ಮೈಸೂರು: ಮೈಸೂರು ನಗರದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಮೂಲಕ ಗಣೇಶನ ಹಬ್ಬವನ್ನು ಆಚರಿಸಲಾಗುತ್ತಿದ್ದರೆ ಅತ್ತ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಮೈಸೂರು ದಸರಾ ಜಂಬೂಸವಾರಿ ರೂವಾರಿ ಅಭಿಮನ್ಯು ನೇತೃತ್ವದ ಗಜಪಡೆಗಳಿಗೆ ಸಾಂಪ್ರದಾಯಿಕ ಪೂಜೆಯನ್ನು ಸಲ್ಲಿಸಲಾಗಿದೆ.
ಪ್ರತಿ ವರ್ಷವೂ ಗಣೇಶ ಚತುರ್ಥಿ ಹಬ್ಬದ ವೇಳೆ ದಸರಾ ಗಜಪಡೆಗಳಿಗೆ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿ ಬಂದಿದೆ. ಏಕೆಂದರೆ ದಸರಾ ತಾಲೀಮಿಗಾಗಿ ಆಗಮಿಸುವ ಗಜಪಡೆ ಗಣೇಶ ಚತುರ್ಥಿ ವೇಳೆ ಅರಮನೆ ಆವರಣದಲ್ಲಿರುತ್ತವೆ. ಹೀಗಾಗಿ ಅವುಗಳಿಗೆ ಪೂಜೆ ಸಲ್ಲಿಸಿ ದಸರಾ ಜಂಬೂಸವಾರಿ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ವಿಘ್ನ ನಿವಾರಕ ವಿನಾಯಕನಲ್ಲಿ ಬೇಡಿಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಅಂಬಾರಿ ಹೊರುವ ಅಭಿಮನ್ಯು ಹಾಗೂ ಧನಂಜಯ, ಅರ್ಜುನ ಭೀಮ, ಮಹೇಂದ್ರ, ಗೋಪಾಲಸ್ವಾಮಿ, ಕಾವೇರಿ, ಚೈತ್ರ, ಲಕ್ಷ್ಮಿ ಹೀಗೆ ಒಂಬತ್ತು ಆನೆಗಳನ್ನು ಸಾಲಾಗಿ ನಿಲ್ಲಿಸಿ ಹೂವಿನ ಹಾರ ಹಾಕಿ ಅರಶಿನ ಕುಂಕುಮ ಹಚ್ಚಿ ಆರತಿ ಬೆಳಗಿ ಪೂಜೆಯನ್ನು ಸಲ್ಲಿಸಲಾಯಿತು. ಇದೇ ವೇಳೆ ಡಿಸಿಎಫ್ ಕರಿಕಾಳನ್ ಮತ್ತು ಅರಣ್ಯ ಸಿಬ್ಬಂದಿ, ಮಾವುತರು, ಕಾವಾಡಿಗರು ಇದ್ದರು.
ಪೂಜೆಯ ಬಳಿಕ ಗಜಪಡೆಗೆ ಗಣೇಶನಿಗೆ ಪ್ರಿಯವಾದ ಮೋದಕ, ವಿವಿಧ ಬಗೆಯ ತಿಂಡಿ ತಿನಿಸು, ಕಬ್ಬು, ಬೆಲ್ಲವನ್ನು ತಿನ್ನಿಸಲಾಯಿತು. ಸದ್ಯ ಮೊದಲ ಹಂತದಲ್ಲಿ ಒಂಬತ್ತು ಆನೆಗಳು ಬಂದಿದ್ದ ಉಳಿದ ಆನೆಗಳು ಶೀಘ್ರವೇ ವಿವಿಧ ಆನೆಶಿಬಿರಗಳಿಂದ ಆಗಮಿಸಲಿವೆ. ಈ ಬಾರಿಯ ಮೈಸೂರು ದಸರಾವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಸುಮಾರು 50 ಕೋಟಿ ವೆಚ್ಚದಲ್ಲಿ ದಸರಾ ಆಚರಿಸಲು ಸರ್ಕಾರ ಮುಂದಾಗಿದ್ದು, ದಸರಾಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ಆರಂಭಿಸಲಾಗಿದೆ.
ಇನ್ನು ಇದುವರೆಗೆ ಮಳೆ ಸುರಿಯುತ್ತಿದ್ದರೂ ಹಬ್ಬದ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ಮಳೆ ಬಿಡುವುಕೊಟ್ಟಿದೆ. ಇದರಿಂದ ಜನ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡಲಾಗಿದೆ. ಅಲ್ಲದೆ, ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯಗಳು ನಡೆದವು.