ಮೈಸೂರು: ರಾಜ್ಯದ ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯವನ್ನು ಹಣಿಯಲೆಂದು ಆರ್ಎಸ್ಎಸ್ ಕುತಂತ್ರ ರೂಪಿಸಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೇತೃತ್ವದ ರಾಜ್ಯ ಸರ್ಕಾರ ಯಾವುದೇ ವೈಜ್ಞಾನಿಕ ವರದಿ ಪರಿಗಣಿಸದೆ ತರಾತುರಿಯಲ್ಲಿ ಮುಸ್ಲಿಂ ಸಮುದಾಯದ ಶೇ.4 ಮೀಸಲಾತಿ ರದ್ದು ಹಾಗೂ ಒಳ ಮೀಸಲಾತಿ ಹೆಚ್ಚಳ ನಿರ್ಧಾರ ಕುರಿತು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿ ಛೀಮಾರಿ ಹಾಕಿರುವುದನ್ನು ಸ್ವಾಗತಿಸುವುದಾಗಿ ಹೇಳಿದರು.
ಒಳ ಮೀಸಲಾತಿ ಕುರಿತಂತೆ ಬಹಳಷ್ಟು ವರ್ಷಗಳಿಂದ ಒತ್ತಾಯವಿತ್ತು. ಅದರಂತೆ ಸದಾಶಿವ ಆಯೋಗ ವೈಜ್ಞಾನಿಕ ವರದಿಯನ್ನೂ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಅದನ್ನು ತಿರಸ್ಕರಿಸಿ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ನೀಡಿದ ಕೇವಲ 4 ಪುಟಗಳ ಮಧ್ಯಂತರ ವರದಿ ಪಡೆದು ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ತರಾತುರಿಯಲ್ಲಿ ಒಳ ಮೀಸಲಾತಿ ಬದಲಾವಣೆ ಹಾಗೂ ಮುಸ್ಲಿಮರಿಗೆ ಇದ್ದ ಶೇ.4ರಷ್ಟು ಮೀಸಲಾತಿ ರದ್ದುಗೊಳಿಸುವ ನಿರ್ಧಾರ ಕೈಗೊಂಡಿತು ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದಿನ ಯಾವುದೇ ಪಕ್ಷ, ಯಾವುದೇ ಸರ್ಕಾರ ಕೈಗೊಳ್ಳದ ನಿರ್ಧಾರ ನಾವು ಕೈಗೊಂಡಿದ್ದೇವೆ ಎಂದು ಚುನಾವಣೆ ವೇಳೆ ಬಡಾಯಿ ಕೊಚ್ಚಿಕೊಳ್ಳುವ ಕಾರಣದಿಂದಾಗಿ ಈ ರೀತಿ ಮಾಡಿದೆ. ಇದೇ ವೇಳೆ, ಮೀಸಲಾತಿ ಯಾವುದೇ ಕಾರಣಕ್ಕೂ ಶೇ.50 ಮೀರಬಾರದು ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ಇಂದಿರಾ ಸಹಾನಿ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಗಾಳಿಗೆ ತೂರಿ ರಾಜ್ಯ ಸರ್ಕಾರ ಮೀಸಲು ಹೆಚ್ಚಳ ಮಾಡಿತು. ಹೀಗಾಗಿ ಸುಪ್ರೀಂಕೋರ್ಟ್ ಛೀಮಾರಿ ಹಾಕಿರುವ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿರ್ಧಾರ ವಾಪಸ್ ಪಡೆಯಬೇಕೆಂದು ಇದೇ ವೇಳೆ ಹೇಳಿದರು.