ಮೈಸೂರು: ಹೆಚ್.ಡಿ.ಕೋಟೆ ಬಳ್ಳೆ ಆನೆ ಶಿಬಿರದಿಂದ ನಾಪತ್ತೆಯಾಗಿದ್ದ ಸಾಕಾನೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಬಳ್ಳೆ ಆನೆ ಶಿಬಿರದಲ್ಲಿ ಕುಮಾರಸ್ವಾಮಿ ಎಂಬ ಸಾಕಾನೆಯಿತ್ತು. ಆದರೆ ಅದು ಕೆಲವು ದಿನಗಳ ಹಿಂದೆ ಶಿಬಿರದಿಂದ ಹೊರ ಹೋಗಿದ್ದು ಮರಳಿ ಬಾರದೆ ನಾಪತ್ತೆಯಾಗಿತ್ತು. ಅರಣ್ಯ ಸಿಬ್ಬಂದಿಗಳು ಇದರ ಹುಡುಕಾಟ ನಡೆಸಿದ್ದರಾದರೂ ಅದು ಪತ್ತೆಯಾಗಿರಲಿಲ್ಲ. ಹೀಗಾಗಿ ಹುಡುಕಾಟ ನಿಲ್ಲಿಸಿದ್ದರು.
ಈ ನಡುವೆ ಕೇರಳ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕಬಿನಿ ಹಿನ್ನೀರು ಪ್ರದೇಶದಲ್ಲಿ ಕೊಳೆತ ವಾಸನೆ ಬಂದ ಹಿನ್ನಲೆಯಲ್ಲಿ ಸೋಮವಾರ ಸಿಬ್ಬಂದಿ ಅತ್ತ ಹೋಗಿ ನೋಡಿದಾಗ ನಾಪತ್ತೆಯಾಗಿದ್ದ ಕುಮಾರಸ್ವಾಮಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಈ ಆನೆ 46 ವರ್ಷ ಪ್ರಾಯದ್ದಾಗಿದ್ದು, ಈ ಹಿಂದೆ ಹಾಸನದಲ್ಲಿ ಸೆರೆ ಹಿಡಿದು ಪಳಗಿಸಲಾಗಿತ್ತು.