ಮೈಸೂರು: ರಾಜ್ಯ ಸರ್ಕಾರ ಜೀವಂತವಾಗಿದ್ದರೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಬೆಂಗಳೂರು ಜೈನ್ ವಿಶ್ವವಿದ್ಯಾನಿಲಯದ ಅನುಮತಿ ಹಿಂಪಡೆದು, ಆಡಳಿತ ಮಂಡಳಿ ಸದಸ್ಯರನ್ನು ಜೈಲಿಗೆ ಕಳುಹಿಸುವಂತೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರದರ್ಶಿಸಿದ ಕಿರುನಾಟಕದಲ್ಲಿ ಬಿ.ಆರ್.ಅಂಬೇಡ್ಕರ್ ಅವರನ್ನು ಬಿಯರ್ ಅಂಬೇಡ್ಕರ್ ಎಂದು ಗೇಲಿ ಮಾಡಲಾಗಿದೆ. ಶ್ರೋತೃಗಳಾಗಿದ್ದ ಪ್ರಾಧ್ಯಾಪಕರು ಚಪ್ಪಾಳೆ ತಟ್ಟಿದ್ದಾರೆ. ಮುಟ್ಟಿಸಿಕೊಳ್ಳಬೇಡ ಎಂದು ನೇರವಾಗಿ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾಟಕ ಪ್ರದರ್ಶನಕ್ಕೂ ಮುಂಚೆ 4ಬಾರಿ ರಿಹರ್ಸಲ್ ಮಾಡಿದ್ದಾರೆ. ಎಲ್ಲ ಗೊತ್ತಿದ್ದು ಸಂವಿಧಾನ ಶಿಲ್ಪಿಗೆ ಅವಹೇಳನ ಮಾಡಲಾಗಿದೆ. ಖಾಸಗಿ ವಿವಿಯಲ್ಲಿ ಯಾರ ಲಂಗು ಲಾಗಮು ಇಲ್ಲ. ಜೈನ್ ವಿವಿ ಸಿ.ಟಿ.ರವಿ ಉನ್ನತ ಶಿಕ್ಷಣ ಸಚಿವರಾಗಿದ್ದ ಕಾಲದಲ್ಲಿ ಶುರುವಾಯಿತು. ಘಟನೆ ನಡೆದು ವಾರದ ಬಳಿಕ ಉನ್ನತ ಶಿಕ್ಷಣ ಸಚಿವರು ಪ್ರತಿಕ್ರಿಯಿಸಿದ್ದಾರೆ. ಶಿಕ್ಷಣವನ್ನು ಯಾವ ರೀತಿ ಹಾಳು ಮಾಡಿದ್ದೇವೆ ಎಂಬುದಕ್ಕೆ ಇವೆಲ್ಲ ಉದಾಹರಣೆಗಳು ಎಂದರು.
ಸಂವಿಧಾನ ರಕ್ಷಕರಾದ ರಾಜ್ಯಪಾಲರು ಕೈ ಕಟ್ಟಿ ಕುಳಿತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಏನು ಮಾಡುತ್ತಿದೆ? ಸಿಆರ್ಇ ಸೆಲ್ ಕೆಲಸ ಏನು? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ ಸ್ವಯಂ ಪ್ರಕರಣ ದಾಖಲಿಸಬೇಕಿತ್ತು. ಪ್ರತಿ ಪಕ್ಷಗಳ ನಾಯಕರು, ಪ್ರಜಾಪ್ರಭುತ್ವವಾದಿಗಳು, ಅಂಬೇಡ್ಕರ್ವಾದಿಗಳು, ಪ್ರಗತಿಪರರು ಯಾಕೇ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ವಿಶ್ವದಲ್ಲಿ ಭಾರತ ಮತ್ತು ಭಾರತೀಯರಿಗೆ ಅಂಬೇಡ್ಕರ್ ಬರೆದ ಗಣತಂತ್ರವಾದಿ ಸಂವಿಧಾನದಿಂದ ಗೌರವ ಬಂದಿದೆ. ಭಾರತೀಯರಿಗೆ ಮಹಾಭಾರತ, ರಾಮಾಯಣ, ಕುರಾನ್, ಬೈಬಲ್ಗಿಂತ ಮಿಗಿಲಾದದ್ದೂ ಭಾರತದ ಸಂವಿಧಾನ. ಸಂವಿಧಾನ ಬರೆದವರ ಬಗ್ಗೆಯೇ ಗೇಲಿ, ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ಗಂಭೀರವಾಗಿ ಯೋಚನೆ ಮಾಡಬೇಕು ಎಂದರು.