News Karnataka Kannada
Thursday, May 02 2024
ಮೈಸೂರು

ಮೈಸೂರು: ಸಂಗ್ರಹಕಾರರಿಗೆ ಆಸಕ್ತಿಯಷ್ಟೇ ತಾಳ್ಮೆ ಅಗತ್ಯ ಎಂದ ಬನ್ನೂರು ರಾಜು

Bannuru
Photo Credit : By Author

ಮೈಸೂರು: ಯಾವುದೇ ವಿಷಯ ಸಂಗ್ರಹಕಾರರಿಗೆ ಆಸಕ್ತಿಯಷ್ಟೇ ತಾಳ್ಮೆ ಮುಖ್ಯವಾಗಿದ್ದು ಅದರಂತೆ ಬಹಳ ಆಸಕ್ತಿ ಮತ್ತು ತಾಳ್ಮೆಯಿಂದ ಹಲವು ವರ್ಷಗಳಿಂದ ಶ್ರಮಪಟ್ಟು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಬಹು ಆಕರ್ಷಣೀಯ ದೈವವಾದ ಗಣೇಶನ ಬಗೆಗಿನ ನೂರಾರು ಚಿತ್ರ ಲೇಖನಗಳನ್ನು ಸಂಗ್ರಹಿಸಿ ಸಾರ್ವಜನಿಕವಾಗಿ ಪ್ರದರ್ಶನ ಕ್ಕಿಟ್ಟಿರುವ ಸಂಸ್ಕೃತಿ ಚಿಂತಕ ಕಾಳಿಹುಂಡಿ ಶಿವಕುಮಾರರ ಸಾರ್ಥಕ ಸೇವಾ ಕಾರ್ಯಕ್ಕೆ ಸಾರ್ವಜನಿಕರ ಮತ್ತು ಸಂಘ ಸಂಸ್ಥೆಗಳ ಹಾಗೂ ಸರ್ಕಾರದ ಪ್ರೋತ್ಸಾಹ ಸಿಗಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ವಿವೇಕಾನಂದ ನಗರ ವೃತ್ತದ ಸಮೀಪದಲ್ಲಿರುವ ನಿಮಿಷಾಂಬ ನಗರದ ಹಿರಿಯ ನಾಗರೀಕರ ಹಗಲು ಕ್ಷೇಮೆ ಕೇಂದ್ರದ ಆವರಣದಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ದೀಪ್ತಿ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ಸಂಸ್ಕೃತಿ ಚಿಂತಕ ಕಾಳಿಹುಂಡಿ ಶಿವಕುಮಾರ್ ಅವರ ಸಂಗ್ರಹದ ಗಣೇಶನ ಚಿತ್ರಲೇಖನಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಥಮ ಪೂಜಿತ ವಿನಾಯಕನ ಬಗ್ಗೆ ಬರೆಯದ ಲೇಖಕರೇ ಬಹುಶಃ ಇಲ್ಲವೆನ್ನುವಂಥ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಇವರೆಲ್ಲರ ಗಣೇಶನ ಕುರಿತು ಬರೆದ ಪ್ರಕಟಿತ ಚಿತ್ರ ಬರಹಗಳನ್ನು ಸಂಗ್ರಹಿಸುವುದು ಕಷ್ಟದ ಕೆಲಸವಾಗಿದ್ದರೂ ಇದನ್ನು ಬಹಳ ಇಷ್ಟಪಟ್ಟು ಕಾಳಿಹುಂಡಿ ಶಿವಕುಮಾರ್ ಅವರು ಮಾಡಿದ್ದಾರೆಂದರು.

ಮೇಲ್ನೋಟಕ್ಕೆ ಇದೊಂದು ಗಣೇಶನ ಚಿತ್ರಲೇಖನ ಸಂಗ್ರಹ ಪ್ರದರ್ಶನದಂತೆ ಕಂಡರೂ ಇದೊಂದು ಜ್ಞಾನದ ಆಗರವಾಗಿದೆ. ಅದರಲ್ಲೂ ವಿಶೇಷವಾಗಿ ವಿನಾಯಕನ ಅರಿವವರಿಗೆ ಮಾಹಿತಿಯ ಕಣಜವಾಗಿದೆ ಮಾತ್ರವಲ್ಲದೆ ಅಧ್ಯಯನಶೀಲರಿಗೆ ಆಕರದ ಅಂಗಳವಾಗಿದೆ. ಇಷ್ಟೆಲ್ಲವನ್ನೂ ಒಂದೆಡೆ ಸಿಗುವಂತೆ ಮಾಡಿರುವ ಶಿವಕುಮಾರ್ ಅವರ ಶ್ರಮ ಸಾರ್ಥಕವಾಗಬೇಕಾದರೆ ಎರಡು ದಿನಗಳ ತನಕ ಇರುವ ಈ ಪ್ರದರ್ಶನಕ್ಕೆ ಪ್ರತಿಯೊಬ್ಬರೂ ಭೇಟಿ ನೀಡಿ ವೀಕ್ಷಿಸಬೇಕು ಎಂದರು.

ಗಣಪತಿಯ ಚಿತ್ರಲೇಖನಗಳ ಸಂಗ್ರಹಕಾರ ಕಾಳಿಹುಂಡಿ ಶಿವಕುಮಾರ್ ಮಾತನಾಡಿ ತಾವು ಸರಿ ಸುಮಾರು 25 ವರ್ಷಗಳಿಂದಲೂ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಗಣೇಶನ ಚಿತ್ರಲೇಖನಗಳನ್ನು ಸಂಗ್ರಹಿಸುತ್ತಾ ಬಂದಿದ್ದು ಸಾವಿರಾರು ಗಣೇಶನ ಚಿತ್ರ ಲೇಖನಗಳನ್ನು ಸಂಗ್ರಹಿಸಿರುವೆ. ಅದರಲ್ಲಿ ಅಮೂಲ್ಯ ಎನಿಸುವಂತಹ ಕೆಲವನ್ನಷ್ಟೆ ಇಲ್ಲಿ ಪ್ರದರ್ಶನಗೊಳಿಸಿರುವೆ ಎಂದ ಅವರು ಇದಕ್ಕಾಗಿ ತಾವು ಪಟ್ಟ ಪರಿಶ್ರಮವನ್ನು ಸವಿವರವಾಗಿ ವಿವರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ನಾಗರೀಕರ ಹಗಲು ಕ್ಷೇಮ ಕೇಂದ್ರದ ಅಧ್ಯಕ್ಷ ಪ್ರಭುಸ್ವಾಮಿ ಅವರು, ನಮ್ಮ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಗಣಪತಿಗೂ ಅವಿನಾಭಾವ ಸಂಬಂಧ ಉಂಟು. ವಿಘ್ನ ವಿನಾಶಕ ಗಣೇಶನು ನಮಗೆ ಎಲ್ಲವನ್ನೂ ಕೊಟ್ಟಿದ್ದಾನೆ. ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡುವಲ್ಲಿಯೂ ಪ್ರಮುಖ ಪಾತ್ರವವಹಿಸಿದ್ದಾನೆ. ಒಂದು ರೀತಿ ಗಣಪತಿಯು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರನೂ ಹೌದು ಎಂದರು.

ಹಾಗಾಗಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಾಲಗಂಗಾಧರ ತಿಲಕರು ಗಣೇಶೋತ್ಸವವನ್ನು ಪ್ರಾರಂಭಿಸಿ ಇಡೀ ದೇಶಕ್ಕೆ ಸ್ಪೂರ್ತಿ ತುಂಬಿದ್ದರೆಂದು ಹೇಳಿದರು.ಮುಕ್ತಕ ಕವಿ ಪರಿಷತ್ತಿನ ಅಧ್ಯಕ್ಷರೂ ಆದ ಖ್ಯಾತ ಕವಿ ಎಂ.ಮುತ್ತುಸ್ವಾಮಿ, ದೀಪ್ತಿ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಗೋವಿಂದಾಚಾರ್, ಹಿರಿಯ ನಾಗರಿಕ ವೇದಿಕೆಯ ವಿಶ್ರಾಂತ ಶಿಕ್ಷಕ ರಾಮಯ್ಯ, ಸಮಾಜ ಸೇವಕರಾದ ಶ್ರೀಕಂಠ ಮೂರ್ತಿ, ಕಾಳನಹುಂಡಿ ಸಿದ್ದರಾಮಪ್ಪ, ಗೋವಿಂದರಾಜ್ ಶ್ರೀಕಂಠ ಮೂರ್ತಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು