ನಂಜನಗೂಡು: ಹೆತ್ತ ತಾಯಿಯ ಪ್ರೀತಿಯಿಂದ ವಂಚಿತವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮೂರು ತಿಂಗಳ ಹೆಣ್ಣು ಮಗುವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ರಕ್ಷಿಸಿ ದತ್ತು ಕೇಂದ್ರಕ್ಕೆ ಒಪ್ಪಿಸಿದ ಘಟನೆ ತಾಲೂಕಿನ ಸುತ್ತೂರು ಗ್ರಾಮದ ನಾಯಕರ ಬೀದಿ ಯಲ್ಲಿ ನಡೆದಿದೆ.
ಸುತ್ತೂರು ಗ್ರಾಮದ ನಾಯಕ ಬೀದಿಯಲ್ಲಿ ವಾಸವಾಗಿರುವ ಆಚಾರಿ ಜನಾಂಗದ ಗೌರಮ್ಮ ಎಂಬ ಮಹಿಳೆ ಈ ನತದೃಷ್ಟ ಮಗುವಿನ ತಾಯಿ. ಈಕೆ ಗಂಡನನ್ನು ಕಳೆದುಕೊಂಡು ವಯಸ್ಸಾದ ಅಜ್ಜಿ ಗೌರಮ್ಮನೊಂದಿಗೆ ವಾಸಿಸುತ್ತಿದ್ದಳು. ಅಲ್ಲದೆ ಕೆಲವೊಮ್ಮೆ ಮಗುವನ್ನು ಅಜ್ಜಿ ಗೌರಮ್ಮನ ಕೈಗೆ ಒಪ್ಪಿಸಿ ಹೊರಹೋದರೆ ವಾರಗಟ್ಟಲೆ ಮನೆಗೆ ಬರುತ್ತಿರಲಿಲ್ಲ. ಈ ವೇಳೆ ಮಗು ಹಗಲು ರಾತ್ರಿ ಅಳುತ್ತಿದ್ದರೆ ವಯಸ್ಸಾದ ಅಜ್ಜಿಯ ಕೈಯಲ್ಲಿ ಸಂತೈಸಲು ಸಾಧ್ಯವಾಗದೆ ಪರದಾಡುತ್ತಿದ್ದರು. ಈ ದೃಶ್ಯವನ್ನು ನೋಡಿದ ಅಕ್ಕಪಕ್ಕದ ನಿವಾಸಿಗಳು ಮರುಗುತ್ತಿದ್ದರು.
ಈ ಬಗ್ಗೆ ಯಾರೋ ಮಕ್ಕಳಸಹಾಯವಾಣಿಗೆ ಕರೆ ಮಾಡಿ ವಿಚಾರ ತಿಳಿಸಿದ ಮೇರೆಗೆ ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ಸಹಾಯವಾಣಿ ಶಿಶು ಅಭಿವೃದ್ಧಿ ಅಧಿಕಾರಿ ಮಂಜುಳಾ, ಅಭಿವೃದ್ಧಿ ಅಧಿಕಾರಿಗಳಾದ ಇಂದಿರಮ್ಮ, ಸುಧಾ, ಕಲಾವತಿ, ಡಿ.ಸಿ.ಪಿ.ಓ ಅಪೇಕ್ಷಿತ, ಮೇಲ್ವಿಚಾರಕಿ ಮೇರಿ, ಜಿಲ್ಲಾ ಮಕ್ಕಳ ಘಟಕದ ಮಮತಾ, ಛಾಯಾ ದತ್ತು ಕೇಂದ್ರದ ಮಹೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಅನಾಥವಾಗಿದ್ದ ಮಗುವನ್ನು ಆರೈಕೆ ಮಾಡಿ ಸ್ಥಳದಲ್ಲೇ ತುರ್ತು ಚಿಕಿತ್ಸೆ ನೀಡಿ ಮಗುವನ್ನು ಮೈಸೂರಿನ ಛಾಯಾದೇವಿ ದತ್ತು ಕೇಂದ್ರದ ವಶಕ್ಕೆ ಒಪ್ಪಿಸಿದ್ದಾರೆ.
ಸಾವಿನ ಅಂಚಿನಲ್ಲಿದ್ದ ಮಗುವನ್ನು ರಕ್ಷಿಸಿ ಸುರಕ್ಷಿತ ಕೇಂದ್ರಕ್ಕೆ ಕರೆದೊಯ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಅಧಿಕಾರಿಗಳ ಕಾರ್ಯಕ್ಕೆ ಸ್ಥಳೀಯರು ಪ್ರಶಂಸಿದ್ದಾರೆ.