ನಂಜನಗೂಡು: ಕಾವೇರಿ ನೀರಿಗಾಗಿ ಪುಟಾಣಿ ಮಕ್ಕಳು ಬೀದಿಗಳಿದು ಪ್ರತಿಭಟಿಸಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.
ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಖಂಡಿಸಿ ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಂಜನಗೂಡು ಬಂದ್ ಯಶಸ್ವಿಯಾಗಿದ್ದು, ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ನಡೆಸಲಾದ ಪ್ರತಿಭಟನೆಯಲ್ಲಿ ಪುಟಾಣಿ ಮಕ್ಕಳು ಕಾವೇರಿ ನಮ್ಮದು, ರಕ್ತ ಕೊಟ್ಟೆವು ನೀರು ಬಿಡೆವು ಎಂದು ಪೋಸ್ಟರ್ ಹಿಡಿದು, ರಸ್ತೆಗಿಳಿದು ಪ್ರತಿಭಟನೆ ನಡೆಸಿರುವುದು ಎಲ್ಲರ ಗಮನ ಸೆಳೆಯಿತು.
ವರನಟ ಡಾ. ರಾಜಕುಮಾರ್, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಹಾಗೂ ನಟ ಪುನೀತ್ ರಾಜಕುಮಾರ್ ಭಾವಚಿತ್ರವಿರುವ ಪೋಟೋ ಹಾಗೂ ಭಾವುಟ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಪುಟಾಣಿ ಮಕ್ಕಳನ್ನು ಗಮನಿಸಿದ ಪೊಲೀಸರು ಪೋಸ್ಟರ್ ಮತ್ತು ಬಾವುಟವನ್ನು ಕಿತ್ತು ಪ್ರತಿಭಟನಾ ಸ್ಥಳದಿಂದ ಹೊರಗೆ ಕಳುಹಿಸಿದ್ದಾರೆ.
ಸಮಾಜದ ಮುಖಂಡ ಹೇಮಂತ್ ಕುಮಾರ್ ಮಾತನಾಡಿ, ಪದೇ ಪದೇ ಕಾವೇರಿ ವಿಚಾರ ಮುನ್ನೆಲೆಗೆ ಬರುತ್ತಿದೆ. ಒಳ ಒಪ್ಪಂದ ಮಾಡಿಕೊಂಡು ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಒಂದು ಬೆಳೆ ತೆಗೆಯುವುದೇ ಕಷ್ಟವಾಗಿದೆ ಇಂತಹ ಸಂದರ್ಭದಲ್ಲಿ ತಮಿಳುನಾಡು ವರ್ಷಕ್ಕೆ ಮೂರು ಬೆಳೆಯನ್ನು ತೆಗೆಯುತ್ತಿದ್ದಾರೆ. ಈಗಾಗಲೇ ಸಾಕಷ್ಟು ನೀರನ್ನು ಬಿಟ್ಟಿದ್ದಾರೆ. ಕೂಡಲೇ ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರು ಹಾಗೂ ಮಹಿಳೆಯರು ಭಾಗವಹಿಸಿದರು.