ಚಾರ್ಮಾಡಿ: ಚಾರ್ಮಾಡಿ ಘಾಟಿಯ ಬಾಳೂರು ಮೀಸಲು ಅರಣ್ಯದ ಸೋಮನ ಕಾಡು ಪ್ರದೇಶದಲ್ಲಿ ಮಂಗಳವಾರ ಸಂಜೆ ಕಿಡಿಗೇಡಿಗಳ ಕೃತ್ಯದಿಂದ ಕಾಡ್ಗಿಚ್ಚು ಉಂಟಾಗಿ ಹತ್ತಾರು ಎಕರೆ ಅರಣ್ಯ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ.
ಚಾರ್ಮಾಡಿ ಘಾಟಿ ಪರಿಸರದಲ್ಲಿ ಧೂಮಪಾನ,ಅಡುಗೆ ಅಥವಾ ಶಿಕಾರಿ ಮಾಡುವವರಿಂದ ಬೆಂಕಿ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ.
ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು ಕಾಡ್ಗಿಚ್ಚಿಗೆ ಕಾರಣವಾಗಿರುವ ಸಾಧ್ಯತೆಯು ಇದೆ.
ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಚಿಕ್ಕಮಗಳೂರು ವಿಭಾಗದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟರು. ಅಷ್ಟರಲ್ಲಿ ಹತ್ತಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿತ್ತು. ಸಾಮಾನ್ಯವಾಗಿ ಕಳೆದ ಹಲವು ವರ್ಷಗಳಿಂದ ಚಾರ್ಮಾಡಿ ಘಾಟಿ ಪರಿಸರದಲ್ಲಿ ಕಾಡ್ಗಿಚ್ಚು ಉಂಟಾಗುತ್ತಿದ್ದು ಅರಣ್ಯ ನಾಶವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.
ವದಂತಿ
ಅರಣ್ಯ ಇಲಾಖೆವತಿಯಿಂದ ನಡೆಯುತ್ತಿರುವ ಬೆಂಕಿ ರೇಖೆ ನಿರ್ಮಾಣದ ವೇಳೆ ಉಂಟಾದ ಅಚಾತುರ್ಯದಿಂದ ಕಾಡ್ಗಿಚ್ಚು ಉಂಟಾಗಿದೆ ಎಂದು ವದಂತಿ ಹಬ್ಬಿತು. ಆದರೆ ಇಲಾಖೆ ವತಿಯಿಂದ ಈ ಸ್ಥಳಗಳಲ್ಲಿ ಬೆಂಕಿ ರೇಖೆ ರಚನೆ ಕೆಲಸ ನಡೆಯುತ್ತಿಲ್ಲ ಹಾಗೂ ಇದು ಬೆಳ್ತಂಗಡಿ ಕಡೆಯ ವನ್ಯಜೀವಿ ವಿಭಾಗದ ಅರಣ್ಯ ವ್ಯಾಪ್ತಿಯಿಂದ ಹಬ್ಬಿರುವ ಸಾಧ್ಯತೆ ಇದೆ ಎಂದು ಚಿಕ್ಕಮಗಳೂರು ವಿಭಾಗದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ತೊಂದರೆ
ಚಾರ್ಮಾಡಿ ಘಾಟಿಯ ರಸ್ತೆ ಹಾಗೂ ಅರಣ್ಯ ಪ್ರದೇಶ ದಕ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿದೆ. ಈ ಬಾರಿಯ ಕಾಡ್ಗಿಚ್ಚಿನಿಂದ ಚಿಕ್ಕಮಗಳೂರು ವಿಭಾಗದ ಅರಣ್ಯದಲ್ಲಿರುವ ಅಪಾರ ಪ್ರಮಾಣದ ಸಸ್ಯ ಸಂಕುಲ ನಾಶವಾಗಿರುವ ಸಾಧ್ಯತೆ ಇದೆ. ಅಲ್ಲದೆ ಇಲ್ಲಿರುವ ವನ್ಯಮೃಗಗಳು ತಮ್ಮ ವಾಸವನ್ನು ಬದಲಾಯಿಸಿರುವ ಸಾಧ್ಯತೆಯೂ ಇದೆ. ಚಾರ್ಮಾಡಿ ಭಾಗದಲ್ಲಿ ಈಗಾಗಲೇ ಕಾಡಾನೆಗಳ ಸಹಿತ ವನ್ಯಮೃಗಗಳ ಹಾವಳಿ ಸಾಕಷ್ಟಿದೆ. ಕಾಡ್ಗಿಚ್ಚಿನ ಕಾರಣ ಇದು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಬೆಳ್ತಂಗಡಿ ತಾಲೂಕಿನ ಅಲ್ಲಲ್ಲಿ ಕಂಡು ಬರುವ ಹಾವುಗಳನ್ನು ಹಿಡಿಯುವ ಉರಗ ಪ್ರೇಮಿಗಳು ಸಾಮಾನ್ಯವಾಗಿ ಅವುಗಳನ್ನು ಚಾರ್ಮಾಡಿ ಘಾಟಿ ಪರಿಸರದಲ್ಲಿ ಬಿಡುತ್ತಾರೆ. ಕಾಡ್ಗಿಚ್ಚಿನಿಂದ ಇವುಗಳಿಗೆ ಅಪಾಯ ಉಂಟಾಗಿರುವ ಸಾಧ್ಯತೆ ಇದೆ. ಕಾಡ್ಗಿಚ್ಚಿನ ಪರಿಣಾಮ ನೆರಿಯ,ಚಾರ್ಮಾಡಿ, ಚಿಬಿದ್ರೆ,ತೋಟತ್ತಾಡಿ, ಮುಂಡಾಜೆ,ಕಲ್ಮಂಜ ಮೊದಲಾದ ಗ್ರಾಮಗಳಲ್ಲಿ ತೀಕ್ಷ್ಣ ವಾತಾವರಣ ನಿರ್ಮಾಣವಾಗಿದೆ.
“ಚಾರ್ಮಾಡಿ ಘಾಟಿ ಪರಿಸರದಲ್ಲಿ ಉಂಟಾಗಿರುವ ಕಾಡ್ಗಿಚ್ಚನ್ನು ಹತೋಟಿಗೆ ತರಲಾಗಿದೆ. ಸ್ಥಳೀಯರು ಹಾಗೂ ಇಲಾಖೆ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಿದ್ದು ಹೆಚ್ಚಿನ ಹಾನಿ ಉಂಟಾಗಿರುವುದು ತಪ್ಪಿದೆ” ಎಂದು ಚಿಕ್ಕಮಗಳೂರು ವಿಭಾಗ ಡಿಎಫ್ ಒ ಕ್ರಾಂತಿ ಹೇಳಿದರು.
“ಬೆಳ್ತಂಗಡಿ ವನ್ಯಜೀವಿ ವಿಭಾಗದ ಅರಣ್ಯದಿಂದ ಬೆಂಕಿ ಉಂಟಾಗಿರುವ ಸಾಧ್ಯತೆ ಇಲ್ಲ. ಚಾರ್ಮಾಡಿ ಘಾಟಿ ಭಾಗದಲ್ಲಿ ಕಾಡ್ಗಿಚ್ಚು ಉಂಟಾಗದಂತೆ ಮುಂಜಾಗೃತಾ ಕ್ರಮವಾಗಿ ಮುಂದಿನ ಕೆಲವೇ ದಿನಗಳಲ್ಲಿ ಬೆಂಕಿ ರೇಖೆಯ ನಿರ್ಮಾಣ ಕೆಲಸ ಆರಂಭಿಸಲಾಗುತ್ತದೆ” ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್ಎಫ್ ಒ ಸ್ವಾತಿ ಹೇಳಿದರು.