ಮೈಸೂರು: ಕಬ್ಬಿನ ಎಫ್ಆರ್ಪಿ ಮರುಪರಿಶೀಲನೆಗೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ ಐದನೇ ದಿನಕ್ಕೆ ಕಾಲಿಟ್ಟಿದೆ.
ಅರಣ್ಯವಾಸಿಗಳ ವೇಷ ಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾಕಾರರು “ನಮ್ಮನ್ನು ಏಕೆ ತಡೆಯುತ್ತಿದ್ದೀರಿ? ನಮ್ಮ ಸಮಸ್ಯೆಗಳನ್ನು ಬಗೆಹರಿಸದೆ ಕಾಡುಗಳ್ಳರಂತೆ ವರ್ತಿಸುತ್ತಿರುವ ಅಧಿಕಾರಿಗಳನ್ನು ಪ್ರಶ್ನಿಸಲಿ,” ಎಂದರು.
ಕಾರ್ಖಾನೆಗಳು ಸರ್ಕಾರದ ಆದೇಶಗಳನ್ನುಉಲ್ಲಂಘಿಸುತ್ತಿದ್ದರೂ ಜಿಲ್ಲಾಧಿಕಾರಿಗಳಿಗೆ ಕ್ರಿಮಿನಲ್ ಮೊಕದ್ದಮೆ ಹೂಡುವ ಅಧಿಕಾರವಿದ್ದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳು ತೂಕ, ಇಳುವರಿ, ಕಟಾವು ಮತ್ತು ಸಾಗಣೆ ವೆಚ್ಚದಲ್ಲಿ ವಂಚನೆ ಮಾಡುತ್ತಿದ್ದು, ಈ ಎಲ್ಲ ವಂಚನೆಗಳನ್ನು ತಪ್ಪಿಸಲು ಕಾರ್ಖಾನೆ ಮತ್ತು ರೈತರ ಈ ನಡುವೆ ದ್ವಿಪಕ್ಷೀಯ ತಿಳುವಳಿಕೆ (ಎಂಒಯು) ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ರೈತರು ಒತ್ತಾಯಿಸಿದರು.