ಮೈಸೂರು: ಜೆಡಿಎಸ್ ಪಕ್ಷದವರಿಗೆ ಚುನಾವಣಾ ಸಮಯದಲ್ಲಿ ಮಾತ್ರ ಕಾವೇರಿ ವಿಚಾರ ನೆನಪಿಗೆ ಬರುತ್ತದೆಯೇ ಹೊರತು ಬೇರೆ ದಿನಗಳಲ್ಲಿ ಜ್ಞಾಪಕಕ್ಕೆ ಬರುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನದಿ ವಿಚಾರದ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೀಡಿರುವ ಹೇಳಿಕೆ ಬಹಳ ಬಾಲಿಶವಾಗಿದೆ. ಅವರೇ ಪ್ರಧಾನಿಯಾಗಿದ್ದ ಸಮಯದಲ್ಲಿ ಈ ಸಮಸ್ಯೆ ಪರಿಹಾರ ಮಾಡಬಹುದಾಗಿತ್ತು. ಆದರೆ ಅವರು ಹಾಗೆ ಮಾಡದೇ ಈಗ ವಿಚಾರವನ್ನು ಭಾವನಾತ್ಮಕವಾಗಿ ಪ್ರಸ್ತಾಪಿಸುತ್ತಿದ್ದಾರೆ. ಇದನ್ನು ಗಮನಿಸಿದರೆ ಕಾವೇರಿ ವಿಚಾರ ಜೀವಂತವಾಗಿ ಇರಬೇಕು ಎನ್ನುವುದು ಅವರ ದೃಷ್ಟಿಕೋನವಾಗಿದೆ. ಜನರು ಇಂತಹ ವಿಚಾರಗಳನ್ನು ಕೇಳಿ-ಕೇಳಿ ಬೇಜಾರಾಗಿದ್ದೂ, ನಿಮ್ಮ ವಿರುದ್ಧ ತಮ್ಮ ಅಭಿಪ್ರಾಯ ತಿಳಿಸುತ್ತಾರೆ ಎಂದರು.
ಜೆಡಿಎಸ್ ಪಕ್ಷದವರು ಒಂದು ರೀತಿ ಬಿಜೆಪಿಯ ಪ್ರಣಾಳಿಕೆಯಂತೆ. ಏಕೆಂದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದನ್ನೂ ಅನುಷ್ಠಾನಕ್ಕೆ ತರುವುದೇ ಇಲ್ಲ. ಅದೇ ರೀತಿ ಜೆಡಿಎಸ್ ನವರು ಬರೀ ಸುಳ್ಳುಗಳನ್ನೇ ಹೇಳುತ್ತಾರೆ. ಲೋಕಾಸಭಾ ಚುನಾವಣೆಯ ನಂತರವೂ ಮೈತ್ರಿ ಮುಂದುವರೆಯುತ್ತದೆ ಎಂದು ಜೆಡಿಎಸ್ನವರು ಹೇಳಿಕೆ ಕೊಟ್ಟಿದ್ದಾರೆ. ಮೈತ್ರಿ? ಮುಂದುವರೆಯುತ್ತದೋ ಅಥವಾ ವಿಲಿನವಾಗುತ್ತಾರೋ ಎನ್ನುವುದು ಆ ಪಕ್ಷಗಳ ಮುಖಂಡರೇ ಹೇಳಬೇಕು ಎಂದು ಕಟಕಿಯಾಡಿದರು.
ಕೇಂದ್ರದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಚುನಾವಣೆಗೆ ನಿಲ್ಲಲು ನನ್ನ ಬಳಿ ಹಣವಿಲ್ಲ ಎಂದು ಹೇಳಿರುವುದನ್ನು ನೋಡಿದರೆ ಬಿಜೆಪಿಯಲ್ಲಿ ಹಣವಿದ್ದವರಿಗೆ ಮಾತ್ರ ಮಹತ್ವ ಕೊಡಲಾಗುತ್ತದೆ. ಹಣವಿದ್ದರೆ ಮಾತ್ರ ಚುನಾವಣೆ ಎನ್ನುವ ಅರ್ಥ ಬರುತ್ತದೆ. ಅಲ್ಲದೇ ಜನ ನಮಗೆ ಈ ಸಲ ಆಶೀರ್ವಾದ ಮಾಡುವುದಿಲ್ಲ. ನಾವು ಜನರ ವಿಶ್ವಾಸ ಕಳೆದುಕೊಂಡಿದ್ದೇವೆ ಎಂದು ನಿರ್ಮಲ ಅವರಿಗೆ ಅರಿವಾಗಿದೆ. ಆದ್ದರಿಂದಲೇ ಅವರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ ಎಂದರು.
ನಾವು ಗ್ಯಾರಂಟಿ ಕಾರ್ಡ್ ನೀಡಿದಾಗ, ಯಾರ ಹೆಸರನ್ನು ವೈಯಕ್ತಿವಾಗಿ ಹೇಳದೇ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಎಂದು ಹೇಳಿದ್ದೆವು. ಆದರೆ ಈಗ ಬಿಜೆಪಿಯವರು ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಒಂದು ರಾಷ್ಟ್ರೀಯ ಪಕ್ಷವಾಗಿ ಹೆಸರನ್ನು ಹೇಳಿಕೊಳ್ಳಲಾಗದಷ್ಟು ಹೀನಾಯ ಸ್ಥಿತಿಗೆ ಬಿಜೆಪಿ ತಲುಪಿದೆ. ಬಿಜೆಪಿಗೆ ಮತ ನೀಡಿ ಎನ್ನದೇ ಮೋದಿಗೆ ಮತ ನೀಡಿ ಎನ್ನುತ್ತಿರುವುದನ್ನು ನೋಡಿದರೆ ಆ ಪಕ್ಷದ ರಾಜಕೀಯ ನೈತಿಕತೆಯನ್ನು ಪ್ರಶ್ನೆ ಮಾಡಬೇಕಾಗಿದೆ ಎಂದರು.
ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಜಾಲತಾಣದ ವಕ್ತಾರ ಜಿ.ವಿ.ಸೀತಾರಾಂ, ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಮೇಯರ್ ಬಿ.ಕೆ.ಪ್ರಕಾಶ್, ಮುಖಂಡರಾದ ಲೋಕೇಶ್, ಶಿವನಾಗಪ್ಪ ಹಾಜರಿದ್ದರು.