ನಂಜನಗೂಡು: ತಾಲ್ಲೂಕಿನ ಬಸವಟ್ಟಿಗೆ, ಮಲ್ಲಹಳ್ಳಿ,ಭುಜಂಗಯ್ಯನಹುಂಡಿ, ಹೆಮ್ಮರಗಾಲ, ತರದಲೆ,ಕೂಡ್ಲಾಪುರ, ಬಾಗೂರು, ಹುಣಸನಾಳು, ಸಿಂಧುವಳ್ಳಿ ಗ್ರಾಮಗಳಲ್ಲಿ ಶುಕ್ರವಾರ ನಂಜನಗೂಡು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರು ಮತಯಾಚನೆ ಮಾಡಿದರು.
ನಂತರ ಬಸವಟ್ಟಿಗೆ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ದರ್ಶನ ಧ್ರುವನಾರಾಯಣ್ ಅವರು, ನಮ್ಮ ತಂದೆ ದಿವಂಗತ ಧ್ರುವನಾರಾಯಣ್ ಹಾಗೂ ತಾಯಿ ವೀಣಾ ಅವರ ಸಾವಿನ ಸಂದರ್ಭದಲ್ಲಿ ನೀವೆಲ್ಲ ಸಾಂತ್ವನ ಹೇಳಿ ಧೈರ್ಯ ತುಂಬಿದಿದ್ದರಿಂದ ನಾನು ಈಗ ಮಾನಸಿಕ ಸದೃಢನಾಗಿ ನಿಮ್ಮ ಮುಂದೆ ನಿಲ್ಲಲು ಸಾಧ್ಯವಾಗಿದೆ. ನಮ್ಮ ತಂದೆಯವರು ಲೋಕಸಭಾ ಸದಸ್ಯರಾಗಿ ಯಾವ ರೀತಿ ಅಭಿವೃದ್ಧಿ ಕೆಲಸ ಮಾಡಿದ್ದರೊ ಹಾಗೆ ಅಲ್ಲದೇ ಭವಿಷ್ಯದ ದಿನಗಳಲ್ಲಿ ನಂಜನಗೂಡು ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡಬೇಕೆಂಬ ಕನಸು ಕಂಡಿದ್ದರೊ ಆ ಕನಸು ನನಸು ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವೆ. ಅಲ್ಲದೇ ನಿಮ್ಮ ಮನೆ ಮಗನಾಗಿ ಅವರಂತೆ ಕೆಲಸ ಮಾಡುವುದಾಗಿ ತಿಳಿಸಿದರು.
ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಮೂಲಕ ಜನಸೇವೆ ಮಾಡುವೆ ಹಾಗಾಗಿ ನನಗೆ ಮತವನ್ನು ನೀಡಿ ನೀಡಿ ಜಯಶಾಲಿ ಮಾಡಬೇಕು ಎಂದು ಮನವಿ ಮಾಡಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ನಂಜನಗೂಡು ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಆಶಯದಿಂದ ಈ ಕ್ಷೇತ್ರದ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದರು. ಆದರೆ ಅಕಾಲಿಕ ಸಾವಿಗೀಡಾದ ಕಾರಣ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಒತ್ತಾಸೆ ಮೇರೆಗೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಅವಕಾಶ ನೀಡಿದೆ. ಹಾಗಾಗಿ ನನ್ನ ತಂದೆ ಧ್ರುವನಾರಾಯಣ ಅವರಂತೆ ನಿಮ್ಮಗಳ ಸೇವೆ ಮಾಡಲು ನಿಮ್ಮ ಮುಂದೆ ಬಂದಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಉಸ್ತುವಾರಿಗಳಾದ ಶ್ರೀಕಂಠು, ಕೆಪಿಸಿಸಿ ಕಾರ್ಯದರ್ಶಿ ಕಾವೇರಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಟ್ಟಿ ಮಹೇಶ್, ಪ್ರದೀಪ್, ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಜಿ.ಎನ್. ಲೋಕೇಶ್ ನಂಜುಂಡಸ್ವಾಮಿ, ನಾಗೇಶ್ ರಾಜ್,ದೇವನೂರು ಶಿವಪ್ಪ, ದೊರೆಸ್ವಾಮಿ ನಾಯಕ,ಮಹದೇವಶೆಟ್ಟಿ, ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.