ಮೈಸೂರು: ರಾಷ್ಟ್ರೀಯ ಸೇವಾ ಯೋಜನೆ ಎಂಬುದು ರಾಷ್ಟ್ರೀಯ ಭಾವೈಕ್ಯತೆ, ಕೋಮು ಸೌಹಾರ್ದತೆ, ಸಮರ್ಪಣಾಭಾವ, ಕೂಡಿ ಬಾಳುವಿಕೆ, ಅಹಿಂಸೆ,ಶಾಂತಿ, ಸಂಯಮ, ಶ್ರಮದಾನ, ಸಹಕಾರ, ವ್ಯಕ್ತಿತ್ವ ವಿಕಸನ, ಕ್ರಿಯಾಶೀಲತೆ, ಏಕತೆ, ಐಕ್ಯತೆ, ಸ್ವಚ್ಛತೆ, ಒಳಗೊಂಡಂತೆ ನಿಸ್ವಾರ್ಥ ಸೇವೆಯಂತಹ ಜೀವನ ಮೌಲ್ಯಗಳನ್ನು ಕಲಿಸುವ ಮಹತ್ವದ ಪಾಠಶಾಲೆ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು ಸಂಯುಕ್ತವಾಗಿ ನಗರದ ಗೌರಿಶಂಕರ ನಗರದಲ್ಲಿರುವ ಶ್ರೀ ಗೌರಿಶಂಕರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಸಮರೋಪ ಭಾಷಣ ಮಾಡಿದ ಅವರು ಭವಿಷ್ಯದ ಮೌಲ್ಯಯುತ ಜೀವನಕ್ಕೆ ದಿಕ್ಸೂಚಿಯಂತೆ ಕಾರ್ಯನಿರ್ವಹಿಸುವ ಇಂತಹ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ಎಲ್ಲೇ ನಡೆಯಲಿ ಅಲ್ಲಿ ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ವಿದ್ಯಾರ್ಥಿ ಬದುಕಿನ ಕಲಿಕೆಯ ಮಾರ್ಗದಲ್ಲಿ ಎರಡು ಆಯಾಮಗಳುಂಟು. ಅದರಲ್ಲೊಂದು ಶಾಲೆ ಮತ್ತು ಕಾಲೇಜಿನೊಳಗಿನ ಪಠ್ಯ ಕಲಿಕೆ. ಮತ್ತೊಂದು ಶಾಲಾ ಕಾಲೇಜಿನಿಂದಾಚೆಗಿನ ಹೊರಗಿನ ಪರಿಸರದಲ್ಲಿನ ಪಠ್ಯೇತರ ಚಟುವಟಿಕೆಗಳ ಕಲಿಕೆ.ಇದರಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಯ ಶಿಬಿರಗಳು ಬಹು ಮುಖ್ಯವಾಗಿದ್ದು, ನಾಲ್ಕು ಗೋಡೆಗಳ ಮಧ್ಯೆ ಕಲಿಯಲಾಗದನ್ನು ಇಲ್ಲಿ ಮುಕ್ತವಾಗಿ ವಿದ್ಯಾರ್ಥಿಗಳು ಕಲಿಯಬಹುದು. ಬುದ್ದ, ಬಸವ, ಏಸು, ಗಾಂಧಿ, ಅಂಬೇಡ್ಕರ್ ರಂತಹ ಮಹನೀಯರ ಆಶಯಗಳೆಲ್ಲವೂ ಇಲ್ಲಿದ್ದು ಮನುಷ್ಯ ಆಕಾರದಲ್ಲಷ್ಟೇ ಮನುಷ್ಯನಾಗಿರದೆ ಮನುಷ್ಯತ್ವ ವುಳ್ಳ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಗೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ಮಾರ್ಗಸೂಚಿಗಳೆಂದು ತಿಳಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಕೆ.ಎಸ್. ಪುಷ್ಪ ಅವರು ಮಾತನಾಡಿ ಇಂತಹ ಶಿಬಿರಗಳು, ಶಿಬಿರಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ ಎಂಬುದನ್ನು ಸವಿವರವಾಗಿ ತಿಳಿಸಿಕೊಟ್ಟರಲ್ಲದೆ, ಶಿಬಿರಾರ್ಥಿಗಳು ಇತರರಿಗೂ ಪ್ರೇರಕ ಶಕ್ತಿಯಾಗುವಂತೆ ನಡೆದುಕೊಳ್ಳಬೇಕೆಂದರು. ಗೌರಿಶಂಕರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪಿ.ಸಂಪತ್ತು ಅವರು ವಿವಿಧ ಘಟನೆಗಳನ್ನಾಧರಿಸಿದ ಪುಟ್ಟ ಪುಟ್ಟ ಕಥೆಗಳನ್ನು ಹೇಳುವುದರ ಮೂಲಕ ಶಿಬಿರಾರ್ಥಿಗಳ ಜ್ಞಾನವಿಕಾಸಕ್ಕೆ ಪೂರಕವಾಗಿ ಮಾತನಾಡಿದರು. ಎನ್ಎಸ್ಎಸ್ ನ ಸಹ ಕಾರ್ಯಕ್ರಮಾಧಿಕಾರಿ ಆರ್. ರಾಧಾ ಅವರು ಶಿಬಿರಾರ್ಥಿಗಳಿಗೆ ಹಿತವಚನ ಹೇಳಿದರು. ಶಿಬಿರಾರ್ಥಿಗಳಾದ ವಿದ್ಯಾಶ್ರೀ, ರಕ್ಷಿತಾ, ರೋಜಾ, ನಾಗಲಾಂಬಿಕಾ, ಮಾನ್ಯ, ಸಿಂಚನಾ, ವರ್ಷಾ ಮುಂತಾದವರು ಶಿಬಿರದ ಬಗ್ಗೆ ಅಂತರಂಗಪೂರ್ವಕವಾಗಿ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು.
ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷ ಅಧಿಕಾರಿಗಳೂ ಆದ ಖ್ಯಾತ ವಿದ್ವಾಂಸ ಡಾ.ಎಸ್. ಶಿವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಶ್ರೀ ನಟರಾಜ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿ.ಡಿ.ಸುನಿತಾರಾಣಿ, ಶ್ರೀನಟರಾಜ ಪಬ್ಲಿಕ್ ಶಾಲೆಯ ಶಿಕ್ಷಕಿ ಸತ್ಯಸುಲೋಚನಾ, ಎನ್ಎಸ್ಎಸ್ ನ ಸಹ ಕಾರ್ಯಕ್ರಮಾಧಿಕಾರಿ ಆರ್. ರಾಧಾ ಉಪಸ್ಥಿತರಿದ್ದರು. ಶಿಬಿರಾರ್ಥಿಗಳ ರಾಷ್ಟ್ರೀಯ ಸೇವಾ ಯೋಜನೆ ಗೀತೆಯೊಡನೆ ಪ್ರಾರಂಭವಾದ ಸಮಾರಂಭದಲ್ಲಿ ಶಿಬಿರಾರ್ಥಿ ನಾಗಲಾಂಬಿಕಾ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಬಿ.ಎಲ್. ಸಿಂಚನಾ ವಂದಿಸಿದರು.