ಅರಸೀಕೆರೆ: ಜೆಡಿಎಸ್ ಪಾಳಯದಲ್ಲಿ ನಿರೀಕ್ಷೆ ಹೆಚ್ಚಿಸಿದ್ದ ಸಭೆ ಕೇವಲ ಅರಸೀಕೆರೆ ಕ್ಷೇತ್ರಕ್ಕೆ ಸೀಮಿತವಾಯಿತು. ಜೆಡಿಎಸ್ ನಿಂದ ಹೊರನಡೆದಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡರ ವಿರುದ್ಧ ಸಮರ ಸಾರುವುದಷ್ಟೇ ಸಭೆಯ ಉದ್ದೇಶದಂತಿತ್ತು.
ಸಭೆಯುದ್ದಕ್ಕೂ ಶಿವಲಿಂಗೇ ಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಮುಖಂಡರು, ದೇವೇಗೌಡರಿಂ ದಲೇ ಈ ಮಟ್ಟಕ್ಕೆ ಬೆಳೆದಿರುವ ಶಿವಲಿಂಗೇಗೌಡ, ಅವರ ಅನಾರೋಗ್ಯದ ಸಂದರ್ಭದಲ್ಲೂ ಭೇಟಿ ಮಾಡುವ ಸೌಜನ್ಯ ತೋರಿಲ್ಲ. ಅದರ ಶಾಪ ತಟ್ಟಲಿದೆ ಎಂದು ಹೇಳಿದರು.
ಈಗಾಗಲೇ ಜೆಡಿಎಸ್ನಿಂದ ಕಾಲ್ತೆಗೆದು ಕಾಂಗ್ರೇಸ್ನೊಂದಿಗೆ ಸಖ್ಯ ಬೆಳೆಸಲು ಮುಂದಾಗಿರುವ ಶಾಸಕ ಕೆ.ಎಂ ಶಿವಲಿಂಗೇಗೌಡರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರಲ್ಲದೆ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ಉಳಿಸಿಕೊಳ್ಳುವು ದಲ್ಲದೆ ಪಕ್ಷಕ್ಕೆ ದ್ರೋಹ ಮಾಡಿ ಬೆನ್ನು ತೋರುತ್ತಿರುವವರಿಗೆ ತಕ್ಕ ಪಾಠ ಕಲಿಸುವುದಾಗಿ ಟಾಂಗ್ ನೀಡಿದರು.
ನಗರದ ಅನಂತ ಇಂಟರ್ ನ್ಯಾಷನಲ್ ಪಕ್ಕದ ಮೈದಾನದಲ್ಲಿ ಜೆಡಿಎಸ್ ವತಿಯಿಂದ ಏರ್ಪಡಿಸಿದ್ದ ಭಾರಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ೨೦೦೪ರಲ್ಲಿ ಗಂಡಸಿ ಕ್ಷೇತ್ರದಿಂದ ೧೮ಮತಗಳಿಂದ ಸೋತ ಶಿವಲಿಂಗೇಗೌಡರನ್ನು ಅರಸೀಕೆರೆ ಕ್ಷೇತ್ರದಲ್ಲಿ ಅಂದು ಸಚಿವರಾಗಿದ್ದ ಹೆಚ್. ಡಿ ರೇವಣ್ಣ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಎಲ್ಲಾ ರೀತಿಯ ಶಕ್ತಿಗಳನ್ನು ತುಂಬಿ ಇವರು ಗೆಲ್ಲಲು ಕಾರಣರಾಗಿಲ್ಲವೆ ಈಗ ದೇವೇಗೌಡ ,ಕುಮಾರಸ್ವಾಮಿ ನೋಡಿ ಯಾರು ಓಟು ಹಾಕುತ್ತಾರೆ ಎಂದು ಹೇಳುವ ಮೂಲಕ ಪಕ್ಷಕ್ಕೆ ತಮಗೆ ಸಹಾಯ ಮಾಡಿದವರಿಗೆ ಮೋಸ ಮಾಡಲು ಹೊರಟ್ಟಿದ್ದಾರೆ ಎಂದು ಕಿಡಿಕಾರಿದರು.
ಕಳೆದ ಎರಡು ದಿನಗಳಿಂದ ಈ ಸಭೆಗೆ ಯಾರು ಹೋಗಬೇಡಿ ಎಂದು ಹಣ ಕೊಟ್ಟಿದ್ದು ಬೇರೇ ಪಕ್ಷದ ಸಮಾವೇಶಗಳಿಗೆ ಹೀಗೆ ಹೋಗಬೇಡಿ ಎಂದು ಹಣಕೊಟ್ಟಿದ್ದನ್ನು ಇದೇ ಪ್ರಥಮ ಭಾರಿ ಕೇಳಿದ್ದೀನಿ, ಆದರೂ ನನ್ನ ಅಣ್ಣ-ತಮ್ಮಂದಿರೂ ಅವರ ಹಣವನ್ನು ಧಿಕ್ಕರಿಸಿ ಸಮಾರಂಭಕ್ಕೆ ಬಂದಿದ್ದೀರಿ ನಿಮ್ಮ ಋಣವನ್ನು ನನ್ನ ಜೀವಮಾನದಲ್ಲಿ ಮರೆಯುವುದಿಲ್ಲ, ಜಾತಿ-ಜಾತಿಗಳನ್ನು ಎತ್ತಿಕಟ್ಟಿ ರಾಜಕೀಯ ಮಾಡುತ್ತಿರುವ ಶಿವಲಿಂಗೇಗೌಡ ಗಂಡಸಿ ಹೋಬಳಿ ನಾಗರಹಳ್ಳಿಗೆ ಬಂದಾಗ ನನ್ನನ್ನು ಬರಮಾಡಿ ಕೊಳ್ಳಲು ಬರಲಿಲ್ಲ , ನೀವು ಅಂದು ನಡೆದುಕೊಂಡ ರೀತಿಯೇ ಮುಂದೆ ಮಾಡುವ ದ್ರೋಹಕ್ಕೆ ಸಾಕ್ಷಿಯಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೇಸ್, ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸರ್ಕಾರದಿಂದ ನೀಡಿದ ಅನುದಾನಗಳ ೧ಬುಕ್ಲೆಟ್ ನ್ನೆ ಮಾಡಿ ಸಾವಿರಾರು ಕೋಟಿ ಅನುದಾನ ತಂದಿದ್ದೀನಿ ಎಂದು ಕ್ಷೇತ್ರಾದ್ಯಂತ ಹಂಚಿದ ಶಿವಲಿಂಗೇಗೌಡರು ಇಂದು ಸಿದ್ಧರಾಮಯ್ಯನವರ ಜಪ ಮಾಡುತ್ತಿದ್ದಾರೆ. ಅವರು ಈ ಕ್ಷೇತ್ರದ ಅಭಿವೃದ್ಧಿಗಾಗಿ ತಂದ ಎಲ್ಲಾ ಕಡತಗಳಿಗೆ ಸಹಿ ಮಾಡಿದ್ದೀನಿ. ಎತ್ತಿನಹೊಳೆ ಸೇರಿದಂತೆ ಹಲವಾರು ಯೋಜನೆಗಳಿಗೆ ಅನುದಾನ ನೀಡಿದ್ದೀನಿ, ೨೨೦ ವಿದ್ಯುತ್ ರಿಸೀವಿಂಗ್ ಸೆಂಟರ್ ಈ ಅನುಮತಿ ನೀಡಿದ್ದೀನಿ, ಅರಸೀಕೆರೆಗೆ ಎಂಜಿ ನಿಯರಿಂಗ್ ಕಾಲೇಜು ಬಂದಿದೆ ಎಂದರೆ ಅದು ಈ ಕುಮಾರಸ್ವಾಮಿ, ತೆಂಗಿನ ತೋಟದಲ್ಲಿ ನಾಟಕವಾಡಲು ಕುಳಿತ್ತಿದ್ದರಲ್ಲ ಆಗ ಅದಕ್ಕೆ ಪರಿಹಾರ ಸಿದ್ದರಾಮಯ್ಯನವರು ಕೊಟ್ಟರೆ ಚನ್ನರಾಯಪಟ್ಟಣ ಹಾಗೂ ಅರಸೀಕೆರೆ ತಾಲೂಕಿಗೆ ೫೩ ಕೋಟಿ ತೆಂಗು ಬೆಳೆ ನಾಶಕ್ಕೆ ಪರಿಹಾರ ಕೊಟ್ಟಿದ್ದು ನಮ್ಮ ಸರ್ಕಾರ ಎಂದ ಅವರು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂ ದ್ರ ಸ್ವಾಮಿಗಳು ಅರಸೀಕೆರೆಯಲ್ಲಿ ಕುರುಬರು ಅಭ್ಯರ್ಥಿಯಾದರೆ ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದ್ದಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅಶೋಕ್ ಅಧಿಕೃತ ಅಭ್ಯರ್ಥಿ ಘೋಷಿಸಿದರು.
ನಮ್ಮ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಕೊಬ್ಬರಿಗೆ ೧೫ಸಾವಿರ ಬೆಲೆ ನಿಗಧಿಗೊಳಿ ಸದಿದ್ದರೆ ನನ್ನ ಮುಖವನ್ನು ಮತ್ತೊ ಮ್ಮೆ ನಿಮಗೆ ತೋರಿಸುವುದಿಲ್ಲ ಪ್ರತಿ ಗ್ರಾಮ ಪಂಚಾಯಿತಿಗೆ ೩೦ ಹಾಸಿಗೆಯ ಆಸ್ಪತ್ರೆಗಳನ್ನು ನಿರ್ಮಿಸಿ ೨೪ಗಂಟೆ ಸೇವೆ ದೊರೆಯುವಂತೆ ಮಾಡುವುದರೊಂದಿಗೆ ಮುಂಗಾರು ಆರಂಭಕ್ಕೆ ಮುನ್ನ ರೈತರಿಗೆ ಗೊಬ್ಬರ ಹಾಗೂ ಬಿತ್ತನೆ ಬೀಜಕೊಳ್ಳಲು ಎಕ್ಕರೆಗೆ ೧೦ಸಾವಿರದಂತೆ ರೈತರ ಮನೆ ಬಾಗಿಲಿಗೆ ಕೊಡಿಸುವ ವ್ಯವಸ್ಥೆ ಮಾಡಿಸುತ್ತೇನೆ. ರಾಗಿಯನ್ನು ಮಾರಾಟ ಮಾಡದೆ ಅದರಿಂದ ಬಿಸ್ಕೇಟ್ ಸೇರಿದಂತೆ ಬೇರೆ-ಬೇರೆ ಉತ್ಪನ್ನಗಳನ್ನು ಮಾಡಲು ಯಂತ್ರಗಳ ಖರೀದಿಗೆ ಸರ್ಕಾರದ ನೆರವು ನೀಡಿ ತೆಂಗು ಬೆಳೆಗಾ ರರಿಗೂ ವಿವಿಧ ಉತ್ಪನ್ನಗಳನ್ನು ಮಾಡಲು ಅವಕಾಶ ನೀಡಿ ಈ ಎರಡು ಪದಾರ್ಥಗಳ ಮಾರುಕಟ್ಟೆಗೆ ಸರ್ಕಾರದಿಂದ ಅವಕಾಶ ನೀಡಲಾಗುವುದು . ಸ್ತ್ರೀ ಶಕ್ತಿ ಸಂಗಗಳ ಎಲ್ಲಾ ಸಾಲವನ್ನು ಮನ್ನಮಾಡಲಾಗುವುದು,ಮನೆ ಇಲ್ಲದ ಎಲ್ಲಾ ನಿರ್ಗತಿಕತಿಗೆ ೫ಲಕ್ಷ ವೆಚ್ಚದ ಮನೆ ನಿರ್ಮಾಣ , ವೃದ್ಧಿರಿಗೆ -ವಿಧವೆಯರಿಗೆ ೫ಸಾವಿರ ತಿಂಗಳ ಭತ್ಯೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಮಾತನಾಡಿ ಜನತಾದಳದ ಜೊತೆ ಮದುವೆ ,ಕಾಂಗ್ರೇಸ್ ಜೊತೆ ಲವ್ವಿ ಡವ್ವಿ ಇಟ್ಟುಕೊಂಡು ಶಿವಲಿಂಗೇಗೌಡರು ೯೨ವರ್ಷದ ದೇವೇಗೌಡರು ಹುಷಾರಿಲ್ಲದೆ ಮಲಗಿದ್ದರೂ ಸೌಜನ್ಯಕ್ಕೂ ಹೋಗಿ ನೊಡಲಿಲ್ಲ .ಕುಮಾರಸ್ವಾಮಿ, ಹೆಚ್.ಡಿ ರೇವಣ್ಣ ಇವರನ್ನು ರಾಜಕೀಯವಾಗಿ ಬೆಳೆಸಿ ದರು .ಆದರೆ ದೇವೇಗೌಡರಿಗೆ ಈ ವಯಸ್ಸಿನಲ್ಲಿ ವಿಷ ಕೊಡುವ ಕೆಲಸವನ್ನು ಮಾಡಿದ್ದಾರೆ . ಸೀಟು ಬೇಕು ಎಂದಾಗ ದೇವೇಗೌಡ ,ಲವ್ ಬೇಕು ಎಂದಾಗ ಸಿದ್ಧರಾ ಮಯ್ಯ, ಜನತಾದಳ ಒಬ್ಬ ಶಿವಲಿಂಗೇಗೌಡನಿಂದ ಅಲ್ಲ ಸಾವಿರಾರು ಜನ ಕಾರ್ಯ ಕರ್ತರಿಂದ ಇದು ಸಜ್ಜನರ, ಮರ್ಯಾದಸ್ತರ ಪಕ್ಷ, ಇದು ರೈತ ಮಕ್ಕಳ ಪಾರ್ಟಿ ನಾವ್ಯಾರು ಜೈಲಿನಲ್ಲೂ ಇಲ್ಲ ಬೇರೆಲ್ಲೂ ಇಲ್ಲ, ಕಾಂಗ್ರೇಸ್ನವರು ,ಬಿಜೆಪಿಯವರು ಜೈಲ್ನಾಗೂ ಅದಾರೆ, ಬೇಲ್ನಾಗೂ ಅದಾರೆ ರಾತ್ರಿಕಂಡ ಬಾವಿಯಲ್ಲಿ ಹಗಲು ಹೋಗಿ ಬಿದ್ದಿ ದ್ದಾನೆ ಶಿವಲಿಂಗೇಗೌಡ ಎಂದು ಏಕ ವಚನದಲ್ಲಿ ಛೇಡಿಸಿದರು.
ಅರಸೀಕೆರೆಯಲ್ಲಿ ಜೆಡಿಎಸ್ ಗೋಕರ್ಣದಲ್ಲಿ ಆತ್ಮಲಿಂಗ ಬೇರು ಬಿಟ್ಟಂತೆ ಬಿಟ್ಟಿದೆ, ಹೆತ್ತ ಸೂತಕ ಹತ್ತು ದಿನ -ಸತ್ತ ಸೂತಕ ಹನ್ನೊಂದು ದಿನಕ್ಕೆ ತೀರುವುದು ಆದರೆ ಋಣದ ಸೂತಕ ಸಾಯುವ ತನಕ ತೀರುವುದಿಲ್ಲ . ದೇವೇಗೌಡರಿಗೆ ಕೊನೆಯ ಕಾಲದಲ್ಲಿ ನೋವು ಕೊಟ್ಟಿದ್ದೀರಾ ಇದರ ಶಾಪ ತಟ್ಟದೆ ಬಿಡೋದಿಲ್ಲ, ನಿಮ್ಮ ಬಳಿ ಹಣ ಬಲವಿದೆ ದೇವೇಗೌಡರ ಬಳಿ ಏನಿದೆ ?ಆದರೆ ಜನ ಬಲವಿದೆ ಎಂಬುದಕ್ಕೆ ಈ ಸಭೆ ಸಾಕ್ಷಿಯಾಗಿದೆ ಇದು ಕೊನೆಯ ಭಾರಿಯಲ್ಲ ಮತ್ತೆ ೩ಭಾರಿ ಅರಸೀಕೆರೆಗೆ ಬರುತ್ತೇನೆ ನೆರೆದಿರುವ ಕಾರ್ಯಕರ್ತರನ್ನು ಮರೆಯು ವುದಿಲ್ಲ ನೀವು ಬಂದ ಜನ ತಂದ ಜನ ಅಲ್ಲ. ಅರಸೀಕೆರೆ ಜನರಿಗೆ ಛಲ ಬಂದಿದೆ ಈ ಹಿಂದೆ ಆನಿವಾಳ್ ನಂಜಪ್ಪ ಚುನಾವಣೆಗೆ ಬಂದಾಗ ಅವರ ಬಳಿ ಏನೂ ಇರಲಿಲ್ಲ ಆದರೆ ವಿರೋಧ್ಧ ಪಕ್ಷದಲ್ಲಿ ದೇವರಾಜು ಅರಸು ಸರ್ಕಾರವಿತ್ತು ೪೦ಮಂತ್ರಿಗಳು ಹಣ ಹಿಡಿದು ಪ್ರಚಾರ ನಡೆಸಿದರು. ಜನಬಲವಿದ್ದ ಆನಿವಾಳ್ ನಂಜಪ್ಪ ಗೆಲುವು ಸಾಧಿಸಿದರು.ಅಂದು ಜನ ದೇವೇಗೌಡರನ್ನು ನೋಡಿ ಗೆಲ್ಲಿಸಿದರು, ಈ ಇತಿಹಾಸವನ್ನು ಮರೆಯಲಾಗದು ಎಂದು ಚಾಟಿ ಬೀಸಿದರು.
ಬಹಿರಂಗ ಸಭೆಯಲ್ಲಿ ಶಾಸಕರಾದ ಲಿಂಗೇಶ್ ,ಬಾಲಕೃಷ್ಣ, ಹೆಚ್.ಕೆ.ಕುಮಾರಸ್ವಾಮಿ ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಗಂಗಾಧರ್, ಜೆಡಿಎಸ್ ಮುಖಂಡರಾದ ಕೇಶವ, ಸಿಕಂದರ್, ದರ್ಶನ್, ಹರ್ಷವರ್ಧನ್,ಬಸವಲಿಂಗಪ್ಪ, ಮಾಜಿ ಜಿ.ಪಂ ಸದಸ್ಯೆ ಪ್ರೇಮಮ್ಮ ಲಿಂಗಪ್ಪ, ಇದ್ದರು