ಮೈಸೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಪ್ರಯುಕ್ತ ಕಂದಾಯ ಸಚಿವ ಆರ್.ಅಶೋಕ್ ಅವರು ನ.19 ರಂದು ಹೆಚ್.ಡಿ.ಕೋಟೆ ತಾಲ್ಲೂಕಿನ ಕೆಂಚನಹಳ್ಳಿ ಹಾಡಿಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಂಗವಾಗಿ ನ.18 ರಂದೇ ಸಚಿವರು ಹೆಚ್.ಡಿ.ಕೋಟೆಗೆ ಆಗಮಿಸಲಿದ್ದು ಅಂದು ಕಾರಾಪುರ ಜಂಗಲ್ ಲಾಡ್ಜ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಲಿದ್ದು, ನ.19 ರಂದು ಕೆಂಚನಹಳ್ಳಿ ಗ್ರಾಮದಲ್ಲಿ ಸಭೆ ನಡೆಸಲಿದ್ದಾರೆ, ನಂತರ ಭೀಮನಕೊಲ್ಲಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ, ಅಂದು ಬ್ರಹ್ಮಗಿರಿ ಹಾಡಿಯಲ್ಲಿ ಆದಿವಾಸಿ ಜನರು, ರೈತರೊಂದಿಗೆ ಚರ್ಚೆ ನಡೆಸಲಿರುವ ಸಚಿವರು ವಿವಿಧ ಇಲಾಖೆಗಳಿಂದ ಸುಮಾರು 4 ಸಾವಿರ ಫಲಾನುಭವಿಗಳಿಗೆ ಭೂಮಿ, ಮನೆ ಸೇರಿದಂತೆ ವಿವಿಧ ಯೋಜನೆಗಳ ಸವಲತ್ತುಗಳನ್ನು ವಿತರಿಸಲಿದ್ದಾರೆ.
ಸಚಿವರ ಗ್ರಾಮ ವಾಸ್ತವ್ಯ ಹಿನ್ನಲೆಯಲ್ಲಿ ಈಗಾಗಲೇ ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚಿಸಿರುವ ಶಾಸಕ ಅನಿಲ್ ಚಿಕ್ಕಮಾದು ಅವರು ಕಂದಾಯ ಇಲಾಖೆ, ಆರ್.ಡಿ.ಪಿ.ಆರ್ ಇಲಾಖೆ, ಕೃಷಿ, ರೇಷ್ಮೆ, ತೋಟಗಾರಿಕೆ, ಅರಣ್ಯ, ಪೊಲೀಸ್, ಆರೋಗ್ಯ, ಶಿಕ್ಷಣ, ಪಶುವೈದ್ಯಕೀಯ, ಮೀನುಗಾರಿಗೆ, ಪಡಿತರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಕಾರ್ಮಿಕ ಇಲಾಖೆ, ಪಟ್ಟಣ ಪಂಚಾಯಿತಿ ಹಾಗೂ ಪುರಸಭೆ ಸೇರಿದಂತೆ ಎಲ್ಲ ಇಲಾಖೆ ಇಲಾಖೆಗಳು ತಮ್ಮ ಇಲಾಖೆಗಳ ಆರ್ಹ ಪಲಾನುಭವಿಗಳನ್ನು ಆಯ್ಕೆ ಮಾಡಿ ಕಾರ್ಯಕ್ರಮಕ್ಕೆ ಕರೆತಂದು ಸವಲತ್ತು ವಿತರಿಸಬೇಕು. ಹಕ್ಕುಪತ್ರ, ಸಬ್ಸಿಡಿ ಯೋಜನೆ, ಕೃಷಿ ಉಪಕರಣ, ಯಂತ್ರಗಳು, ಇನ್ನೀತರ ಸೌಲಭ್ಯಗಳನ್ನಿ ವಿತರಣೆ ಮಾಡಬೇಕು ಎಂದು ಖಡಕ್ ಆಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಯಾವುದೇ ಕುಂದು ಕೊರತೆ ಏರ್ಪಡದಂತೆ ಪ್ರತಿಯೊಬ್ಬರೂ ಸ್ಥಳದಲ್ಲಿ ಇದ್ದು ರಾಜ್ಯದಲ್ಲೇ ಯಶಸ್ವಿ ಕಾರ್ಯಕ್ರಮವಾಗಿಸಲು ಶ್ರಮಿಸುವಂತೆ ಹೇಳಿದ್ದಾರೆ.
ಸಚಿವರ ವಾಸ್ತವ್ಯಕ್ಕೆ ಬೇಕಾದ ಸಿದ್ದತೆ, ಅವರ ಜೊತೆಯಲ್ಲಿ ತಾಲ್ಲೂಕಿಗೆ ಆಗಮಿಸುವ ಅತಿಥಿಗಳು ಹಾಗೂ ಅಧಿಕಾರಿಗಳು ಉಳಿದಕೊಳ್ಳಲು ಬೇಕಾದ ವ್ಯವಸ್ಥೆ, ಬರುವ 15ಸಾವಿರ ಜನರಿಗೆ ಅತಿಥಿಗಳಿಗೆ ಊಟದ ವ್ಯವಸ್ಥೆ ಇನ್ನಿತರ ಕಾರ್ಯಕ್ರಮಗಳ ಚರ್ಚಿಸಿ, ಅಧಿಕಾರಿಗಳಿಂದ ಸಲಹೆ ಪಡೆದು, ಇದೆ ವೇಳೆ ಬಂದೋಬಸ್ತ್, ಊಟದ ವ್ಯವಸ್ಥೆ ಸೇರಿದಂತೆ ಕೆಲ ಮಹತ್ವದ ಜಾವಬ್ದಾರಿಗಳನ್ನು ನಿರ್ವಹಿಸಲು ಕೆಲ ಅಧಿಕಾರಿಗಳನ್ನು ನೇಮಿಸಿದ್ದಾರೆ.
ಪ್ರತಿಯೊಬ್ಬ ಅಧಿಕಾರಿಗಳು ತಮಗೆ ನೀಡಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು, ಇಲ್ಲಿ ನಮ್ಮ ಮೇಲಾಧಿಕಾರಿಗಳನ್ನು ಕೇಳಬೇಕು ನಮಗೆ ಆದೇಶ ಬಂದಿಲ್ಲ, ಅವರನ್ನು ಕೇಳಬೇಕು, ಇವರನ್ನು ಕೇಳಬೇಕು ಎಂದು ಇಲ್ಲ ಸಲ್ಲದ ಕುಂಟು ನೆಪ ಹೇಳುವಂತಿಲ್ಲ, ಇದು ಸರ್ಕಾರದ ಕಾರ್ಯಕ್ರಮ ತಾಲ್ಲೂಕಿಗೆ ಪ್ರಧಾನಮಂತ್ರಿ ಬಂದರೂ ಇಲ್ಲಿ ನಾನೇ ಅಧ್ಯಕ್ಷ ನನ್ನ ಮಾತನ್ನು ನೀವು ಚಾಚು ತಪ್ಪದೇ ಪಾಲಿಸಬೇಕು ಎಂದು ಈಗಾಗಲೇ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.