ಮೈಸೂರು: ಇತ್ತೀಚೆಗೆ ಕಾಡು ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಇಂದು ಕೊಡಗಿನಲ್ಲಿ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಅದೇ ರೀತಿ ಎಚ್.ಡಿ ಕೋಟೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ 9 ವರ್ಷದ ಬಾಲಕನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದ ಘಟನೆ ಸೋಮವಾರ ನಡೆದಿದೆ. ಕೃಷ್ಣನಾಯಕ್ ಮತ್ತು ಮಹಾದೇವಿಬಾಯಿ ದಂಪತಿ ಪುತ್ರ ಸಿದ್ದಾಪುರ ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ಚರಣ್ ನಾಯಕ್ ಹುಲಿ ದಾಳಿಯಿಂದ ಮೃತಪಟ್ಟ ಬಾಲಕ.
ಸೋಮವಾರ ಮಧ್ಯಾಹ್ನ ನಂತರ ಶಾಲೆಗೆ ರಜೆ ನೀಡಿದ ಕಾರಣ ತಂದೆ ತಾಯಿಯೊಂದಿಗೆ ಹೊಲಕ್ಕೆ ಹೋಗಿದ್ದು, ಬಿಸಿಲು ಇದ್ದ ಕಾರಣ ಮರದ ನೆರಳಿನಲ್ಲಿ ಮಗನನ್ನು ತಂದೆ ತಾಯಿ ಕೂರಿಸಿದ್ದರು. ಈ ವೇಳೆ ಬಾಲಕನನ್ನು ಹುಲಿ ಹೊತ್ತೊಯ್ದಿದೆ. ಬಳಿಕ ತಂದೆ ತಾಯಿ ಬಾಲಕನನನ್ನು ಹುಡುಕಾಡಿದಾಗ ರಕ್ತದ ಮಡುವಿನಲ್ಲಿ ಬಾಲಕನ ಮೃತದೇಹ ದೊರೆತಿದೆ.