ಮೈಸೂರು: ದೇಶದಲ್ಲಿ ರಾಹುಲ್ಗಾಂಧಿಗೆ ಒಂದು ಕಾನೂನು, ಸಿ.ಟಿ.ರವಿ, ಈಶ್ವರಪ್ಪ, ಅಶ್ವತ್ಥ್ನಾರಾಯಣ್ಗೆ ಒಂದು ಕಾನೂನು ಇದೆಯಾ ಎಂದು ವಿಧಾನ ಪರಿಷತ್ ಸದಸ್ಯಎಚ್.ವಿಶ್ವನಾಥ್ ಪ್ರಶ್ನಿಸಿದರು.
ಚುನಾವಣೆ ಸಂದರ್ಭದಲ್ಲಿ ನಡೆದ ಭಾಷಣದಲ್ಲಿ ಉದ್ವೇಗಕ್ಕೆ ಒಳಗಾಗಿ ರಾಹುಲ್ಗಾಂಧಿ ಮಾತನಾಡಿದ್ದಾರೆ ನಿಜ. ಆದರೆ ಅದೇ ರೀತಿ ಉದ್ವೇಗಕ್ಕೆ ಒಳಗಾಗಿ ವಿಪP ನಾಯಕ ಸಿದ್ದರಾಮಯ್ಯನನ್ನು ಮುಗಿಸಿ ಎಂದ ಅಶ್ವತ್ಥ್ನಾರಾಯಣ್ ಗಾಗಲಿ, ಎಲ್ಲರನ್ನೂ ನಿಂದಿಸುವ ಬಸವನಗೌಡ ಪಾಟೀಲ ಯತ್ನಾಳ್, ಸಿ.ಟಿ. ರವಿ ಮತ್ತು ಈಶ್ವರಪ್ಪ ಮೇಲಾಗಲಿ ಒಂದು ಸಣ್ಣ ಪ್ರಕರಣವೂ ದಾಖಲಾಗಿಲ್ಲವಲ್ಲ? ಇವರಿಗೆ ಬೇರೆ ಕಾನೂನು ಇದೆಯಾ ಎಂದರು.
2019ರಲ್ಲಿ ರಾಹುಲ್ಗಾಂದಿ ಅವರು ನೀಡಿದ ಹೇಳಿಕೆಯನ್ನಿಟ್ಟುಕೊಂಡು ಈಗ ಸೂರತ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಶಿಕ್ಷೆ ವಿಧಿಸುತ್ತಿದ್ದಂತೆಯೇ ಸಂಸದೀಯ ಮಂಡಳಿ ಸಭೆ ನಡೆಸಿ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಲಾಗಿದೆ. ಇದು ದೇಶದ ಜನತಂತ್ರ ವ್ಯವಸ್ಥೆಯನ್ನು ಅಣಕಿಸಿದಂತಿದೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಉzಶಪೂರ್ವಕವಾಗಿ ಮಾನಹಾನಿ ಪ್ರಕರಣದಡಿ ಶಿಕ್ಷೆಯ ಮಿತಿಯನ್ನು ಹೆಚ್ಚಿಸಲಾಗಿದೆ. ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ ಮುಗಿಸಲು ಈ ರೀತಿಯ ತಂತ್ರ ಅನುಸರಿಸಲಾಗಿದೆ. ರಾಹುಲ್ಗಾಂಧಿಯನ್ನು ಬುದ್ದಿಗೇಡಿ, ಪಪ್ಪು, ದೇಶದ್ರೋಹಿ ಎಂದೆಲ್ಲಾ ಹೇಳಿದರು. ಆಗ ಅವರಿಗೆ ಮಾನಹಾನಿ ಆಗಿಲ್ಲವೇ? ಎಂದು ಪ್ರಶ್ನಿಸಿದರು.
ಭಾರತ್ ಜೋಡೋ ಯಾತ್ರೆಯ ಮೂಲಕ ಇಡೀ ಭಾರತದಲ್ಲಿ ಪಾದಯಾತ್ರೆ ನಡೆಸಿ ಪಕ್ಷ ಸಂಘಟನೆಗೆ ಮುಂದಾಗಿದ್ದು ಮತ್ತು ವಿದೇಶದಲ್ಲಿ ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದ ಕಾರಣಕ್ಕೆ ಅವರ ವಿರುದ್ಧ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಯುನೆಸ್ಕೋ ಮತ್ತು ಲಂಡನ್ನಲ್ಲಿ ಪ್ರಜಾಪ್ರಭುತ್ವ ಕುರಿತು ಅವರು ಮಾತನಾಡುವವರಿದ್ದರು. ಈ ಎಲ್ಲಾ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹೀಗೆ ಮಾಡಲಾಗಿದೆ ಎಂದು ಅವರು ಟೀಕಿಸಿದರು.
ಬೇಕಂತಲೆ ಸೂರತ್ ನ್ಯಾಯಾಲಯಕ್ಕೆ ಎಳೆದು ತಮಗೆ ಬೇಕಾದ ನ್ಯಾಯಾಧೀಶರ ಮುಂದೆ ಇರಿಸಿದಂತೆ ಇದೆ. ಯಾರು ಕೇಂದ್ರದ ವಿರುದ್ಧ ಇರುತ್ತಾರೋ ಅವರಿಗೆ ಕಿರುಕುಳ ನೀಡಲಾಗುತ್ತದೆ. ಆದರೆ ಯಾರನ್ನು ಧಮನ ಮಾಡಲು ಯಾರಿಂದಲೂ ಆಗುವುದಿಲ್ಲ. ಆದರೆ ಕೇಂದ್ರ ಸರ್ಕಾರದಲ್ಲಿ ಶೇ.54ರಷ್ಟು ಮಂದಿ ಕ್ರಿಮಿನಲ್ಗಳೇ ಇದ್ದಾರೆ. ಅತ್ಯಾಚಾರಿಗಳು, ಕಳ್ಳತನ ಮಾಡಿದವರು, ಮಾಡಿಸುವವರು ಇದ್ದಾರೆ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗದ ಮೇಲೆ ವಿಶ್ವಾಸ ಕಡಿಮೆ ಆಗುತ್ತಿದೆ. ರಸ್ತೆ ರಸ್ತೆಯಲ್ಲಿ ಕೊಲೆ ಆಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡ ರೇವಣ್ಣ ಇದ್ದರು.