ಮೈಸೂರು: ಪರೀಕ್ಷೆಗೆ ತಯಾರಾಗಲು ಯೋಜನೆ ಬೇಕಾಗುತ್ತದೆ. ನಿಮಗೆ ಆಸಕ್ತಿ ಇರುವ ವಿಷಯ ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಬೇಕು. ಇಂಟರ್ನೆಟ್ನಲ್ಲಿ ಮಾಹಿತಿ ಸಿಗುತ್ತದೆ ಎಂದು ನಂಬುವ ಬದಲು ವಿಷಯಕ್ಕೆ ಸಂಬಂಧಿಸಿದ ವಿಶ್ವಾಸಾರ್ಹ ಪುಸ್ತಕಗಳ ಪರಾಮರ್ಶೆಯನ್ನು ವಿಸ್ತೃತವಾಗಿ ಮಾಡಬೇಕು ಎಂದು ಐಪಿಎಸ್ ಅಧಿಕಾರಿ, ಮೈಸೂರು ಜಿಲ್ಲಾ ಲೋಕಾಯುಕ್ತ ಎಸ್ಪಿ ಸಜೀತ್ ವಿ.ಜೆ ತಿಳಿಸಿದರು.
ಮೈಸೂರಿನ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಜ್ಞಾನಬುತ್ತಿ ಸಂಸ್ಥೆ ಏರ್ಪಡಿಸಿದ್ದ ಪಿ.ಸಿ. ಮತ್ತು ಪಿ.ಎಸ್.ಐ ಪರೀಕ್ಷಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ನಮ್ಮ ಕಾಲದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆಯೇ ದೊಡ್ಡ ಸಮಸ್ಯೆಯಾಗಿರುತ್ತಿತ್ತು.
ಜ್ಞಾನಬುತ್ತಿ ಸಂಸ್ಥೆ ಹಲವಾರು ಪರೀಕ್ಷೆಗಳ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಅಭಿನಂದನಿಯ. ಪರೀಕ್ಷಾ ತಯಾರಿ ಬಗ್ಗೆ ಹೇಳುವುದಾದರೆ ಇಂಥ ಪ್ರಯತ್ನ ನಿಮ್ಮಲ್ಲಿರುವ ವಿಷಯಕ್ಕೆ ಸಂಬಂಧಿಸಿದ ಅನುಮಾನಗಳನ್ನು ದೂರ ಮಾಡುತ್ತದೆ. ಸಮಯದ ಮಿತಿ ಹಾಕಿಕೊಂಡು ಪ್ರಶ್ನೆ ರೂಪಿಸಿ ಅದಕ್ಕೆ ಉತ್ತರ ನೀಡಬೇಕು. ಆಗ ನೀವು ಕೊಟ್ಟ ಉತ್ತರ ಸರಿ ಇದೆಯೋ ಇಲ್ಲವೋ ಎಂದು ನೋಡಿಕೊಂಡಾಗ ಖಚಿತವಾಗುತ್ತಾ ಹೋಗುತ್ತೀರಿ, ಆ ನಂತರ ಗೊಂದಲ ಇರುವ ವಿಷಯಕ್ಕೆ ಕೊನೆಯಲ್ಲಿ ಹೆಚ್ಚೆಚ್ಚು ಒತ್ತು ಕೊಟ್ಟರೆ ಅದನ್ನು ಸರಿಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ವಾಗ್ಮಿ ಅಂಕಣಕಾರ ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ.ರಂಗಸ್ವಾಮಿ ಮಾತನಾಡಿ ನಿಮ್ಮಲ್ಲಿರುವ ಆಸಕ್ತಿ ಆಧರಿಸಿ, ಪದವಿ ಪಡೆದ ವಿಷಯಗಳನ್ನೆ ಅಲ್ಲದೆ ಇತರ ಮೂಲಗಳಿಂದ ವಿಷಯ ಸಂಗ್ರಹಣೆ ಮಾಡಿಕೊಂಡಾಗ ತಯಾರಿ ಸುಲಭವಾಗುತ್ತದೆ ಹಾಗು ತರಬೇತಿ ಸಮಯದಲ್ಲಿ ಶಿಸ್ತು ಮತ್ತು ಸಮಯಪ್ರಜ್ಞೆ ಅತ್ಯಂತ ಅವಶ್ಯಕ, ನಾನು ಗೆದ್ದೇ ಗೆಲ್ಲುತ್ತೇನೆ ಎಂಬುವ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಿ ಎಂದರು. ಇತ್ತೀಚೆಗೆ ಆದಂತಹ ಪಿ.ಎಸ್.ಐ ಪರೀಕ್ಷೆಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಪ್ರಸ್ತಾಪಿಸಿ ಈ ರೀತಿ ಎಲ್ಲೋ ಕೆಲವರು ಮಾಡಿದ ತಪ್ಪಿಗೆ ತಲೆ ಕೆಡಿಸಿಕೊಳ್ಳಬೇಡಿ, ಇದೊಂದು ಆಕಸ್ಮಿಕ, ನಮ್ಮ ಜ್ಞಾನಬುತ್ತಿಯಲ್ಲಿ ತರಬೇತಿ ಹೊಂದಿ ಪಿಎಸ್ಐ ಆದವರೇ ಸಾಕ್ಷಿ ಎಂದರು.
ಪಿಯು ಉಪ ನಿರ್ದೇಶಕ ನಾಗಮಲ್ಲೇಶ್ ಮಾತನಾಡಿ ಇಂದು ಬಹುತೇಕ ಮಂದಿ ಕೆಲಸ ಕೊಡಿಸಿ ಎಂದು ಪ್ರಭಾವಿ ವ್ಯಕ್ತಿಗಳ ಮನೆ ಬಾಗಿಲಿಗೆ ಹೋಗುವವರು. ಅದರ ಬದಲಿಗೆ ಸ್ವಂತ ಪರಿಶ್ರಮದಿಂದ ಉದ್ಯೋಗ ಹೇಗೆ ಪಡೆಯಬಹುದು ಎಂಬುದನ್ನು ತರಬೇತಿ ಪಡೆದು ಪರೀಕ್ಷೆಯನ್ನು ಎದುರಿಸಿ ಎಂದರು.