ಕೆ.ಆರ್.ಪೇಟೆ: ವಿಧಾನಸಭಾ ಕ್ಷೇತ್ರದ ಗ್ರಾ.ಪಂ ಚುನಾವಣೆಯಲ್ಲಿ ವಿಜೇತ, ಪರಾಜಿತ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಸಚಿವ ನಾರಾಯಣಗೌಡರು ಟಿವಿಗಳನ್ನು ವಿತರಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು ನಾನು ಮತ್ತು ನನ್ನ ಮಕ್ಕಳ ದುಡಿದಂಥ ಹಣದಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ವಿಜೇತ, ಪರಾಜಿತರಾದ ಎಲ್ಲಾ ಅಭ್ಯರ್ಥಿಗಳಿಗೆ ಟಿವಿಗಳನ್ನು ಉಡುಗೊರೆ ನೀಡಲು ನಿರ್ಧರಿಸಿದ್ದು, ಸಂತೆಬಾಚಹಳ್ಳಿ ಹಾಗೂ ಶೀಳನೆರೆ ಹೋಬಳಿ ವ್ಯಾಪ್ತಿಯವರಿಗೆ ವಿತರಿಸಿದ್ದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್- ಜೆಡಿಎಸ್ ಭದ್ರಕೋಟೆ ಎನ್ನುತ್ತಿದ್ದ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿ ಅತಿ ಹೆಚ್ಚು ಜನರು ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆ ಆಗಿದ್ದರು. ಅಂದಿನಿಂದಲೂ ಗೆದ್ದ ಹಾಗೂ ಸೋತ ಎಲ್ಲರಿಗೂ ಏನಾದರೂ ಉಡುಗೊರೆ ನೀಡಬೇಕು ಎಂದು ಬಯಸಿದ್ದೆ. ಆದರೆ, ಕಾಲ ಕೂಡಿ ಬಂದಿರಲಿಲ್ಲ. ಆದರೆ ಇವತ್ತು ಸಮಯ ಬಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಅರವಿಂದ್ ಪರಮೇಶ್, ಉಪಾಧ್ಯಕ್ಷ ಪುಟ್ಟಣ್ಣ, ಕಾರ್ಯದರ್ಶಿ ಪ್ರಕಾಶ್, ತಾಲೂಕು ಬಿಜೆಪಿ ಮಹಿಳಾ ಅಧ್ಯಕ್ಷ ಲತಾ ಮುರುಳಿಧರ್, ಉಪಾಧ್ಯಕ್ಷ ಚಂದ್ರಕಲಾ, ಜಿಲ್ಲಾ ಕಾಪ್ಕಾಮ್ಸ್ ಅಧ್ಯಕ್ಷ ಕೆಜಿ ತಮ್ಮಣ್ಣ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಂಬರೀಶ್, ಗುತ್ತಿಗೆದಾರ ಪರಮೇಶ್, ಆಘಲಯ ಮಂಜಣ್ಣ, ಕೈಗೋನಹಳ್ಳಿ ಕುಮಾರ್, ಹೆತ್ತಕೊನಹಳ್ಳಿ ಕುಮಾರ್, ಕರ್ತನಹಳ್ಳಿ ಸುರೇಶ್,ಸಚಿವರ ಆಪ್ತ ಸಹಾಯಕ ದಯಾನಂದ್, ಜಗದೀಶ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.