ಮೈಸೂರು: ಡಿ.7ರಂದು ನಡೆಯಲಿರುವ 29ನೇ ವರ್ಷದ ಹನುಮ ಜಯಂತಿ ಮೆರವಣಿಗೆಯ ಅಂಗವಾಗಿ ಹಳೇ ವಿಜಯಾ ಬ್ಯಾಂಕ್ ಆವರಣದಲ್ಲಿ ಹನುಮಂತೋತ್ಸವ ಸಮಿತಿ ಕಚೇರಿಯನ್ನು ಸಾಂಬಸದಾಶಿವಸ್ವಾಮೀಜಿ ಹಾಗೂ ನಟರಾಜ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಟರಾಜಸ್ವಾಮೀಜಿ ಮಾತನಾಡಿ, ಜಿಲ್ಲೆಯ ಹುಣಸೂರಿನಲ್ಲಿ ಕೋವಿಡ್-19 ಮತ್ತಿತರ ಕಾರಣಗಳಿಂದ ಕಳೆದ 2ರಿಂದ 3 ವರ್ಷಗಳಿಂದ ಹನುಮಂತೋತ್ಸವ ಮೆರವಣಿಗೆಯನ್ನು ಸರಳವಾಗಿ ಆಚರಿಸಲಾಗುತ್ತಿತ್ತು. ಈ ಬಾರಿ ನಿಗದಿಯಂತೆ ಅದ್ಧೂರಿಯಾಗಿ ಉತ್ಸವ ಆಚರಿಸಲು ಸಮಿತಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಾಂಬಸದಾಶಿವ ಸ್ವಾಮೀಜಿ ಮಾತನಾಡಿ, ಹನುಮಂತ ದೇವರು ಎಲ್ಲರ ಆರಾಧ್ಯ ದೈವವಾಗಿದ್ದು, ಈ ಬಾರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಮಿತಿ ನಿರ್ಧರಿಸಿದ್ದು, ತಾಲೂಕಿನ ಜನತೆ ಶ್ರದ್ಧಾಭಕ್ತಿಯಿಂದ ಆಚರಿಸುವಂತೆ ಕೋರಿದರು.
ಉತ್ಸವ ಸಮಿತಿ ಅಧ್ಯಕ್ಷ ವೆಂಕಟನಾರಾಯಣ ದಾಸ್ ಮಾತನಾಡಿ, ನಗರದಲ್ಲಿ ರಸ್ತೆ ತಡೆ ಹಿಂಪಡೆದಿದ್ದು, ಎಲ್ಲ ಪ್ರಮುಖ ರಸ್ತೆಗಳಲ್ಲಿ ಉತ್ಸವ ನಡೆಸಲಾಗುತ್ತಿದೆ. ಈ ಬಾರಿ ತಾಲೂಕಿನ ವಿಶೇಷವಾಗಿ ನಗರದ ವಿವಿಧ ಗರಡಿ ಮನೆಗಳಿಂದ ಹನುಮಂತನ ಮೂರ್ತಿಗಳನ್ನು ತರಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಹನುಮಂತೋತ್ಸವದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.