ನಂಜನಗೂಡು: ಸಾರ್ವಜನಿಕ ಸೇವೆಗಾಗಿ ಅಧಿಕಾರಿಗಳ ಬಳಕೆಗೆ ಸರ್ಕಾರ ಲಕ್ಷಾಂತರ ತೆರಿಗೆ ಹಣ ಖರ್ಚು ಮಾಡಿ ವಾಹನಗಳನ್ನ ಖರೀದಿಸಿದೆ. ಆದರೆ ಅಧಿಕಾರಿಗಳು ಸರ್ಕಾರದಿಂದ ಮೀಸಲಾದ ವಾಹನಗಳನ್ನ ಬಳಸದೆ ಐಶಾರಾಮಿ ವಾಹನಗಳಿಗೆ ಮೊರೆ ಹೋಗಿರುವ ಆರೋಪ ನಂಜನಗೂಡಿನಲ್ಲಿ ಕೇಳಿ ಬಂದಿದೆ. ಕೂಡಲೇ ಅಧಿಕಾರಿಗಳು ತಮ್ಮ ಐಷಾರಾಮಿ ಕಾರುಗಳ ಬಳಕೆಗೆ ಕಡಿವಾಣ ಹಾಕಿ ಸರ್ಕಾರ ನೀಡಿದ ವಾಹನಗಳನ್ನು ಬಳಸಬೇಕೆಂದು ರೈತರು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗಲು ನಾವು ಬಿಡುವುದಿಲ್ಲವೆಂದು ರೈತರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ನಂಜನಗೂಡಿನ ಸುಮಾರು 20 ಸರ್ಕಾರಿ ಇಲಾಖೆ ಕಚೇರಿಗಳಿಗೆ ನೀಡಲಾದ ವಾಹನಗಳು ಸಮರ್ಪಕವಾಗಿ ಬಳಕೆಯಾಗದೆ ತುಕ್ಕು ಹಿಡಿಯುತ್ತಿವೆ. ವಾಹನಗಳು ಸುಸ್ಥಿತಿಯಲ್ಲಿದ್ದರೂ ಬಳಸದ ಅಧಿಕಾರಿಗಳು ಖಾಸಗಿ ಐಶಾರಾಮಿ ವಾಹನಗಳ ಮೊರೆ ಹೋಗಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಖರೀದಿಸಿದ ವಾಹನಗಳನ್ನ ನಿರ್ಲಕ್ಷಿಸಿರುವ ಅಧಿಕಾರಿಗಳ ವಿರುದ್ದ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಐಷಾರಾಮಿ ವಾಹನಗಳ ಬಳಕೆಯನ್ನು ನಿಲ್ಲಿಸಿ ಸರ್ಕಾರ ನೀಡಿದ ವಾಹನಗಳನ್ನೇ ಬಳಸುವಂತೆ ಎಚ್ಚರಿಕೆ ನೀಡಿದ್ದಾರೆ. ಹಾಗೊಂದು ವೇಳೆ ನಿರ್ಲಕ್ಷಿಸಿದ್ದಲ್ಲಿ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.