ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಏ.26ರಂದು ಜನ್ಮ ತಾಳಿದ್ದ ಮೂರು ಹುಲಿ ಮರಿಗಳನ್ನು ಸಾರ್ವಜನಿಕ ವೀಕ್ಷಣೆಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮುಕ್ತಗೊಳಿಸಿದರು.
ಈ ಮೂರು ಹುಲಿ ಮರಿಗಳು ಮೃಗಾಲಯದ ಗಂಡು ಹುಲಿ ರಾಕಿ ಹಾಗೂ ಹೆಣ್ಣು ಹುಲಿ ತಾರಾಗೆ ಜನಿಸಿದ್ದವು. ಅಂದಿನಿಂದ ವೀಕ್ಷಣೆಗೆ ಬಿಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹುಲಿಮರಿಗಳನ್ನು ಸಾರ್ವಜನಿಕರ ದರ್ಶನಕ್ಕೆ ಅನಾವರಗೊಳಿಸಿದರು.
ರಾಕಿ ಎಂಬ ಗಂಡು ಹುಲಿಯನ್ನು 2018ರಲ್ಲಿ ಹುಣಸೂರು ವಲಯದ ಶೆಟ್ಟಿಹಳ್ಳಿ ಎಂಬಲ್ಲಿ ಸಂರಕ್ಷಿಸಲಾಗಿತ್ತು. ತಾರಾ ಹುಲಿಯನ್ನು 2018ರಲ್ಲಿ ಚೆನ್ನೈ ಮೃಗಾಲಯದಿಂದ ಪ್ರಾಣಿ ವಿನಿಮಯ ಯೋಜನೆಯಡಿ ತಂದು ಇವೆರಡನ್ನು ಜೊತೆ ಮಾಡಲಾಗಿತ್ತು. ಮೃಗಾಲಯದಲ್ಲಿ ಇಲ್ಲಿಯವರೆಗೆ 19ಹುಲಿ ಮರಿಗಳು ಜನಿಸಿದ್ದು, ಅದರಲ್ಲಿ 7ಗಂಡು, 12 ಹೆಣ್ಣುಗಳಾಗಿವೆ. ಪ್ರಸ್ತುತ ಮೃಗಾಲಯದಲ್ಲಿ 11ಹುಲಿಗಳಿದ್ದು 3 ಗಂಡು, 5 ಹೆಚ್ಚು ಹಾಗೂ 3 ಮರಿಗಳಾಗಿವೆ.
ಈ ವೇಳೆ ಶಾಸಕ ಎಸ್.ಎ.ರಾಮದಾಸ್, ಮಹಾಪೌರ ಶಿವಕುಮಾರ್, ಉಪಮಹಾಪೌರ ರೂಪ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಮುಡಾ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್, ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ಕುಲಕರ್ಣಿ, ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ, ಮೃಗಾಲಯ ಪ್ರಾಧಿಕಾರದ ಸದಸ್ಯರಾದ ಗೋಕುಲ್ ಗೋವರ್ದನ್, ಜ್ಯೋತಿ ರೇಚಣ್ಣ, ವರುಣ ಕ್ಷೇತ್ರದ ಜಿಪಂ ಮಾಜಿ ಸದಸ್ಯ ಸಚ್ಚಿದಾನಂದ ಇನ್ನಿತರರು ಉಪಸ್ಥಿತರಿದ್ದರು.