ಮೈಸೂರು: ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರು ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ನೀಡಿರುವ ಹೇಳಿಕೆಯಲ್ಲಿ ರಾಜಕೀಯ ವಾಸನೆ ಇದೆ ಎಂಬ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿಕೆಯನ್ನು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಆಕ್ಷೇಪಿಸಿದ್ದಾರೆ.
ಬಿಜೆಪಿ ಪಕ್ಷದಿಂದ ಎಂಎಲ್ಸಿ ಆಗಿರುವ ವಿಶ್ವನಾಥ್ ಗೌರವಾನ್ವಿತರು. ಕನ್ನಡ ಮನಸ್ಸು ಉಳ್ಳವರು. ಆದರೆ ಒಳ್ಳೆಯದಕ್ಕೂ ಬಂಡಾಯ, ಕೆಟ್ಟದಕ್ಕೂ ಬಂಡಾಯ. ಬಂಡಾಯ ಅವರ ಸ್ಥಾಯಿಭಾವ. ವಿಶ್ವನಾಥ್ ಅವರು ಡಾ. ಎಸ್.ಎಲ್.ಭೈರಪ್ಪನವರು ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ನೀಡಿರುವ ಹೇಳಿಕೆಗೆ ಬಗ್ಗೆ ಟೀಕಿಸಿರುವುದನ್ನು ಆಕ್ಷೇಪಿಸುತ್ತೇನೆ ಎಂದು ತಿಳಿಸಿದ್ದಾರೆ.
ದೇವನೂರು ಮಹದೇವರವರದ್ದು ಕೂಡ ರಾಜಕೀಯ ಹೇಳಿಕೆ, ನಡೆಗಳು ಇತ್ತೀಚೆಗೆ ಆಗುತ್ತಲೇ ಇದೆ. ಬರಗೂರು ರಾಮಚಂದ್ರಪ್ಪ ಮಾಡಿರುವ ಪರಿಷ್ಕರಣೆ ರಾಜಕೀಯ ಪ್ರೇರಿತವಾಗಿಯೇ ಇತ್ತು. ಎಲ್ಲೆಲ್ಲಿ ಭಾರತೀಯತೆ, ಹಿಂದು, ದೇಶಭಕ್ತಿ, ರಾಷ್ಟ್ರೀಯತೆ ಎಂಬ ಶಬ್ದಗಳು ಕಂಡು ಬರುತ್ತವೆಯೋ ಅಲ್ಲಿ ಎಲ್ಲ ಕತ್ತರಿ ಹಾಕಿದ್ದರು.
ಬರಗೂರು ರಾಮಚಂದ್ರಪ್ಪ ಪರಿಷ್ಕರಣೆ ಮಾತ್ರ ಅಲ್ಲ, ಇತಿಹಾಸವನ್ನೇ ತಿರುಚಿ ಬಿಟ್ಟಿದ್ದಾರೆ. ಇದನ್ನು ವಿಶ್ವನಾಥ್ ಗ್ರಹಿಸದೇ ಅದೇ ಪಠ್ಯಗಳು ಇರಲಿ ಎನ್ನುತ್ತಿದ್ದಾರೆ. ಪಠ್ಯಪುಸ್ತಕ ರಗಳೆ ಕೇವಲ ರಾಜಕೀಯ ಬೇಳೆ ಬೇಯಿಸಲು ವಿರೋಧಿಗಳ ತಂತ್ರವಷ್ಟೇ. ಇದೀಗ ಚುನಾವಣೆ ವರ್ಷವಾದುದರಿಂದ ಈ ಎಲ್ಲ ಕಸರತ್ತು ಒಂದು ವೇಳೆ ಬಿಜೆಪಿ ಸರ್ಕಾರ ಬಂದ ಆರಂಭದಲ್ಲೇ ಪರಿಷ್ಕರಣೆ ಮಾಡಿದ್ದರೆ ಯಾವುದೇ ತಕರಾರು ಇರುತ್ತಿರಲಿಲ್ಲ. ಎಲ್ಲವೂ ಚುನಾವಣೆಯ ಪ್ರಚಾರ ತಂತ್ರ ಅಷ್ಟೇ. ಇದೀಗ ಸರ್ಕಾರ ಪರಿಷ್ಕರಣೆ ತಿದ್ದುಪಡಿ ಮಾಡಿ ಆದೇಶ ನೀಡಿದೆ. ಈಗಾಗಲೇ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಕೈ ಸೇರಿವೆ. ವಿವಾದಗಳು-ವಾದಗಳು ಎಲ್ಲವೂ ಮುಗಿದಿದೆ. ಇನ್ನಾದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲರೂ ಪಠ್ಯಪುಸ್ತಕಗಳ ಬಗ್ಗೆ ಮೌನವಾಗಿರುವುದು ಒಳ್ಳೆಯದು ಎಂದು ತಿಳಿಸಿದ್ದಾರೆ.