ನಂಜನಗೂಡು: ಕಾವೇರಿ ವಿಚಾರದಲ್ಲಿ ಬಹಳ ಸೂಕ್ಷ್ಮವಾಗಿರಬೇಕು ಸಂಸದರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿಂತ್ಕೊಳ್ಳಿ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಆಗ್ರಹಿಸಿದರು.
ನಂಜನಗೂಡು ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಕರ್ನಾಟಕ, ಕೇರಳ, ತಮಿಳುನಾಡಿಗೆ ಸಂಬಂಧಪಟ್ಟಿದೆ. ಸರಿಯಾದ ಪ್ರಮಾಣದಲ್ಲಿ ಮಳೆಯಾದರೆ ಯಾರಿಗೂ ಸಮಸ್ಯೆ ಆಗುವುದಿಲ್ಲ.
ತಮಿಳುನಾಡು ಕೇಳುವ ಮುಂಚೆ ಸಿದ್ದರಾಮಯ್ಯರವರು ರಾತ್ರೋರಾತ್ರಿ ನೀರು ಹರಿಸಿದ್ದಾರೆ. ಇದು ಬಹಳ ಕೆಟ್ಟ ಸಂಗತಿ. ಇಂಡಿಯಾ ಒಕ್ಕೂಟ ಮಾಡಿಕೊಳ್ಳಲು ಸ್ಟಾಲಿನ್ ಬೇಕು ಅನ್ನುವ ಕಾರಣಕ್ಕೆ ಸ್ಟಾಲಿನ್ ಮುಖ್ಯಮಂತ್ರಿ ಆಗುವಾಗ ರಾಹುಲ್ ಗಾಂಧಿಗೆ ಫೋನ್ ಮಾಡಿ ರೆಕಮೆಂಡ್ ಮಾಡಿದ್ದರು. ಇದು ಕನ್ನಡಿಗರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ.
ರಾತ್ರೋರಾತ್ರಿ ನೀರು ಬಿಟ್ಟು ನೀವು ಚೆನ್ನಾಗಿದ್ದೀರಾ, ಕದ್ದು ಮುಚ್ಚಿ ನೀರು ಬಿಟ್ಟಿದ್ದೀರಿ? ಅವರು ಕೇಳಿದಕ್ಕಿಂತ ಹೆಚ್ಚು ನೀರನ್ನು ಹರಿಸಿದ್ದೀರಿ ಇಂತಹ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳನ್ನು ಮಧ್ಯ ಪ್ರವೇಶಿಸಿ ಎಂದು ಕೇಳುತ್ತಿರುವುದು ಯಾಕೆ?
ನೀವು ನೀರು ಬಿಡಲಿಲ್ಲ ಎಂದರೆ ಪ್ರಧಾನಿಗಳು ಮಧ್ಯ ಪ್ರವೇಶ ಮಾಡಬಹುದಿತ್ತು. ಸಂಸದರು ಮೊದಲು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿಂತ್ಕೊಳ್ಳಿ, ರಾಜ್ಯ ಸರ್ಕಾರ ಸಂಸದರನ್ನು ಕೇಳದೆ ಹೇಗೆ ನೀರು ಬಿಡ್ತು. ಮೇಕೆದಾಟು ಯೋಜನೆಯನ್ನು ಮಾಡುತ್ತೇವೆ ಎಂದು ಬಂದ್ರು ಆದರೆ, ಈಗ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ.
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲದೆ ಸೊರಗಿ ಹೋಗಿದೆ ಇನ್ನು ಐದು ವರ್ಷ ರಾಜ್ಯದಲ್ಲಿ ಮಳೆ ಬಂದರೂ ಬರಗಾಲ ಉಂಟಾಗುತ್ತದೆ ಎಂದು ಹೇಳಿದರು.