ಮೈಸೂರು: ಯಾವುದೇ ಸಮಸ್ಯೆಗಳು ಇಲ್ಲದೆ ಶಾಲೆಗಳು ಎಲ್ಲಾ ಮಕ್ಕಳಿಗೂ ಸುರಕ್ಷಿತ ಸ್ಥಳವಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜವಹಾರ್ ನವೋದಯ ವಿದ್ಯಾಲಯದ ನಿರ್ವಹಣಾ ಸಮಿತಿಯೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜವಹಾರ್ ನವೋದಯ ಶಾಲೆಯ ವಿನ್ಯಾಸ, ಫಲಿತಾಂಶ, ಹಾಗೂ ಶಾಲೆಯ ಸಮಸ್ಯೆಗಳ ಬಗ್ಗೆ ಆಲಿಸಿ, ಶಾಲೆಯಲ್ಲಿ ಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್ ಕುರಿತು ತಿಳಿದಿರಬೇಕು. ಹದಿಹರೆಯದವರ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬೇಕು. ಪರಿಸರ ಸ್ನೇಹಿ ವಾತಾವರಣವಿರಬೇಕು ಮತ್ತು ಹೊರಗಿನ ಸಂಪನ್ಮೂಲ ವ್ಯಕ್ತಗಳೊಡನೆ ಆಗಾಗ್ಗೆ ಸಂವಾದ, ಚರ್ಚೆಗಳನ್ನು ಏರ್ಪಡಿಸಿ ಎಂದು ತಿಳಿಸಿದರು.
ಶಾಲೆಯ ಪ್ರಾಂಶುಪಾಲರು ಮಾತನಾಡಿ, 24ಗಂಟೆಗಳ ವಿದ್ಯುಚ್ಛಕ್ತಿ, ಶಾಲಾ ವಾಹನ, ಮಳೆ ನೀರು ಕೊಯ್ಲು, ಶಾಲೆಯಲ್ಲಿ ತ್ಯಾಜ್ಯ ನಿರ್ವಹಣೆ, ೪೦೦ಮೀ. ಟ್ರ್ಯಾಕ್, ಬಾಸ್ಕೆಟ್ ಬಾಲ್ ಗ್ರೌಂಡ್, ಬಿಸಿ ನೀರಿನ ವ್ಯವಸ್ಥೆ, ಹಾಗೂ 4 ಅಧಿಕ ತರಗತಿ ಕೊಠಡಿಗಳನ್ನು ಒದಗಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಜವಾಹರ್ ನವೋದಯ ವಿದ್ಯಾಲಯದ ಸಿಬ್ಬಂದಿ ಒಳಗೊಂಡಂತೆ, ನಿರ್ವಹಣಾ ಸಮಿತಿಯ ಸದಸ್ಯರು ಹಾಗೂ ಪೋಷಕರು ಪಾಲ್ಗೊಂಡಿದ್ದರು.