ಹುಣಸೂರು: ದಲಿತರಿಗೆ ಕ್ಷೌರ ಮಾಡಲ್ಲ ಎನ್ನುವುದು ಸುಳ್ಳು ಆರೋಪವಾಗಿದ್ದು, ಗ್ರಾಮದ ಹೆಸರಿಗೆ ಕಳಂಕ ತರಲು ಕೆಲವರು ಆರೋಪ ಮಾಡಿದ್ದಾರೆ ಎಂದು ಗಾವಡಗೆರೆ ಹೋಬಳಿಯ ಗ್ರಾಮಸ್ಥರು ಹೇಳಿದ್ದಾರೆ.
ದಲಿತರಿಗೆ ಗ್ರಾಮದಲ್ಲಿ ಕ್ಷೌರ ಮಾಡುವುದಿಲ್ಲ ಎಂಬ ದೂರಿನನ್ವಯ ತಾಲೂಕು ಅಧಿಕಾರಿಗಳು ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರು ಹಾಗೂ ದಲಿತ ಮುಖಂಡರ ಸಭೆ ನಡೆಸಿ ಸಮಸ್ಯೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ ವೇಳೆ ಗ್ರಾಮಸ್ಥರು ಈ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಮೈಸೂರಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಎಸ್.ಟಿ., ಎಸ್.ಸಿ. ದೌರ್ಜನ್ಯತಡೆ ಸಮಿತಿ ಸಭೆಯಲ್ಲಿ ಹಲವು ಗ್ರಾಮಗಳಲ್ಲಿ ಇಂದಿಗೂ ದಲಿತರಿಗೆ ಕ್ಷೌರ ಮಾಡುವುದಿಲ್ಲ ಎಂದು ಸಮಿತಿ ಸದಸ್ಯರು ಸಭೆಯಲ್ಲಿ ದೂರಿದ್ದರು. ಈ ಹಿನ್ನಲೆಯಲ್ಲಿ ಹುಣಸೂರು ತಾಲೂಕಿನ ತಹಸೀಲ್ದಾರ್ ಡಾ. ಅಶೋಕ್ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ. ಗಿರೀಶ್ ಸಮಾಜ ಕಲ್ಯಾಣಧಿಕಾರಿ ರೇಣುಕಾಪ್ರಸಾದ್ ಅವರು ಸಭೆ ನಡೆಸಿ ದಲಿತ ಮುಖಂಡರ ಹೇಳಿಕೆ ಪಡೆದ ಸಂದರ್ಭ ಗ್ರಾಮಸ್ಥರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಸಭೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಮಾತನಾಡಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡುವುದಿಲ್ಲ ಎಂಬ ಎಂಬ ದೂರಿನನ್ವಯ ಅಂಗಡಿ ಮಾಲೀಕರು ನಾಮಫಲಕ ಅಳವಡಿಸಿ ಜಾತಿ ಜನಾಂಗ ಎನ್ನದೆ ಪ್ರತಿ ಜನಾಂಗಕ್ಕೂ ಕ್ಷೌರ ಮಾಡಬೇಕು. ಇಲ್ಲದಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ದಲಿತ ಮುಖಂಡ ಪಾಪಣ್ಣ ಮಾತನಾಡಿ ನಾವು ಮತ್ತು ಇತರೆ ಜನಾಂಗದವರು ಅಣ್ಣ-ತಮ್ಮಂದಿರಂತೆ ಇದ್ದೇವೆ ಜೊತೆಗೆ ಗ್ರಾಮದಲ್ಲಿ ಪ್ರತಿಯೊಂದು ಜನಾಂಗಕ್ಕೂ ಕ್ಷೌರ ಮಾಡುತ್ತಿದ್ದು, ನಮ್ಮ ಮತ್ತು ಇತರೆ ಜನಾಂಗದ ಬಾಂಧವ್ಯ ಹಾಳು ಮಾಡುತ್ತಿದ್ದಾರೆ ಕಳೆದ ಮೂರು ವರ್ಷಗಳಿಂದಲೂ ನಾವು ಹೇಳಿಕೆ ನೀಡುತ್ತಿದ್ದೇವೆ ಅಧಿಕಾರಿಗಳು ಕಿಡಿಗೇಡಿಗಳ ಮಾತಿಗೆ ಕಿವಿಗೊಡದೆ ಸಾಮರಸ್ಯದಿಂದ ಬದುಕಲು ಬಿಡಿ ಎಂದು ಹೇಳಿದರು.
ಗ್ರಾಮದ ಹಿರಿಯರಾದ ಜಯರಾಮೇಗೌಡ ಮಾತನಾಡಿ ಗ್ರಾಮದ ಹೆಸರಿಗೆ ಕಳಂಕ ತರಲು ಈ ರೀತಿ ಪ್ರತಿವ? ಹೇಳುತ್ತಿದ್ದಾರೆ ಸಮಿತಿಯಲ್ಲಿ ದೂರು ನೀಡಿರುವ ವ್ಯಕ್ತಿ ಒಂದು ದಿನ ಗ್ರಾಮಕ್ಕೆ ಭೇಟಿ ನೀಡಿ ಸತ್ಯಾಸತ್ಯತೆಯನ್ನು ಅರಿಯದೆ ಅಣ್ಣ-ತಮ್ಮಂದಿರಂತೆ ಇರುವ ನಾವು ಜಾತಿ ಸಂಘ?ಕ್ಕೆ ಎಡೆ ಮಾಡಿಕೊಡುತ್ತಿದ್ದಾರೆ ಕೂಡಲೇ ಇಂತಹ ವ್ಯಕ್ತಿಗಳನ್ನು ಸಮಿತಿ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದರು.
ಕ್ಷೌರ ಅಂಗಡಿ ಮಾಲೀಕ ವೆಂಕಟೇಶ್ ಮಾತನಾಡಿ ನಾವು ಯಾವುದೇ ಜನಾಂಗದವರು ಬಂದರೂ ನಾವು ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ. ಪ್ರತಿವರ್ಷ ನಮ್ಮ ಅಂಗಡಿಗಳ ಮೇಲೆ ದೂರು ನೀಡುತ್ತಿರುವುದು ಸರಿಯಲ್ಲ ನಾವು ಪ್ರತಿ ಅಂಗಡಿಗಳಲ್ಲಿ ಸರ್ವಜನಾಂಗದವರಿಗೂ ಕ್ಷೌರ ಮಾಡಲಾಗುವುದು ಎಂದು ನಾಮಫಲಕ ಹಾಕಿಕೊಂಡಿದ್ದೇವೆ ಆದರೂ ಸುಳ್ಳು ದೂರು ನೀಡಿ ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜವರೇಗೌಡ, ಪಿಡಿಒ ಶ್ರೀನಿವಾಸ್, ಕಂದಾಯ ನಿರೀಕ್ಷಕ ಭಾಸ್ಕರ್, ಗ್ರಾಮಲೆಕ್ಕಿಗ ವಿಜಯಕುಮಾರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ್, ದಲಿತ ಮುಖಂಡರಾದ ಪುಟ್ಟರಾಜು, ಸ್ವಾಮಿ, ಗ್ರಾಮದ ಮುಖಂಡರಾದ ವೇಣುಗೋಪಾಲ್, ಗಿರೀಶ್, ಸ್ವಾಮಿಗೌಡ, ನವೀನ್, ಯೋಗೇಗೌಡ, ಕುಮಾರ್, ಮಾಜಿಸತೀಶ್ ಹಲವು ಮುಖಂಡರು ಇದ್ದರು.