ಮೈಸೂರು: ಶಾಲಾ-ಕಾಲೇಜುಗಳಲ್ಲಿ ಶುಲ್ಕ ಕಟ್ಟಿಲ್ಲವೆಂದು ಪ್ರವೇಶಾತಿ ನಿರಾಕರಿಸದೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ವಿಚಾರದಲ್ಲಿ ತಕ್ಷಣವೇ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೈಸೂರು ನಗರಕ್ಕೆ ಪ್ರಥಮ ಬಾರಿಗೆ ಆಗಮಿಸಿ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಲ್ಕ ಕಟ್ಟಿಲ್ಲವೆಂದು ಯಾರನ್ನೂ ವಾಪಸ್ ಕಳುಹಿಸದಂತೆ ಸರ್ಕಾರ ಕ್ರಮವಹಿಸಲಿದೆ. ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿವೇತನ ಬಿಡುಗಡೆ ಮಾಡಿಲ್ಲ. ಶುಲ್ಕ ಕಟ್ಟದಿದ್ದರೆ ಪ್ರವೇಶಾತಿ ಇಲ್ಲವೆಂದು ಹೇಳಲಾಗಿತ್ತು. ಶುಲ್ಕ ಕಟ್ಟಿಸಿಕೊಂಡು ಪ್ರವೇಶ ಮಾಡಿಕೊಳ್ಳುವಂತೆ ಪ್ರಾಂಶುಪಾಲರಿಗೆ ಸುತ್ತೋಲೆ ಹೊರಡಿಸಿದ್ದರಿಂದ ಬಡ ಮಕ್ಕಳು ಸಮಸ್ಯೆ ಎದುರಿಸುತ್ತಿದ್ದರು.
ಮೊದಲು ವಿದ್ಯಾರ್ಥಿವೇತನ ನೇರವಾಗಿ ಬರುತ್ತಿತ್ತು. ಈಗ ಮಕ್ಕಳ ಖಾತೆಗೆ ಬರುವುದರಿಂದ ಕೆಲವು ಸಮಸ್ಯೆಗಳಾಗಿವೆ. ಕೂಡಲೇ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದ ಮೇಲೆ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.
ನನಗೆ ಇದೇ ಖಾತೆ ಬೇಕು ಎಂಬ ಒಲವು ಇರಲಿಲ್ಲ. ಇಂತಹದ್ದೇ ಖಾತೆ ಕೊಡುವಂತೆ ಕೇಳಿರಲಿಲ್ಲ. ಪ್ರತಿಯೊಂದು ಖಾತೆಗೂ ಪ್ರಾಮುಖ್ಯತೆ ಇದೆ. ಕೊಟ್ಟಿರುವ ಖಾತೆಯನ್ನೇ ಯಶಸ್ವಿಯಾಗಿ ನಿಭಾಯಿಸುತ್ತೇನೆ. ಮೂರು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆ ಯಾರ ಕೈಯಲ್ಲಿ ಇತ್ತು? ಯಾರು ಆಡಳಿತದಲ್ಲಿದ್ದರು ಎಂಬುದು ಗೊತ್ತಿದೆ. ಈಗ ಇಲಾಖೆ ಹೊಣೆ ಹೊತ್ತಿರುವುದರಿಂದ ಯಾವ ರೀತಿಯಲ್ಲಿ ಜನರಿಗೆ ಯೋಜನೆಗಳನ್ನು ರೂಪಿಸಬೇಕು ಎಂಬುದರ ಕುರಿತು ಸಮಾಲೋಚನೆ ಮಾಡುತ್ತೇನೆ ಎಂದರು.
ರಾಜಕೀಯ ಕಾರಣಕ್ಕಾಗಿ ವಿರೋಧ ಪಕ್ಷಗಳ ನಾಯಕರು ಮಾತನಾಡಬಾರದು. ಬಡವರ ಖಾತೆಗೆ ಹದಿನೈದು ಲಕ್ಷ ರೂ ಹಣ, ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ. ನಾವು ಹೇಳಿದ್ದನ್ನು ಮಾಡಿದ್ದೇವೆ. ಮಾಡಿದನ್ನು ಹೇಳುತ್ತೇವೆ. ಸುಳ್ಳನ್ನು ಸತ್ಯವೆಂದು ಹೇಳುವ ಜಾಯವಾನ ನಮ್ಮದಲ್ಲ. ಪ್ರಣಾಳಿಕೆಯಲ್ಲಿ ಘೋಷಿಸಿರುವ ಗ್ಯಾರಂಟಿಗಳನ್ನು ಕೊಡುವುದಿಲ್ಲ ಎಂದು ಹೇಳಿದವರು ಯಾರು, ಅದನ್ನು ಕೊಟ್ಟೇ ಕೊಡುತ್ತೇವೆ. ಚುನಾವಣೆಯಲ್ಲಿ ಸೋತ ಬಳಿಕ ಎದುರಾಳಿಗಳು ಹತಾಶರಾಗಿದ್ದಾರೆ. ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಬದ್ಧತೆ ಪ್ರಶ್ನೆ ಮಾಡುವ ನೈತಿಕತೆ ಇಲ್ಲ. ಸಚಿವ ಸಂಪುಟದ ಸದಸ್ಯರು ಒಗ್ಗೂಡಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.