ಮೈಸೂರು: ಜಿಲ್ಲೆಯ ಗ್ರಾಮೀಣ ಯುವ ಪ್ರತಿಭೆಗಳು ಒಟ್ಟಾಗಿ ಶ್ರೀ ರಾಜರಾಜೇಶ್ವರಿ ಕಂಬೈನ್ಸ್ ಬ್ಯಾನರ್ ನಲ್ಲಿ ನಿರ್ಮಿಸಿರುವ ‘ದೊಡ್ಡ ಹಟ್ಟಿ ಬೋರೇಗೌಡ’ ಚಲನ ಚಿತ್ರದ ಪೋಸ್ಟರ್ ಮತ್ತು ಹಾಡುಗಳ ವೀಡಿಯೋವನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಬಿಡುಗಡೆ ಮಾಡಲಾಯಿತು.
ಪೋಸ್ಟರ್ ಮತ್ತು ಹಾಡುಗಳ ವೀಡಿಯೋವನ್ನು ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಬನ್ನೂರು ಕೆ.ರಾಜು ಅವರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಅತ್ಯುತ್ತಮ ಕನ್ನಡ ಚಿತ್ರವೆಂದು ಮೊದಲ ಪ್ರಶಸ್ತಿ ಗಳಿಸಿರುವುದು ಮೈಸೂರಿಗರಿಗೆ ಹೆಮ್ಮೆಯ ವಿಚಾರವೆಂದು ಹೇಳಿದರು.
ಇದೊಂದು ಗ್ರಾಮೀಣ ಹಿನ್ನೆಲೆಯ ಚಿತ್ರವಾಗಿದ್ದು ಆಶ್ರಯ ಯೋಜನೆಯ ಮನೆ, ನಿವೇಶನಗಳಂತಹ ಸರ್ಕಾರದ ಸವಲತ್ತುಗಳು ಎಷ್ಟರಮಟ್ಟಿಗೆ ಅರ್ಹರಿಗೆ ತಲುಪುತ್ತಿದೆ ಹಾಗೆಯೇ ಎಷ್ಟೊಂದು ದುರುಪಯೋಗವಾಗುತ್ತಿದೆ ಎಂಬುದರ ಬಗ್ಗೆ ಕನ್ನಡಿ ಹಿಡಿಯುತ್ತದೆಂದರು. ತರ್ಲೆವಿಲೇಜ್, ಪರಸಂಗ ಚಿತ್ರಗಳಂತಹ ಗ್ರಾಮೀಣ ಹಿನ್ನೆಲೆಯ ಸಿನಿಮಾಗಳಿಂದ ಗುರುತಿಸಿಕೊಂಡಿರುವ ನಿರ್ದೇಶಕ ಕೆ.ಎಂ.ರಘು ಅವರು ಕಲ್ಪನೆಗಿಂತ ವಾಸ್ತವಕ್ಕೆ ಹೆಚ್ಚು ಒತ್ತು ಕೊಟ್ಟಿರುವ ‘ದೊಡ್ದ ಹಟ್ಟಿ ಬೋರೇಗೌಡ’ ನೈಜತೆಯ ಒಂದು ಸದಭಿರುಚಿ ಚಿತ್ರವಾಗಿದೆ.
ಕಣ್ಸೆಳೆವ ಗ್ರಾಮೀಣ ಪರಿಸರದಿಂದ ಹಿಡಿದು ಪ್ರತಿಭಾವಂತ ಕಲಾವಿದರ,ತಂತ್ರಜ್ಞರ ತನಕ ಬಹುತೇಕ ಎಲ್ಲರೂ ಹಳ್ಳಿಗಾಡಿನವರೇ ಆಗಿರುವುದು ಈ ಚಿತ್ರದ ವಿಶೇಷವಾಗಿದೆ. ಬಹಳಷ್ಟು ಸಮಾಜವನ್ನು ಹಾಳು ಮಾಡುವ ಕೆಟ್ಟ ಚಿತ್ರಗಳೆ ಬರುತ್ತಿರುವ ಇವತ್ತಿನ ಕಾಲಘಟ್ಟದಲ್ಲಿ ‘ದೊಡ್ಡ ಹಟ್ಟಿ ಬೋರೇಗೌಡ’ ನಮ್ಮ ಸಮಾಜಕ್ಕೊಂದು ಉತ್ತಮ ಸಂದೇಶ ನೀಡುವುದಲ್ಲದೆ ಇತರೆ ಚಿತ್ರೋದ್ಯಮಿಗಳಿಗೆ ಅಕ್ಷರಶಃ ಮಾದರಿಯಾಗುತ್ತದೆ.ಈಗಾಗಲೇ ಈ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಿರುವುದೇ ಇದರ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
‘ದೊಡ್ದ ಹಟ್ಟಿ ಬೋರೇಗೌಡ’ ಚಲನಚಿತ್ರದ ವಿತರಕರಾದ ಅನ್ನಪೂರ್ಣ ವೆಂಕಟೇಶ್ ಅವರು ಮಾತನಾಡಿ, ಸ್ವಂತ ಮನೆ ಹೊಂದ ಬೇಕೆಂಬುದು ಪ್ರತಿಯೊಬ್ಬರ ಕನಸು. ಎಂಥಾ ಐಷಾರಾಮಿ ಹೋಟೆಲ್ ನಲ್ಲಿ ಇದ್ದರೂ ಕೂಡ ಸ್ವಂತ ಮನೆಯಲ್ಲಿದ್ದು ಊಟ ಮಾಡಿ ಮಲಗುವ ನೆಮ್ಮದಿ ಅಲ್ಲೆಲ್ಲೂ ಸಿಗೋದಿಲ್ಲ.ಹಾಗಾಗಿ ‘ದೊಡ್ದಟ್ಟಿ ಬೋರೇಗೌಡ’ ಒಂದು ಉತ್ತಮ ಚಿತ್ರವಾಗಿರುವುದರಿಂದ ಇದರ ಪ್ರದರ್ಶನದ ಹಂಚಿಕೆಯನ್ನು ಮಾಡುತ್ತಿರುವೆ ಎಂದರು. ಚಿತ್ರದ ನಿರ್ದೇಶಕ ಕೆ.ಎಂ.ರಘು ಹಾಗೂ ನಿರ್ಮಾಪಕ ಕೆ.ಎಂ. ಲೋಕೇಶ್ ಮಾತನಾಡಿ ನಾವು ಒಂದು ಒಳ್ಳೆಯ ಚಿತ್ರವನ್ನು ಮಾಡಿದ್ದೇವೆ ಹಾಗಾಗಿ ಎಲ್ಲರೂ ಈ ಚಿತ್ರವನ್ನು ನೋಡಿ ನಮ್ಮನ್ನು ಪ್ರೋತ್ಸಾಹಿಸಿ ಎಂದರು.
ಪ್ರಧಾನ ಕಲಾವಿದ ಬೀರಿ ಹುಂಡಿ ಕೆ.ಶಿವಣ್ಣ ಸೇರಿದಂತೆ ಚಿತ್ರತಂಡದ ಕಲಾರತಿ, ಮಹಾದೇವ, ಗೀತಾ, ಲಾವಣ್ಯ, ನಾರಾಯಣಗೌಡ,ಕಾತ್ಯಾಯಿನಿ, ಮಹೇಶ್, ಗಿರೀಶ್,ಯೋಗೇಶ್, ಇನ್ನಿತರರಿದ್ದರು.