಿದ್ದರು. ಇದೇ ವೇಳೆ ಹಲಸಿನಿಂದ ಅಡುಗೆ ತಯಾರಿಕೆ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ಮಹಿಳೆಯರು ವಿವಿಧ ಅಡುಗೆ ತಯಾರಿಸಲಾಯಿತು. ಹಲಸು ತಿನ್ನುವ ಸ್ಪರ್ಧೆಯಲ್ಲಿ ಸಂಭಮ ಕಂಡು ಬಂತು. ನಿಮಿಷದಲ್ಲಿ 15ಹಣ್ಣಿನ ತೊಳೆಗಳನ್ನು ತಿಂದು ಸ್ಪರ್ಧಿಗಳು ಬಹುಮಾನಕ್ಕೆ ಭಾಜನರಾದರು. ನೆರೆದಿದ್ದ ಹಲಸು ಪ್ರಿಯರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.
ಸಹಜ ಸಮೃದ್ಧಿ ಆಯೋಜಿಸಿದ್ದ ಹಲಸಿನ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 10ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿದರು. 400ಕ್ಕೂ ಅಧಿಕ ತಳಿಯ ಹಲಸಿನ ಸಸಿಗಳು ಮಾರಾಟವಾಗಿವೆ. 500 ಕೆ.ಜಿಗೂ ಅಧಿಕ ಹಲಸಿನ ಹಣ್ಣು ಮಾರಾಟವಾಗಿದೆ.
ವಿಜಯಪುರ ಜಿಲ್ಲೆಯ ಇಂಡಿ ಲಿಂಬೆ ಸಸಿ ಖರೀದಿಗೆ ಗ್ರಾಹಕರು ಮುಗಿಬಿದ್ದರು. ಈ ತಳಿಗೆ ಕೇಂದ್ರ ಸರ್ಕಾರದಿಂದ ಭೌಗೋಳಿಕ ಮಾನ್ಯತೆ (ಜಿಯೋಗ್ರಫಿಕಲ್ ಟ್ಯಾಗ್) ಪಡೆದಿದೆ. ಒಣ ಹವೆ, ಕಡಿಮೆ ಫಲವತ್ತತೆ ಇರುವ ಜಮೀನಿನಲ್ಲಿ ಕಡಿಮೆ ನೀರಿದ್ದರೂ ಲಿಂಬೆ ಬೆಳೆ ಬೆಳೆಯಬಹುದು. ಲಿಂಬೆ ವರ್ಷವಿಡೀ ಹೊಸ ಚಿಗುರಿನೊಂದಿಗೆ ಹೂ, ಹಣ್ಣು ಬಿಡುತ್ತದೆ. ವರ್ಷಪೂರ್ತಿ ನಿರಂತರ ಆದಾಯ ತರುತ್ತದೆ. 2ವರ್ಷದಲ್ಲಿ ಲಿಂಬೆ ಹಣ್ಣು ಬರಲಿದೆ ಎಂದು ಮಾರಾಟಗಾರರು ವಿವರಿಸಿದರು.
ಇದೇ ವೇಳೆ ಹಲಸಿನ ಹಣ್ಣು ತಿನ್ನುವ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮೋಹನ್ ಕುಮಾರ್ (ಪ್ರಥಮ), ಗಿರೀಶ್ (ದ್ವಿತೀಯ), ನರೇಂದ್ರಬಾಬು (ತೃತೀಯ). ಮಹಿಳೆಯರ ವಿಭಾಗದಲ್ಲಿ ನಳಿನಾ (ಪ್ರಥಮ), ಗಿರಿಜಾ (ದ್ವಿತೀಯಾ), ರಜನಿ ಮತ್ತು ಸಹನಾ (ತೃತೀಯ) ಸ್ಥಾನ ಪಡೆದರು. ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು.