ಮೈಸೂರು: ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಆನೆಗಳ ಅಲಂಕಾರವನ್ನು ಪ್ರತಿವರ್ಷವೂ ಹುಣಸೂರಿನ ಕಲಾವಿದ ನಾಗಲಿಂಗಪ್ಪ ನೇತೃತ್ವದ ತಂಡ ಮಾಡುತ್ತದೆ. ಬಳಿಕ ಪ್ರತಿ ಆನೆಗಳಿಗೆ ಗಾದಿ ನಮ್ದಾದ ಮೇಲೆ ಸುಂದರ ವಸ್ತ್ರಗಳನ್ನು ಹೊದಿಸಲಾಗುತ್ತದೆ. ಅದಾದ ನಂತರ ತಮ್ಮದೇ ಆದ ಕರ್ತವ್ಯಕ್ಕೆ ತೆರಳಲಿವೆ.
ಈ ಆನೆಗಳ ಪೈಕಿ ಅಭಿಮನ್ಯುವಿಗೆ ಹೆಚ್ಚಿನ ಜವಬ್ದಾರಿಯಿದೆ. ಆತನೇ ಅಂಬಾರಿ ಹೊರುವುದರಿಂದ ಅಂಬಾರಿ ಕಟ್ಟಲು ಅಣಿಯಾಗಬೇಕಿದೆ. ಅಭಿಮನ್ಯುಗೆ ಅಂಬಾರಿ ಕಟ್ಟುವುದು ಸುಲಭದ ಮಾತಲ್ಲ. ಇದು ನುರಿತ ಮಾವುತರು ಮತ್ತು ಅಧಿಕಾರಿಗಳು ನೆರವೇರಿಸುತ್ತಾರೆ. ಅಂಬಾರಿಯನ್ನು ಬೆನ್ನ ಮೇಲೆ ಕಟ್ಟುವ ಮುನ್ನ ಬೆನ್ನ ಮೇಲೆ ಮೆತ್ತನೆಯ ನಮ್ದಾ ಮತ್ತು ಗಾದಿ ಛಾಪನ್ನಿಟ್ಟು ಬಳಿಕವಷ್ಟೆ ಅಂಬಾರಿ ಕಟ್ಟಲಾಗುತ್ತದೆ.
ಆನೆಯ ಮೇಲೆ ನೇರವಾಗಿ 750 ಕೆಜಿಯ ಅಂಬಾರಿಯನ್ನು ಕಟ್ಟುವುದು ಅಸಾಧ್ಯ ಹೀಗಾಗಿ ಬೆನ್ನ ಮೇಲೆ ಗಾದಿ, ನಮ್ದಾ, ಛಾಪು ಹಾಕಿ ಕಟ್ಟಬೇಕಾಗುತ್ತದೆ. ಅವುಗಳನ್ನು ಕಟ್ಟಿದ ಬಳಿಕ ಅಂಬಾರಿಯನ್ನು ಕಟ್ಟಲಾಗುತ್ತದೆ. ಆನೆಯ ಬೆನ್ನಿನ ಮೇಲೆ ಅದಕ್ಕೆ ಚುಚ್ಚದಂತೆ, ನೋವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಗಾದಿ, ನಮ್ದಾ, ಛಾಪುನ್ನು ಬಳಸಲಾಗುತ್ತದೆ.
ಗಾದಿಯನ್ನು ಬೆನ್ನು ಮೇಲೆ ಕಟ್ಟಿ ಅದರ ಮೇಲೆ ಅಂಬಾರಿಯನ್ನು ಇಡಲಾಗುತ್ತದೆ. ಗಾದಿಯು ಅಂಬಾರಿ ಬೆನ್ನಿಗೆ ಒತ್ತುವುದನ್ನು ತಡೆಯುವುದಲ್ಲದೆ, ಬೆನ್ನ ಮೇಲೆ ಸಮರ್ಪಕವಾಗಿ ನಿಲ್ಲಲು ಸಹಾಯ ಮಾಡುತ್ತದೆ.
ಆನೆಗಳ ಬೆನ್ನಿಗೆ ಇದೆಲ್ಲವನ್ನು ಕಟ್ಟುವುದು ಸುಲಭದ ಕೆಲಸವಲ್ಲ. ಅದಕ್ಕೆ ನೈಪುಣ್ಯ ಬೇಕು. ಅದು ಗೊತ್ತಿರುವುದು ಮಾವುತರು, ಕಾವಾಡಿಗಳಿಗೆ ಮಾತ್ರ. ನಮ್ದಾ ಎಂದು ಕರೆಯುವ ಹೊದಿಕೆಯನ್ನು ಮೊದಲು ಆನೆಯ ಬೆನ್ನಿನ ಮೇಲೆ ಹೊದಿಸಲಾಗುತ್ತದೆ. ಈ ನಮ್ದಾವನ್ನು ಗೋಣಿಚೀಲ ಮತ್ತು ಬಿಳಿ ಕಾಟನ್ ಬಟ್ಟೆಯಿಂದ ಹೊಲೆದಿರುತ್ತಾರೆ. ಮೆತ್ತನೆಯ ಹೊದಿಕೆ ಮೇಲೆ ’ಗಾದಿ’ ಎಂದು ಕರೆಯುವ ಚೌಕಾಕಾರದ ದೊಡ್ಡ ಹೊರೆಯನ್ನು ಹೊರಿಸಲಾಗುತ್ತದೆ. ಈ ಗಾದಿಯ ತೂಕ ಸುಮಾರು ಮುನ್ನೂರು ಕೆ.ಜಿ ತೂಕ ಇರುತ್ತದೆ. ಈ ದೊಡ್ಡ ಗೋಣಿಚೀಲದಲ್ಲಿ ತುಂಬಿರುವುದು ಕೆರೆಯಲ್ಲಿ ಬೆಳೆಯುವ ಜೊಂಡು ಹುಲ್ಲು. ಇದನ್ನು ಸುಮಾರು ಸುಮಾರು ಎಂಬತ್ತು ರಿಂದ ತೊಂಬತ್ತು ಅಡಿ ಉದ್ದದ ಹಗ್ಗದಿಂದ ಬಿಗಿಯಲಾಗುತ್ತದೆ. ಅದರ ಮೇಲೆ ತೆಂಗಿನ ನಾರನ್ನು ತುಂಬಿ ಹತ್ತಿ ಬಟ್ಟೆಯಿಂದ ಹೊಲೆದ ಛಾಪುವನ್ನು ಹೊದಿಸಲಾಗುತ್ತದೆ.
ಈ ಮೂರನ್ನು ಸೇರಿಸಿ ಆನೆಯ ಹಿಂಭಾಗದಿಂದ ’ದುಮುಚಿ’ ಎಂಬ ರಬ್ಬರ್ ಮತ್ತು ಆನೆಯ ಹೊಟ್ಟೆ ಭಾಗಕ್ಕೆ ಚೆಸ್ಟ್ ಲೆಗ್ ರಬ್ಬರ್ ಹಗ್ಗ ಬಿಗಿಯಲಾಗುತ್ತದೆ ಇದರ ಮೇಲೆ ಅಂಬಾರಿಯನ್ನು ಕಟ್ಟಲಾಗುತ್ತದೆ.
ಸಾಮಾನ್ಯವಾಗಿ ಅಂಬಾರಿಯನ್ನು ಕಟ್ಟಲು ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ಕ್ರೇನ್ನ ಮೂಲಕ ಎತ್ತಿ ನಂತರ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನ ಇದಕ್ಕಾಗಿ ನಿರ್ಮಿಸಿರುವ ವೇದಿಕೆಯ ಮೇಲೆ ನಿಂತು ಅಂಬಾರಿಯನ್ನು ಬಿಗಿಯಾಗಿ ಕಟ್ಟುತ್ತಾರೆ.
ಅಂಬಾರಿ, ಗಾದಿ, ನಮ್ದಾ, ಮಾವುತ ಎಲ್ಲವೂ ಸೇರಿದರೆ ಸುಮಾರು ಸಾವಿರ ಕೆಜಿ ತೂಕವನ್ನು ಅಭಿಮನ್ಯು ಹೊತ್ತು ಮೆರವಣಿಗೆಯಲ್ಲಿ ಸಾಗಬೇಕಾಗಿದೆ. ಅಂಬಾರಿ ಕಟ್ಟಿದ ನಂತರ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅರಮನೆ ಆವರಣದಲ್ಲಿ ಸಂಜೆ 5.07 ರಿಂದ 5.18ಗಂಟೆಯೊಳಗೆ ಪುಷ್ಪಾರ್ಚನೆಯನ್ನು ಅಂಬಾರಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರು ನೆರವೇರಿಸಿದ ಬಳಿಕ ಜಂಬೂಸವಾರಿ ಸಾಗಲಿದೆ.