ಮೈಸೂರು: ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಹಾಗೂ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಹಾಗೂ ಕೇರಳ ಸರ್ಕಾರದ ಸಾಮಾನ್ಯ ಶಿಕ್ಷಣ ಇಲಾಖೆ ಇವರೆಲ್ಲರ ಸಹಯೋಗದೊಂದಿಗೆ ಕೇರಳದ ತ್ರಿಶುರ್ನ ಚಾಲ್ಡಿಯನ್ ಸೀನಿಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಆಯೋಜಿಸಿದ್ದ “ದಕ್ಷಿಣ ಭಾರತ ವಿಜ್ಞಾನ ಮೇಳ -2023 “ಪ್ರಯುಕ್ತ ವಿದ್ಯಾರ್ಥಿಗಳಿಗೆ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಮೈಸೂರಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ನಗರದ ವಿಜಯ ವಿಠಲ ವಿದ್ಯಾ ಶಾಲೆಯ 9ನೇ ತರಗತಿಯ ವಿದ್ಯಾರ್ಥಿUಳಾದ ಪ್ರಥಮ್ ಎಸ್ ಭಾರಧ್ವಾಜ್ ಹಾಗೂ ಸಾತ್ವಿಕ್ ಹೆಗಡೆ ರವರು ” ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ನಾವಿನ್ಯತೆಗಳು” ಎಂಬ ವಿಷಯದ ಮೇಲೆ ಮಾಡಿದ ಅತ್ಯುತ್ತಮ ವಿಜ್ಞಾನ ಪ್ರದರ್ಶನಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆಗಳನ್ನು ಪುಸ್ತಕಗಳನ್ನು ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿ ಪ್ರೋತ್ಸಾಹಿಸಲಾಗಿದೆ. ವಿದ್ಯಾರ್ಥಿಗಳು” ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ “(ಇಸ್ರೋ) ವತಿಯಿಂದ ವಿಶೇಷ ಬಹುಮಾನವನ್ನು ಸಹ ಪಡೆದಿದ್ದಾರೆ. ಇದೇ ವೇಳೆ ಮಾರ್ಗದರ್ಶಿ ಶಿಕ್ಷಕಿ ಶ್ರೀಮತಿ ವೀಣಾಮೂರ್ತಿ ಅವರನ್ನು ಸಹ ಗೌರವಿಸಲಾಗಿದೆ.
ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ವಿಜಯ ವಿಠಲ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್.ವಾಸುದೇವ್ ಭಟ್, ಪ್ರಾಚಾರ್ಯರಾದ ಬಿ.ಆರ್.ಮಂಗಳಾ, ಮುಖ್ಯ ಶಿಕ್ಷಕಿ ಬಿ.ಆರ್.ಸೌಮ್ಯ ಹಾಗೂ ಮಾರ್ಗದರ್ಶಿ ಶಿಕ್ಷಕಿ ವೀಣಾಮೂರ್ತಿ ಹೆಚ್.ಎಸ್ ಹಾಗೂ ಶಾಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದಿಸಿದ್ದಾರೆ.