ನಂಜನಗೂಡು: ಇನ್ನು ಜಾರಿಯಾಗದ ಗೃಹಲಕ್ಷ್ಮಿ ಯೋಜನೆಗೆ ಆಹಾರ ಇಲಾಖೆಯ ಅಧಿಕಾರಿಗಳು ಹಗಲು ದರೋಡೆಗೆ ಇಳಿದಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಅಧ್ಯಕ್ಷ ಸತೀಶ್ ಆರೋಪಿಸಿದರು.
ನಂಜನಗೂಡು ನಗರದ ತಾಲೂಕು ಆಡಳಿತ ಭವನದ ಆಹಾರ ಇಲಾಖೆ ಕಚೇರಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಯಾರಿಗೆಲ್ಲ ಯೋಜನೆ ಫಲ ಕೊಡಬೇಕು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಸರ್ಕಾರದಿಂದ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಗೃಹಲಕ್ಷ್ಮಿ ಯೋಜನೆ ಬರಬೇಕು ಎಂದರೆ ನೀವು ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥೆ ಎಂದು ಮಾಡಿಸಿಕೊಳ್ಳಬೇಕು ಎಂದು ತಪ್ಪು ಸಂದೇಶಗಳನ್ನು ನೀಡಿದ್ದಾರೆ. ಸಾಕಷ್ಟು ಜನರು ಸರ್ಕಾರಿ ಕಚೇರಿಗೆ ರೇಷನ್ ಕಾರ್ಡ್ ಮಾಡಿಕೊಡಿ ಎಂದು ಅಲೆದಾಡುತ್ತಿದ್ದಾರೆ.
ಕಚೇರಿಗೆ ಆಗಮಿಸುವ ಜನರಿಂದ 40ರಿಂದ 50 ರೂಪಾಯಿ ತನಕ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಖಾಸಗಿ ಕಂಪ್ಯೂಟರ್ ಸೆಂಟರ್ ಗಳಲ್ಲೂ ಕೂಡ ಈ ರೀತಿ ದಂಧೆ ನಡೆಯುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ತಡೆಗಟ್ಟಿ ಜನರಿಗೆ ಮಾಹಿತಿಯನ್ನು ನೀಡಬೇಕು ಎಂದು ಒತ್ತಾಯ ಮಾಡಿದರು. ಇನ್ನು ಆಹಾರ ಇಲಾಖೆಯ ಶಿರಸ್ತೆದಾರ್ ಅರವಿಂದ್ ಜೊತೆ ರೈತರ ಮಾತಿನ ಚಕಮಕಿ ನಡೆಯಿತು.