ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡು ಮಿನಿ ವಿಧಾನಸೌಧದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.
ಹೌದು, ನಂಜನಗೂಡು ನಗರದ ಊಟಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಾಲ್ಲೂಕು ಮಿನಿ ವಿಧಾನಸೌಧ (ತಾಲ್ಲೂಕು ಆಡಳಿತ ಭವನ) ವನ್ನು 2013ರಲ್ಲಿ ಹಾಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ರವರು ಕಂದಾಯ ಸಚಿವರಾಗಿದ್ದ ಅವಧಿಯಲ್ಲಿ ನಿರ್ಮಾಣ ಮಾಡಲಾಗಿತ್ತು.
ಆದರೆ ಸುಸಜ್ಜಿತವಾಗಿ ಎಲ್ಲ ಇಲಾಖೆಗಳನ್ನು ಒಳಗೊಂಡಂತೆ ಇರುವ ಕಟ್ಟಡದಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳೇ ಇಲ್ಲದಿರುವುದು. ನಾಚಿಕೆಗೇಡಿನ ಸಂಗತಿಯಾಗಿದೆ.
ಗಬ್ಬೆದ್ದು ನಾರುವ ಶೌಚಾಲಯ, ಕುಡಿಯುವ ನೀರಿಲ್ಲದೆ ಪರದಾಡುವ ಸಾರ್ವಜನಿಕರು, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲದೆ ನಿಂತಲ್ಲೇ ನಿಂತು, ನೆಲದ ಮೇಲೆ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಲಿಫ್ಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಆದರೆ ಕಟ್ಟಡ ಉದ್ಘಾಟನೆಯಾಗಿ ಇಲ್ಲಿಯ ತನಕ ಲಿಫ್ಟ್ ಸೌಲಭ್ಯವಿಲ್ಲದೆ ವಯಸ್ಸಾದ ವೃದ್ಧರು ಮೆಟ್ಟಿಲುಗಳನ್ನು ಅತ್ತಿಳಿಯುವ ಹರಸಾಹಸ ಪಡುವಂತಾಗಿದೆ. ಎಸಿ ರೂಮಲ್ಲಿ ಕುಳಿತು ಆಡಳಿತ ನಡೆಸುವ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕು ಮಿನಿ ವಿಧಾನಸೌಧಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಈಗಿನ ಶಾಸಕ ದರ್ಶನ್ ಧ್ರುವನಾರಾಯಣ್ ಸರ್ಜರಿ ಮಾಡಬೇಕಿದೆ.
ಉಪ ನೋಂದಣಾಧಿಕಾರಿಗಳ ಕಚೇರಿ ಎರಡನೇ ಮಹಡಿಯಲ್ಲಿದೆ ಆಸ್ತಿ ನೋಂದಣಿ ಮಾಡಲು ಹೆಚ್ಚು ಜನರು ಬರುತ್ತಾರೆ. ಆಸ್ತಿ ಬದಲಾವಣೆಗೆ ಹೆಚ್ಚು ವಯಸ್ಸಾದ ಮತ್ತು ಅಂಗವಿಕಲರು ಬರುತ್ತಾರೆ ಲಿಫ್ಟ್ ಇದ್ದರು ಉಪಯೋಗಕ್ಕೆ ಬರುತ್ತಿಲ್ಲ. ಇಲ್ಲಿವರೆಗೂ ಯಾವುದೇ ತಹಶೀಲ್ದಾರ್ ರವರು ಕ್ರಮವಹಿಸಿಲ್ಲ. ವಯಸ್ಸಾದ ನಾಗರಿಕರು ಮೆಟ್ಟಿಲನ್ನು ಮೇಲತ್ತಿ ಮತ್ತು ಇಳಿಯುವ ಸಂದರ್ಭದಲ್ಲಿ ಜಾರಿ ಬಿದ್ದರೆ ಯಾರು ಜವಾಬ್ದಾರಿ? ಈ ತಾಲ್ಲೂಕ ಕಛೇರಿಯಲ್ಲಿ ಲಿಫ್ಟ್ ಇದ್ದರು ಇಲ್ಲದಂತಾಗಿದೆ. ಹಿರಿಯ ನಾಗರಿಕರು ಕೂರಲು ಆಸನ ವ್ಯವಸ್ಥೆ ಇಲ್ಲ. ಕುಡಿಯಲು ನೀರಿನ ವ್ಯವಸ್ಥೆ ಸರಿ ಇಲ್ಲ. ಶಾಸಕರು ಈ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ ಮತ್ತು ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿಬೇಕಾಗಿದೆ ಎಂದು ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ನಗರ್ಲೆ ಎಂ ವಿಜಯಕುಮಾರ್ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಪುಟ್ಟಸ್ವಾಮಿ ಒತ್ತಾಯ ಮಾಡಿದ್ದಾರೆ.