ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯ ವತಿಯಿಂದ ಕಲಾಮಂದಿರದಲ್ಲಿ ರಾಜ್ಯಮಟ್ಟದ ಶಿಲ್ಪಕಲಾ ಶಿಬಿರ, ಚಿತ್ರಕಲಾ ಶಿಬಿರ, ರಾಜ್ಯಮಟ್ಟದ ಶಿಲ್ಪಕಲಾ ಮತ್ತು ಚಿತ್ರಕಲಾ ಪ್ರದರ್ಶನ, ಕರಕುಶಲ ಕಲೆ, ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಮತ್ತು ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಸೆಪ್ಟಂಬರ್ 16 ರಿಂದ 25 ರವರೆಗೆ ಹಮ್ಮಿಕೊಳ್ಳಲಾಗಿದ್ದು ಆಯೋಜಿಸಲಾಗಿದೆ.
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸಹಯೋಗದಲ್ಲಿ ಜರುಗಲಿರುವ ರಾಜ್ಯಮಟ್ಟದ ಶಿಲ್ಪಕಲಾ ಶಿಬಿರವನ್ನು 2022ರ ಸೆಪ್ಟಂಬರ್ 16 ರಿಂದ 25 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಶಿಬಿರದ ಉದ್ಘಾಟನೆಯನ್ನು ಸಂಜೆ 5.30 ಗಂಟೆಗೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಲ್.ನಾಗೇಂದ್ರ ಅವರು ವಹಿಸಲಿದ್ದಾರೆ.
ರಾಜ್ಯಮಟ್ಟದ ಚಿತ್ರಕಲಾ ಶಿಬಿರವನ್ನು 2022ರ ಸೆಪ್ಟೆಂಬರ್ 23 ರಿಂದ 25 ರವರೆಗೂ ಆಯೋಜಿಸಲಾಗಿದ್ದು, ಶಿಬಿರದ ಉದ್ಘಾಟನೆಯನ್ನು ಸೆಪ್ಟೆಂಬರ್ 23 ರಂದು ಬೆಳಗ್ಗೆ 10.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ರಾಜ್ಯಮಟ್ಟದ ಶಿಲ್ಪಕಲಾ ಮತ್ತು ಚಿತ್ರಕಲಾ ಪ್ರದರ್ಶನವನ್ನು 2022ರ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 03 ರವರೆಗೂ ಆಯೋಜಿಸಲಾಗಿದೆ. ಈಗಾಗಲೇ ಈ ಪ್ರದರ್ಶನಕ್ಕೆ ಕಲಾಕೃತಿಗಳನ್ನು ಆಹ್ವಾನಿಸಿ ತೀರ್ಪುಗಾರರಿಂದ ಆಯ್ಕೆಯಾದ ಕಲಾಕೃತಿಗಳನ್ನು ಮಾತ್ರ ಪ್ರದರ್ಶನದಲ್ಲಿಡಲಾಗುವುದು.
ಪ್ರದರ್ಶನದ ಉದ್ಘಾಟನೆಯನ್ನು ಸೆ. 26 ರಂದು ಸಂಜೆ 5 ಗಂಟೆಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಉದ್ಘಾಟನೆಯನ್ನು ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಲ್.ನಾಗೇಂದ್ರ ಅವರು ವಹಿಸುವರು.
ಕರಕುಶಲ ಕಲೆ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಮತ್ತು ಮಕ್ಕಳ ಶಿಲ್ಪಕಲಾ ಸ್ಪರ್ಧೆಯನ್ನು 2022ರ ಅಕ್ಟೋಬರ್ 1 ರಿಂದ 3 ರವರೆಗೆ ವಿವಿಧ ಕರಕುಶಲ ಕಲೆಯ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ಈ ಪ್ರದರ್ಶನದಲ್ಲಿ ರಾಜ್ಯದ್ಯಂತ ಆಯ್ಕೆ ಮಾಡಿದ ಕಿನ್ನಾಳ ಕಲೆ, ಕೌದಿ ಕಲೆ ಮತ್ತು ಕಸೂತಿ ಕಲೆ, ಕುಂಬಾರಿಕೆ ಕಲೆ, ಇನ್ಲೇ ಕಲೆ, ಚೆಲ್ಲಿದ ವರ್ಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಚರಕ ಹಾಗೂ ಕೈಮಗ್ಗ, ಬಿದಿರು/ ಬೆತ್ತ ಬುಟ್ಟಿ ಹೆಣಿಗೆ, ಚನ್ನಪಟ್ಟಣ ಗೊಂಬೆ ತಯಾರಿಕೆ, ವರ್ಲಿ ಕಲೆ ಹಾಗೂ ಮದರಂಗಿ ಕಲೆ, ಕ್ಯಾರಿಕೇಚರ್, ಕಾರ್ಟೂನ್, ಸೂಕ್ಷ್ಮ ಕಲೆ ಮುಂತಾದ 12 ಕರಕುಶಲ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಇರಲಿದೆ.
ಅ. 1 ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಾದ್ಯಂತ ಹೆಸರು ನೋಂದಾಯಿಸಿರುವ 1-4 ನೇ ತರಗತಿ, 5-7ನೇ ತರಗತಿಯವರೆಗೆ ಹಾಗೂ 8-10ನೇ ತರಗತಿಯ ಶಾಲಾ ಮಕ್ಕಳಿಗೆ ಮೂರು ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಪ್ರತಿ ವಿಭಾಗದಲ್ಲೂ ಅತ್ಯುತ್ತಮ ಚಿತ್ರಕಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಎಂಬ ಮೂರು ಬಹುಮಾನಗಳಿರುತ್ತವೆ. ಚಿತ್ರಕಲಾ ಸ್ಪರ್ಧೆಗೆ ಮೊದಲು ಬಂದ 300 ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗುವುದು. ಬಹುಮಾನಗಳ ವಿತರಣೆ ಹಾಗೂ ಸಮಾರೋಪ ಸಮಾರಂಭವನ್ನು 2022ರ ಅಕ್ಟೋಬರ್ 3 ರಂದು ಸಂಜೆ 4 ಗಂಟೆಗೆ ಚಿತ್ರಕಲೆ ಶಿಲ್ಪಕಲೆ ಪ್ರದರ್ಶನದಲ್ಲಿ ಆಯ್ಕೆಯಾದ ಕಲಾ ಕೃತಿಗಳಿಗೆ ಬಹುಮಾನ ವಿತರಣೆ ಹಾಗೂ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾದ ವೀರಣ್ಣ ಅರ್ಕಸಾಲಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾದ ಮಹೇಂದ್ರ ಅವರು ಉಪಸ್ಥಿತರಿರುವರು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9449176407 ಅನ್ನು ಸಂಪರ್ಕಿಸಿ ಎಂದು ಮೈಸೂರು ದಸರಾ ಮಹೋತ್ಸವ-2022 ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.