ಮೈಸೂರು: ಈ ಬಾರಿಯ ವಿಧಾನಸಭಾ ಚುನಾವಣೆ ವೇಳೆ ಆರ್ಯ ಈಡಿಗ ಸಮುದಾಯಕ್ಕೆ ಮೂರು ಪಕ್ಷಗಳೂ ತಲಾ ಹತ್ತು ಟಿಕೆಟ್ ನೀಡಬೇಕು. ಇಲ್ಲದಿದ್ದಲ್ಲಿ ಮುಂಬರುವ ಏಪ್ರಿಲ್ ಎರಡರಂದು ಶಿವಮೊಗ್ಗದಲ್ಲಿ ನಡೆಯುವ ಸಮುದಾಯದ ಸಭೆಯಲ್ಲಿ ನಿರ್ಣಾಯಕ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಮುದಾಯದ ಪ್ರಣವಾನಂದ ಸ್ವಾಮೀಜಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ವೇಳೆ ಪಕ್ಷಗಳು ಸಮುದಾಯದ ಆಕಾಂಕ್ಷಿಗಳಿಗೆ ಟಿಕೆಟ್ ನೀಡದಿದ್ದಲ್ಲಿ ಪಕ್ಷೇತರವಾಗಿಯೂ ಅವರು ಸ್ಪರ್ಧಿಸಬಹುದಾಗಿದೆ. ಇಲ್ಲವೇ ಚುನಾವಣೆಯನ್ನೇ ಬಹಿಷ್ಕರಿಸಬಹುದಾಗಿದೆ ಎಂದು ನುಡಿದರು.
ಇಡೀ ರಾಜ್ಯದಲ್ಲಿ ಸಮುದಾಯದ ಜನಸಂಖ್ಯೆ ಸುಮಾರು 60 ರಿಂದ 70 ಲಕ್ಷದಷ್ಟಿದೆ. ಇವರು ಈಡಿಗ, ನಾಮಧಾರಿ, ಬಿಲ್ಲವ ಮೊದಲಾದ ಹೆಸರಿನಿಂದ ಕರೆಯಲ್ಪಡುತ್ತಿದ್ದಾರೆ. ಆದರೆ ಇವರಿಗೆ ಯಾವುದೇ ಪಕ್ಷ ಸೂಕ್ತ ಪ್ರಾತಿನಿಧ್ಯ ನೀಡಿಲ್ಲದಿರುವುದು ಬೇಸರದ ಸಂಗತಿಯಾಗಿದೆ. ಅಲ್ಲದೆ, ಶಿವಮೊಗ್ಗ, ಮಂಗಳೂರು, ಉಡುಪಿ, ಕಾರವಾರ, ಕಲ್ಯಾಣ ಕರ್ನಾಟಕ ಭಾಗದಲ್ಲೂ ಸಮುದಾದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಇಲ್ಲೆಲ್ಲ ಪ್ರಾತನಿಧ್ಯ ನೀಡಬೇಕೆಂದು ಒತ್ತಾಯಿಸಿದರು.
ಸಮುದಾಯದ ಮುಖಂಡರಾದ ಮುರಳೀಧರ್, ವಸಂತಕುಮಾರ್, ವಾಸು ಹಾಗೂ ಗೋಪಿ ಇದ್ದರು.