ಮೈಸೂರು: ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಮುಸ್ಲಿಂ ಬಾಂಧವರು ಭಾವೈಕ್ಯತೆಯನ್ನು ಮೆರೆದಿದ್ದಾರೆ.
ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಗ್ರಾಮದಲ್ಲಿ ಬಸವ ಜಯಂತಿಯನ್ನು ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಬಸವಣ್ಣನವರ ಪ್ರತಿಮೆ ಮೆರವಣಿಗೆ ಮಾಡುವಾಗ ಮಸೀದಿ ಬಳಿ ಬಂದ ಬಸವಣ್ಣನವರ ಪ್ರತಿಮೆ ಮತ್ತು ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರವನ್ನು ಅದ್ದೂರಿಯಾಗಿ ಮುಸ್ಲಿಂ ಬಾಂಧವರು ಬರಮಾಡಿಕೊಂಡರು.
ಮಸೀದಿಯ ಗುರುಗಳಾದ ನೂರುಲ್ಲಾ ನಾಸಿರ್ ಅಹಮದ್ ಬಸವಣ್ಣ ಮತ್ತು ಶಿವಕುಮಾರ ಸ್ವಾಮೀಜಿಯವರಿಗೆ ಪುಷ್ಪ ನಮನ ಸಲ್ಲಿಸಿ ವಿಶೇಷ ಪೂಜೆ ಮಾಡಿ ಸ್ಮರಿಸಿದ್ದಾರೆ.
ಬಸವಣ್ಣನ ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಹಣ್ಣು ಹಂಪಲು ವಿತರಣೆ, ಮಜ್ಜಿಗೆ ಪಾನಕ ನೀಡಿ ಅವರನ್ನು ಸತ್ಕರಿಸಲಾಯಿತು.
ಲಿಂಗಾಯಿತರು ಮತ್ತು ಮುಸ್ಲಿಮರು ಒಂದೇ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮುಸಿದ್ ಅಹಮದ್, ಗ್ರಾಮ ಪಂಚಾಯತಿ ಸದಸ್ಯರಾದ ಅನ್ಸರ್ ಅಹಮದ್, ಪ್ರತಾಪ್ ಜಾವಿದ್ ಅಹಮದ್, ಅನ್ಸರ್, ರಫಿ ಅಹಮದ್, ಇಕ್ಬಾಲ್ ಅಹಮದ್, ಫಾರೂಕ್ ಅಹಮದ್, ಪುಟ್ಟಪ್ಪ ಮಂಜುನಾಥ್ ಪರ್ವತಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.