ಮೈಸೂರು: ಮಸೀದಿ ದರ್ಗಾಗಳೆಂದರೆ ಉರ್ದು ಭಾಷೆಗೆ ಮಾತ್ರ ಆದ್ಯತೆ ನೀಡುವುದು ಸಹಜ. ಆದರೆ, ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪದ ಬೆಳಲೆ ಗ್ರಾಮದಲ್ಲಿರುವ ಹಜರತ್ ಸೈದಾನಿ ಬೀಬಿ ಮಾ ದರ್ಗಾ ಇದಕ್ಕೆ ತದ್ವಿರುದ್ಧವಾಗಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಿದೆ.
ಹೌದು ಪ್ರತಿ ಗುರುವಾರ ರಾತ್ರಿ 8 ಗಂಟೆಯಿಂದ 9 ಗಂಟೆವರೆಗೆ ಇಲ್ಲಿ ನಡೆಯುವ ಪ್ರಾರ್ಥನೆಯಲ್ಲಿ ಶುಭ ಸಂದೇಶವನ್ನು ನೀಡುತ್ತಾರೆ. ಸಾಮೂಹಿಕ ಪ್ರಾರ್ಥನೆಯ ಕಾರ್ಯಕ್ರಮಗಳೆಲ್ಲವೂ ಕನ್ನಡಮಯವಾಗುತ್ತವೆ. ಇದರಿಂದ ದರ್ಗಾ ಎಲ್ಲರ ಗಮನ ಸೆಳೆಯುತ್ತಿದೆ.
ಈ ದರ್ಗಾ ಗೆ ನೂರಾರು ವರ್ಷಗಳ ಇತಿಹಾಸವಿದೆ. ದರ್ಗಾದ ಗುರುಗಳಾದ ಶಂಸುದ್ದೀನ್ ಝರಿ ಕಾಜೂರ್ ಕನ್ನಡದಲ್ಲಿ ಶುಭ ಸಂದೇಶ ನೀಡುವ ಮೂಲಕ ಮಾತೃಭಾಷೆ ಕನ್ನಡ ಪ್ರೇಮವನ್ನು ಮೆರೆಯುತ್ತಾರೆ. ಹಿಂದೂ ಮುಸ್ಲಿಂ ಏಕತೆಯನ್ನು ಎತ್ತಿ ಸಮರಸ್ಯ ಭಾವೈಕ್ಯತೆಯನ್ನು ಮೂಡಿಸುತ್ತಿದ್ದಾರೆ. ದರ್ಗಾಕ್ಕೆ ಧರ್ಮ ಮತ್ತು ಜಾತಿ ಮೀರಿದ ಭಕ್ತರಿದ್ದಾರೆ. ತಮ್ಮ ಕಷ್ಟಗಳನ್ನು ಹೇಳಿಕೊಂಡು ಪರಿಹಾರಕ್ಕಾಗಿ ಬರುವ ಎಲ್ಲರ ಒಳಿತಿಗಾಗಿ ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿಯೇ ಪ್ರಾರ್ಥನೆ ನಡೆಸಬೇಕೆನ್ನುವ ಉದ್ದೇಶದಿಂದ ಕನ್ನಡ ಪ್ರಾರ್ಥನೆ ನಡೆಯುತ್ತಿದೆ ಎನ್ನಲಾಗಿದೆ.
ಗುರುಗಳ ಕಾಳಜಿ ಮತ್ತು ಧರ್ಮ ಶ್ರದ್ಧೆಯ ಕಾರಣದಿಂದ ದರ್ಗಾಗೆ ವಿವಿಧ ಜಿಲ್ಲೆಗಳಿಂದ ಮತ್ತು ಸುತ್ತಲಿನ ಗ್ರಾಮಗಳಿಂದ ಬರುವ ಭಕ್ತಾದಿಗಳಿಂದ ಮೆಚ್ಚುಗೆ ಪಡೆದಿದೆ. ಎಲ್ಲರಿಗೂ ಅರ್ಥವಾಗುವ ಕನ್ನಡ ಭಾಷೆಯಲ್ಲಿ ಪ್ರಾರ್ಥನೆ ಮಾಡಿ, ಜನತೆಯ ಸಂಕಷ್ಟಗಳ ಪರಿಹಾರಕ್ಕೆ ಒತ್ತು ನೀಡಿರುವ ದರ್ಗಾದ ಭಾಷಾ ಪ್ರೇಮ ಸ್ಥಳೀಯರಲ್ಲದೆ ಸುತ್ತ ಮುತ್ತಲಿನ ಎಲ್ಲಾ ಜನತೆಗೆ ಖುಷಿ ತಂದಿದೆ. ಭಾವೈಕ್ಯತೆಗೆ ಹೆಸರಾದ ದರ್ಗಾದ ಕನ್ನಡ ಪ್ರೇಮಕ್ಕೆ ಭಕ್ತರು ಮಾರು ಹೋಗಿದ್ದಾರೆ.
ದರ್ಗಾ ಹಿಂದೂ ಮುಸ್ಲಿಂ ಬೇಧ ಭಾವ ಇಲ್ಲದೆ ನಾವುಗಳು ಸಹ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇವೆ ಆದರೆ ಇಲ್ಲಿ ಪ್ರಾರ್ಥನೆ ಮಾಡುವಂತಹ ಗುರುಗಳು ಕನ್ನಡದಲ್ಲಿ ಅರ್ಥ ಆಗುವಂತೆ ಪೂಜೆ ಮಾಡುವಂಥದ್ದು ವಿಶೇಷವಾಗಿದೆ ಎಂದು ಶಿರಮಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವ ಶೆಟ್ಟಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಚಾಮರಾಜನಗರದ ಮಾಜಿ ಸಂಸದರಾದ ಸಿದ್ದರಾಜು, ಕಾಗಲವಾಡಿ ಶಿವಣ್ಣ , ಆರ್ ಧ್ರುವನಾರಾಯಣ್. ಸಂಸದ, ವಿ ಶ್ರೀನಿವಾಸ್ ಪ್ರಸಾದ್, ಮಾಜಿ ಶಾಸಕ ಹರ್ಷವರ್ಧನ್, ಮಾಜಿ ಸಚಿವರಾದ ಡಿಟಿ ಜಯ ಕುಮಾರ್, ಎಂ ಮಹದೇವ್, ಶಾಸಕರಾದ ತನ್ವೀರ್ ಸೇಟ್ , ದರ್ಶನ್ ಧ್ರುವನಾರಾಯಣ್ ಸೇರಿದಂತೆ ಪ್ರಮುಖರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ.