ನಂಜನಗೂಡು: ರಾಜ್ಯದಲ್ಲಿ ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಿದ್ದು, ಇಂದು ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಕೆಎಸ್ಆರ್ ಟಿಸಿ ಸಾರಿಗೆ ಬಸ್ ನಿಂದ ಉಚಿತವಾಗಿ ವಿದ್ಯಾರ್ಥಿಗಳಿಗೆ ಪ್ರಯಾಣ ಮಾಡಲು ಸರ್ಕಾರ ಆದೇಶ ನೀಡಿದೆ.
ಆದರೆ, ಆ ಸರ್ಕಾರದ ಆದೇಶವನ್ನು ಸಾರಿಗೆ ಬಸ್ ಕಂಡಕ್ಟರ್ ಗಾಳಿಗೆ ತೂರಿ ವಿದ್ಯಾರ್ಥಿಗಳಿಬ್ಬರಿಗೆ ಟಿಕೇಟ್ ನೀಡಿರುವ ಘಟನೆ ನಂಜನಗೂಡು ತಾಲೂಕಿನ ಗಟ್ಟವಾಡಿ ಗ್ರಾಮದಲ್ಲಿ ನಡೆದಿದೆ.
ದೊಡ್ಡ ಕವಲಂದೆ ಗ್ರಾಮದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದ್ದು, ಗಟ್ಟವಾಡಿ ಗ್ರಾಮದಿಂದ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಮನೋಜ್ ಮತ್ತು ಹೇಮಂತ್ ಇಬ್ಬರು ಬೆಳಿಗ್ಗೆ 9 ಗಂಟೆಗೆ ಗಟ್ಟವಾಡಿಪುರ ಗ್ರಾಮದಿಂದ ಗಟ್ಟವಾಡಿ, ಕವಲಂದೆ ಮಾರ್ಗವಾಗಿ ನಂಜನಗೂಡು ನಗರಕ್ಕೆ ಹೋಗುವ ಕೆಎಸ್ಆರ್ಟಿಸಿ ಸಾರಿಗೆ ಬಸ್ ನಲ್ಲಿ ಪ್ರಯಾಣ ಮಾಡುವಾಗ ಕಂಡಕ್ಟರ್ ಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪ್ರವೇಶ ಪತ್ರ (ಹಾಲ್ ಟಿಕೆಟ್) ತೋರಿಸಿದ್ದಾರೆ. ನಮಗೆ ಉಚಿತವಾಗಿ ಪ್ರಯಾಣವಿದೆ ಎಂದರು ಕ್ಯಾರೇ ಎನ್ನದೆ ವಿದ್ಯಾರ್ಥಿಗಳಿಗೆ ಟಿಕೆಟ್ ನೀಡಿದ್ದಾನೆ. ನಮ್ಮಲ್ಲಿ ಹಣವಿರಲಿಲ್ಲ. ನಮ್ಮ ಬಳಿ ಇದ್ದ ಚಿಲ್ಲರೆ ಕಾಸನ್ನು ನೀಡಿ ಟಿಕೆಟ್ ತೆಗೆದುಕೊಂಡು ಪರೀಕ್ಷೆಗೆ ಬಂದಿದ್ದೇವೆ.
ನಮ್ಮ ತಂದೆ ತಾಯಿಗಳು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತೇವೆ ಆದರೆ ಸರ್ಕಾರದ ಆದೇಶವಿದ್ದರೂ ನಮಗೆ ಬಸ್ನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಸಾಧ್ಯವಿಲ್ಲ. ಕಂಡಕ್ಟರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಒತ್ತಾಯ ಮಾಡಿದರು.