ಕೆ.ಆರ್.ನಗರ: ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿಯವರ ಕೆಲವು ತೀರ್ಮಾನಗಳಿಂದ ಹಲವು ಶಾಸಕರು ಮತ್ತು ಪ್ರಭಾವಿ ಮುಖಂಡರು ಆ ಪಕ್ಷಗಳನ್ನು ತೊರೆದು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ ಇದರಿಂದ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಗರುಡಗಂಭ ವೃತ್ತದಲ್ಲಿ ಪಂಚರತ್ನ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು 123 ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಲಿದ್ದು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಆದ್ದರಿಂದ ಈ ಕ್ಷೇತ್ರದ ಅಭಿವೃದ್ದಿಗಾಗಿ ಜೆಡಿಎಸ್ ಬೆಂಬಲಿಸಬೇಕು ಎಂದರು.
ಕೇವಲ 14 ತಿಂಗಳ ಅಧಿಕಾರವಧಿಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಮೇ.10ರಂದು ನಡೆಯುವ ಚುನಾವಣೆಯಲ್ಲಿ ನಾಡಿನ ಜನತೆಯ ಆಶೀರ್ವಾದದಿಂದ ಅಧಿಕಾರಕ್ಕೆ ಬರಲಿರುವ ನಮ್ಮ ಪಕ್ಷ ಐದು ವರ್ಷಗಳ ಕಾಲ ಉತ್ತಮ ಆಡಳಿತ ನೀಡಲಿದೆ ಎಂದು ಹೇಳಿದ ಮಾಜಿ ಮುಖ್ಯಮಂತ್ರಿಗಳು ನಾವು ಈಗಾಗಲೇ ಘೋಷಣೆ ಮಾಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ತಿಳಿಸಿದರು.
ಶಾಸಕ ಸಾ.ರಾ.ಮಹೇಶ್ರವರು ಅತ್ಯುತ್ತಮ ಜನಪ್ರತಿನಿಧಿಯಾಗಿದ್ದು ಇವರ ಸೇವೆ ಮತ್ತು ಅಭಿವೃದ್ದಿ ಕಾರ್ಯವನ್ನು ಪರಿಗಣಿಸಿ, ಜಾತಿ ತಾರತಮ್ಯ ಮಾಡದೆ ಕೆ.ಆರ್.ನಗರ ಕ್ಷೇತ್ರದ ಸರ್ವ ಜನಾಂಗದವರು ಬೆಂಬಲಿಸಬೇಕು ಎಂದು ಮನವಿ ಮಾಡಿದಲ್ಲದೆ ಐದು ವರ್ಷಗಳ ಕಾಲ ಸಾ.ರಾ.ಮಹೇಶ್ ಸಚಿವರಾಗಲಿದ್ದಾರೆ, ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಸಮಗ್ರ ಅಭಿವೃದ್ದಿಗಾಗಿ ಇವರಿಗೆ ಮತ ನೀಡಬೇಕು ಎಂದು ಕೋರಿದರು.
ಹೆಲಿಕ್ಯಾಪ್ಟರ್ ಮೂಲಕ ಪಟ್ಟಣದ ಕ್ರಿಡಾಂಗಣಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರನ್ನು ತೆರದ ವಾಹನದಲ್ಲಿ ಗರುಡಗಂಭ ವೃತ್ತದ ಮೂಲಕ ವಿವಿ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ವಿವಿಧ ಹಣ್ಣಿನ ಹಾರಗಳನ್ನು ಹಾಕಿದಲ್ಲದೆ ಜೆಸಿಬಿ ಮೂಲಕ ಹೂವಿನ ಮಳೆ ಸುರಿಸಿ ಸಂಭ್ರಮಿಸಿದರು. ನವ ನಗರ ಅರ್ಬನ್ ಬ್ಯಾಂಕ್ನ ಕೇಂದ್ರ ಕಚೇರಿಯಲ್ಲಿರುವ ಎಸ್.ನಂಜಪ್ಪನವರ ಪುತ್ಥಳಿಗೆ ಮಾಜಿ ಮುಖ್ಯಮಂತ್ರಿಗಳು ಮಾರ್ಲಾಪಣೆ ಮಾಡಿ ಗೌರವ ಸಲ್ಲಿಸಿದರು.
ಆ ನಂತರ ಪಂಚರತ್ನ ಯಾತ್ರೆ ಹೆಬ್ಬಾಳು, ಶ್ರೀರಾಮಪುರ, ಚುಂಚನಕಟ್ಟೆ, ಹನಸೋಗೆ, ಕರ್ತಾಳು, ಹೆಬ್ಸೂರು, ಹರದನಹಳ್ಳಿ, ಸಾಲಿಗ್ರಾಮ, ಅಂಕನಹಳ್ಳಿ, ನಾಟನಹಳ್ಳಿ, ಮಿರ್ಲೆ, ಭೇರ್ಯ, ಹೊಸಅಗ್ರಹಾರ, ಕಗ್ಗೆರೆ, ತಿಪ್ಪೂರು, ಲಾಳಂದೇವನಹಳ್ಳಿ ಗ್ರಾಮಗಳಲ್ಲಿ ಸಂಚರಿಸಿ ಪಕ್ಷದ ಅಭ್ಯರ್ಥಿ ಸಾ.ರಾ.ಮಹೇಶ್ ಪರ ಪ್ರಚಾರ ನಡೆಸಲಾಯಿತು.
ಶಾಸಕ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಚಿನ್ನೀರವಿ, ತಾಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಕುಮಾರ್, ಯುವ ಘಟಕದ ಅಧ್ಯಕ್ಷ ಡಿ.ಎಸ್.ಯೋಗೀಶ್, ಪುರಸಭೆ ಸದಸ್ಯರಾದ ಸಂತೋಷ್ಗೌಡ, ಮಂಜುಳಚಿಕ್ಕವೀರು, ಮಾಜಿ ಸದಸ್ಯರಾದ ಕೆ.ಆರ್.ಗಿರೀಶ್, ಸಿರಾಜ್, ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಮೂಳೆ ತಜ್ಞ ಡಾ.ಮೆಹಬೂಬ್ಖಾನ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಮುಖಂಡರಾದ ಚಂದ್ರಶೇಖರ್, ಎಂ.ಟಿ.ಅಣ್ಣೇಗೌಡ, ಎಂ.ಎಸ್.ಕಿಶೋರ, ಎಲ್.ಎಸ್.ಮಹೇಶ್, ಕುಪ್ಪೆನವೀನ್ ಸೇರಿದಂತೆ ನೂರಾರು ಮಂದಿ ಹಾಜರಿದ್ದರು.