ಮೈಸೂರು: ಉಡುಪಿಯ ಪೇಜಾವರಮಠದ ಹಿ೦ದಿನ ಯತಿಗಳಾಗಿದ್ದ ವಿಶ್ವೇಶತೀರ್ಥ ಸ್ವಾಮೀಜಿ ಸಮ ಸಮಾಜ ನಿರ್ಮಾದ ಕನಸುಕಂಡಿದ್ದರು. ಆ ನಿಟ್ಟಿನಲ್ಲಿ ಅವರು ಅನೇಕ ಹೋರಾಟ ಮಾಡಿದ್ದಾರೆಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್ ಹೇಳಿದರು.
ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮ ಆವರಣದಲ್ಲಿ ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ವತಿಯಿಂದ ಹರಿಪಾದಗೈದಿರುವ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ತೃತೀಯ ಸಂಸ್ಮರಣಾರ್ಥ ಪೇಜಾವರ ವಿಶ್ವೇಶರತೀರ್ಥ ನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಪೇಜಾವರ ಶ್ರೀಗಳ ಕನಸು ನಾವೆಲ್ಲರೂ ನನಸು ಮಾಡುವ ಅಗತ್ಯವಿದೆ. ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜ ಸುಧಾರಣೆಗೆ ಶ್ರೀಗಳು ಅಪಾರ ಶ್ರಮಿಸಿದ್ದಾರೆ ಎಂದು ಹೇಳಿದರು.
ಶ್ರೀ ಕೃಷ್ಣ ಮಿತ್ರ ಮಂಡಳಿಯ ಅಧ್ಯಕ್ಷರಾದ ಸುಬ್ರಮಣ್ಯ ತಂತ್ರಿ ಮಾತನಾಡಿ ಪೇಜಾವರ ಸ್ವಾಮೀಜಿ ಎಲ್ಲರ ಪ್ರೀತಿ ಪಡೆದಿದ್ದರು. ‘ಪೇಜಾವರ ಸ್ವಾಮೀಜಿ ಯಾವುದೇ ಜಾತಿಗೆ ಸೀಮಿತ ಸ್ವಾಮೀಜಿ ಎನಿಸದೆ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದವರು. ಯತಿಗಳು ಸಾಮರಸ್ಯ ನಡಿಗೆ ಮೂಲಕ ಸಮಾಜದ ಒಗ್ಗಟ್ಟಿಗೆ ಶ್ರಮಿಸುವ ಕೆಲಸವನ್ನು ಮಾಡುವ ಜತೆಗೆ ಪ್ರಕೃತಿ ಸಂಕಷ್ಟ ಸಂದರ್ಭದಲ್ಲಿ ಅವರ ಸೇವೆಗೆ ಸದಾ ಸಿದ್ಧರಾಗಿ ಪಾದಯಾತ್ರೆ ನಡೆಸಿ ಜನರ ಬದುಕಿಗೆ ಚೈತನ್ಯ ತುಂಬುವ ಕೆಲಸ ಮಾಡುತ್ತಿದ್ದರು. ಯಾವುದೇ ಸಮಸ್ಯೆ ಎದುರಾದರೂ ಅದಕ್ಕೆ ಸೂಕ್ತ ಪರಿಹಾರ ಕೊಡುವ ಶಕ್ತಿ ಹೊಂದಿದ್ದರು’ ಎಂದು ಬಣ್ಣಿಸಿದರು.
ಇಳೈಆಳ್ವಾರ್ ಸ್ವಾಮೀಜಿ, ಕರ್ನಾಟಕ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ್ಯ ನಿರ್ದೇಶಕ ಎಂ ಆರ್ ಬಾಲಕೃಷ್ಣ, ಉಪಾಧ್ಯಕ್ಷರಾದ ಪುಟ್ಟಣ್ಣ ಭಟ್, ಕಾರ್ಯದರ್ಶಿ ಶ್ರೀ ವತ್ಸ ರಾವ್, ರಾಮಕೃಷ್ಣ , ವಸುದೇವ್ ಭಟ್, ಕಡಕೋಳ ಜಗದೀಶ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ರಂಗನಾಥ, ಸುಚಿಂದ್ರ, ಚಕ್ರಪಾಣಿ, ಅಮೋಘ ನಾಗರಾಜ್, ಹಾಗೂ ಇನ್ನಿತರರು ಭಾಗವಹಿಸಿದ್ದರು.